‘ನೆನಪಿರಲಿ’ ಪ್ರೇಮ್ ನಟನೆಯ ‘ಪ್ರೇಮಂ ಪೂಜ್ಯಂ’ ಸಿನಿಮಾ ಮೂಲಕ ನಾಯಕಿಯಾಗಿ ಚಂದನವನಕ್ಕೆ ಹೆಜ್ಜೆ ಇಟ್ಟ ನಟಿ ಬೃಂದಾ ಆಚಾರ್ಯ ಸದ್ಯ ತಮ್ಮ ಮೂರು ಸಿನಿಮಾಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
ತಮ್ಮ ಸಿನಿ ಬ್ಯಾಂಕ್ ಹಿಗ್ಗಿಸಿಕೊಳ್ಳುತ್ತಿರುವ ಬೃಂದಾ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ದಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಆ ಸಿನಿಮಾದಲ್ಲಿನ ಅವರ ಪಾತ್ರವನ್ನು ಚಿತ್ರತಂಡ ಪರಿಚಯಿಸಿದೆ. ‘ಖುಷಿ ಜಗನ್ನಾಥ್’ ಎಂಬ ಪಾತ್ರದಲ್ಲಿ ಬೃಂದಾ ಕಾಣಿಸಿಕೊಳ್ಳಲಿದ್ದಾರೆ. ಖುಷಿ ಸೋಶಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಎಂದು ಚಿತ್ರತಂಡ ತಿಳಿಸಿದೆ.
‘ಕೌಸಲ್ಯ ಸುಪ್ರಜಾ ರಾಮ’ ಚಿತ್ರದಲ್ಲಿ ‘ಶಿವಾನಿ’ಯಾಗಿ ಮಿಂಚಿದ ಬೃಂದಾ, ಸಚಿನ್ ವಾಲಿ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಸತ್ಯ ಸನ್ ಆಫ್ ಹರಿಶ್ಚಂದ್ರ’ದಲ್ಲಿ ನಿರೂಪ್ ಭಂಡಾರಿಗೆ ಜೋಡಿಯಾಗಿದ್ದಾರೆ. ಈ ಚಿತ್ರದಲ್ಲಿ ನಟಿ ಅಂಕಿತಾ ಅಮರ್ ವರದಿಗಾರ್ತಿಯಾಗಿದ್ದಾರೆ. ಸಾಯಿಕುಮಾರ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಚಿನ್ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದ್ದು, ಸಿನಿಮಾ ಹಾಸ್ಯ ಹಾಗೂ ಸಾಂಸಾರಿಕ ಕಥಾವಸ್ತುವನ್ನು ಹೊಂದಿದೆ. ಸದ್ಯ ಬೃಂದಾ ಕೈಯಲ್ಲಿ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ, ‘ರಾಮಾ ರಾಮಾ ರೇ’ ಖ್ಯಾತಿಯ ಸತ್ಯಪ್ರಕಾಶ್ ನಿರ್ದೇಶನದ ‘ಎಕ್ಸ್ ಆ್ಯಂಡ್ ವೈ’, ಎಸ್.ನಾರಾಯಣ್ ನಿರ್ದೇಶನದ ‘ಒಂದ್ಸಲ ಮೀಟ್ ಮಾಡೋಣ’ ಚಿತ್ರಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.