‘‘ಎಲ್ಲೆಡೆ ಇಂದು ದಕ್ಷಿಣ ಭಾರತದ ಸಿನಿಮಾಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಉತ್ತರ ಭಾರತದಲ್ಲಿ ‘ಆರ್ಆರ್ಆರ್’, ‘ಪುಷ್ಪ’ ಸಿನಿಮಾಗಳ ನಾಯಕರು ಬಂದರೆ ಬಾಲಿವುಡ್ ನಾಯಕರಿಗಿಂತ ಸಾಕಷ್ಟು ಹೆಚ್ಚು ಜನ ಸೇರುತ್ತಾರೆ. ಯಾಕೆಂದರೆ ಈ ಸಿನಿಮಾಗಳ ನಾಯಕರು ಸಾಮಾನ್ಯರ ಬದುಕಿನ ಪ್ರತಿನಿಧಿ. ಹೀಗಾಗಿ ಜನಸಾಮಾನ್ಯರಿಗೆ ಹೆಚ್ಚು ಆಪ್ಯರಾಗುತ್ತಾರೆ’’ ಎಂದರು ಬಾಲಿವುಡ್ನ ಜನಪ್ರಿಯ ನಟ ಮನೋಜ್ ಬಾಜಪೇಯಿ.
ಮುಂಬೈನಲ್ಲಿ ಜೀ5 ಗ್ಲೋಬಲ್ ಆಯೋಜಿಸಿದ್ದ ‘ಭವಿಷ್ಯದ ದಿನಗಳಲ್ಲಿ ದಕ್ಷಿಣ ಏಷ್ಯಾದ ಮನರಂಜನೆ’ ವಿಚಾರ ಸಂಕೀರ್ಣದಲ್ಲಿ ಅವರು ಮಾತನಾಡಿದರು.
‘ನೈಜ ಕಥೆಗಳು ಇಂದಿನ ಅಗತ್ಯವಾಗಿದೆ. ವೀಕ್ಷಕರ ಮನಸ್ಥಿತಿ ಬದಲಾಗಿದೆ. ಜನ ನಮ್ಮ ನಡುವಿನ ಕಥೆಗಳನ್ನು ಬಯಸುತ್ತಿದ್ದಾರೆ. ಸಿನಿಮಾದ ನಾಯಕ ಕೂಡ ಸಮಾಜದ ಪ್ರತಿನಿಧಿ. ಹೀಗಾಗಿ ಉತ್ತಮ ಕಂಟೆಂಟ್ ಹೊಂದಿದ ಸಿನಿಮಾ, ವೆಬ್ಸಿರಿಸ್ಗಳಿಗೆ ಉತ್ತಮ ಭವಿಷ್ಯವಿದೆ’ ಎಂದು ಅವರು ತಿಳಿಸಿದರು.
ನಟ ಪ್ರತೀಕ್ ಗಾಂಧಿ, ಸಿನಿಮಾ ಪತ್ರಕರ್ತೆ ಅನುಪಮಾ ಚೋಪ್ರಾ, ನಿರ್ಮಾಪಕಿ ಗುನೀತ್ ಮಾಂಗ, ನಿರ್ದೇಶಕ ವಿಶಾಲ್ ಭಾರದ್ವಾಜ್, ಜೀ5 ಗ್ಲೋಬಲ್ ವಹಿವಾಟು ಮುಖ್ಯಸ್ಥೆ ಅರ್ಚನಾ ಆನಂದ್ ವಿಚಾರ ಸಂಕೀರ್ಣದಲ್ಲಿ ಭಾಗಿಯಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಜೀ5 ಆ್ಯಡ್ ಆನ್ ಬಿಡುಗಡೆ:
ಇದೇ ವೇಳೆ ಅಮೆರಿಕದ ವೀಕ್ಷಕರಿಗಾಗಿ ‘ಜೀ5 ಗ್ಲೋಬಲ್ ಆ್ಯಡ್ ಆನ್’ ಒಟಿಟಿ ವೇದಿಕೆಯನ್ನು ಬಿಡುಗಡೆಗೊಳಿಸಲಾಯಿತು. ‘‘ಅಮೆರಿಕದಲ್ಲಿ ಭಾರತೀಯ ಕಂಟೆಂಟ್ಗಳಿಗೆ ಬಹು ಬೇಡಿಕೆ ಇದೆ. ಹೀಗಾಗಿ ಜೀ5 ಅಲ್ಪ ಅವಧಿಯಲ್ಲಿ ಅಮೆರಿಕದಲ್ಲಿ ದಕ್ಷಿಣ ಏಷ್ಯಾದ ನಂಬರ್ ಒನ್ ಮನರಂಜನೆ ವೇದಿಕೆಯಾಗಿ ಹೊರಹೊಮ್ಮಿದೆ. ಕನ್ನಡದ ‘ನಮ್ಮ ಫ್ಲಿಕ್ಸ್’ನಿಂದ ಹಿಡಿದು ಅನೇಕ ಪ್ರಾದೇಶಿಕ ಭಾರತೀಯ ಭಾಷೆಗಳ ಮನರಂಜನೆ ಆ್ಯಪ್ಗಳೊಂದಿಗೆ ಕೈಜೋಡಿಸಿ ನಮ್ಮ ಕಂಟೆಂಟ್ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತೇವೆ’’ ಎಂದರು ಜೀ5 ಗ್ಲೋಬಲ್ ವಹಿವಾಟು ಮುಖ್ಯಸ್ಥೆ ಅರ್ಚನಾ ಆನಂದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.