ADVERTISEMENT

‘ಭಲೆ ಹುಡುಗ‘: ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸುವ ಸಿನಿಮಾ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 23:55 IST
Last Updated 27 ಸೆಪ್ಟೆಂಬರ್ 2024, 23:55 IST
ಚಿತ್ರದಲ್ಲಿ ಮಕ್ಕಳು
ಚಿತ್ರದಲ್ಲಿ ಮಕ್ಕಳು   

ಭರತ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ರವಿಚಂದ್ರ ಹಾಗೂ ಭೀಮರಾಜ್ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ನೂತನ ಚಿತ್ರ ಭಲೆ ಹುಡುಗ.

ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸುವ ಹುಡುಗನೊಬ್ಬನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಚಿತ್ರದುರ್ಗದ ಎಂ.ನಿಂಗರಾಜು ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಬುದ್ದಿವಂತ ಮಕ್ಕಳು ಹಾಗೂ ಹಳ್ಳಿಯ ಜನರ ಸುತ್ತ ನಡೆಯುವ ಕಥಾಹಂದರ ಹೊಂದಿರುವ ಭಲೆ ಹುಡುಗ ಚಿತ್ರದಲ್ಲಿ ನಿರ್ದೇಶಕ ನಿಂಗರಾಜು ಅವರ ಪುತ್ರ ಶರತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬರುವ ಅಕ್ಟೋಬರ್ ರಜೆಯಲ್ಲಿ ಈ ಚಿತ್ರದ ಶೂಟಿಂಗ್ ಪ್ರಾರಂಭಿಸಿ, ಚಿತ್ರದುರ್ಗ, ಚಂದವಳ್ಳಿ, ನಂದಿ ಗಿರಿಧಾಮದ‌ ಸುತ್ತ ಮುತ್ತ ಒಂದು ತಿಂಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗುತ್ತಿದೆ.
ಕೇವಲ‌ 12 ವರ್ಷದ ಹುಡುಗನೊಬ್ಬ ತನ್ನ ಹಳ್ಳಿಯಲ್ಲಿ ನಡೆಯುತ್ತಿರುವ ಅರಾಜಕತೆಯ ವಿರುದ್ಧ ತಿರುಗಿ ಬೀಳುತ್ತಾನೆ, ಅಲ್ಲದೆ ಹಳ್ಳಿಯ ಜನರಲ್ಲಿ ಬೇರೂರಿದ್ದ ಮೂಢನಂಬಿಕೆಯ ಬಗ್ಗೆ ಅರಿವು ಮೂಡಿಸುತ್ತಾನೆ. ಮತ್ತು ದುಶ್ಚಟಗಳಿಗೆ ದಾಸರಾಗಿರುವ ಹಳ್ಳಿಯ ಜನರನ್ನು ಜಾಗೃತಗೊಳಿಸುವಲ್ಲಿ ಆತ ಹೇಗೆಲ್ಲಾ ಹೋರಾಟ ನಡೆಸುತ್ತಾನೆ. ಗ್ರಾಮದ ಜನರ ಪಾಲಿನ ದೇವರಂತಾಗುವ ಆತ ಎಲ್ಲರಿಂದಲೂ ಭಲೆ ಹುಡುಗ ಎನಿಸಿಕೊಳ್ಳುತ್ತಾನೆ. ಮಕ್ಕಳ ಸಾಹಸಮಯ ಕಥಾವಸ್ತು ಹೊಂದಿರುವ ಈ ಚಿತ್ರಕ್ಕೆ
ಅನಿರುದ್ಧ ಶಾಸ್ತ್ರಿ ಅವರ ಸಂಗೀತ, ಯೋಗರಾಜ ಭಟ್ಟರ ಸಾಹಿತ್ಯ, ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಅವರ ಸಾಹಸ, ಮಲ್ಲಿ ಅವರ ಸಂಕಲನ, ಮೋಹನ್ ಕುಮಾರ್ ಪ್ರಸಾದನ, ಆರ್.ಕೆ.ಗಾಂಧಿ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿರಲಿದೆ.

ADVERTISEMENT

ಮಾಸ್ಟರ್ ಶರತ್, ಮಾಸ್ಟರ್ ಘನಶ್ಯಾಮ್, ಬೇಬಿ ಜಯಲಲಿತ, ಮಾಸ್ಟರ್ ಅಂಜನ್, ಬಲರಾಂ, ಎಂ ವಿ. ಸಮಯ್, ಜ್ಯೋತಿ ಮರೂರ್, ಡಾ.ಈಶ್ವರ್ ನಾಗನಾಥ ಭಲೆ ಹುಡುಗ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.