ADVERTISEMENT

ಮಲೆನಾಡಿನ ‘ಜಲಪಾತ’ ಸಿನಿಮಾಕ್ಕೆ ಚಿತ್ತಾರ ಪ್ರಶಸ್ತಿ ಗರಿ 

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 14:18 IST
Last Updated 18 ಜೂನ್ 2024, 14:18 IST
ಮಲೆನಾಡಿನ ಜಲಪಾತ ಸಿನಿಮಾಕ್ಕೆ ಚಿತ್ತಾರ ಪ್ರಶಸ್ತಿಯನ್ನು ನಿರ್ಮಾಪಕ ರವೀಂದ್ರ ಮತ್ತು ನಿರ್ದೇಶಕ ರಮೇಶ್ ಬೇಗಾರ್, ನಾಯಕ ರಜನೀಶ್, ನಾಯಕಿ ನಾಗಶ್ರೀ ಸ್ವೀಕರಿದರು
ಮಲೆನಾಡಿನ ಜಲಪಾತ ಸಿನಿಮಾಕ್ಕೆ ಚಿತ್ತಾರ ಪ್ರಶಸ್ತಿಯನ್ನು ನಿರ್ಮಾಪಕ ರವೀಂದ್ರ ಮತ್ತು ನಿರ್ದೇಶಕ ರಮೇಶ್ ಬೇಗಾರ್, ನಾಯಕ ರಜನೀಶ್, ನಾಯಕಿ ನಾಗಶ್ರೀ ಸ್ವೀಕರಿದರು   

ಶೃಂಗೇರಿ: ಇಂಡಸ್ ಹರ್ಬ್ಸ್‌ನ ರವೀಂದ್ರ ತುಂಬರಮನೆ ನಿರ್ಮಿಸಿ, ಮಲೆನಾಡಿನ ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿದ ‘ಜಲಪಾತ’ ಸಿನಿಮಾಕ್ಕೆ 2024ರ ಚಿತ್ತಾರ ಸ್ಟಾರ್ ಪ್ರಶಸ್ತಿ ಲಭಿಸಿದೆ.

ಉತ್ತಮ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ವಿಭಾಗದಲ್ಲಿ ಜಲಪಾತ ನಾಮ ನಿರ್ದೇಶನಗೊಂಡಿತ್ತು. ಚಿತ್ರದ ನಾಯಕಿ ನಾಗಶ್ರೀ ಬೇಗಾರ್ ಮೊದಲ ಸಿನಿಮಾದ ಶ್ರೇಷ್ಠ ನಾಯಕಿ ವಿಭಾಗದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು. ಆನ್‍ಲೈನ್ ಮತ ಮತ್ತು ತೀರ್ಪುಗಾರ ತಂಡದ ಮೂಲಕ ಆಯ್ಕೆ ಪ್ರಕ್ರಿಯೆ ನಡೆದಿತ್ತು.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ಗ್ರ್ಯಾಂಡ್‌ ಸಭಾಂಗಣದಲ್ಲಿ ಚಿತ್ತಾರ ಸಿನಿ ಮ್ಯಾಗಜಿನ್ ಕಲರ್ಸ್ ಕನ್ನಡ ಸಹಯೋಗದಲ್ಲಿ ಆಯೋಜಿಸಿದ್ದ ಚಂದನವನ ಸಂಭ್ರಮ ಕಾರ್ಯಕ್ರಮದಲ್ಲಿ ನಿರ್ದೇಶಕ ಮನ್ಸೋರೆ ಪ್ರಶಸ್ತಿ ಪ್ರದಾನ ಮಾಡಿದರು.

ADVERTISEMENT

ಜಲಪಾತ ಸಿನಿಮಾ ತಂಡದ ಪರವಾಗಿ ನಿರ್ಮಾಪಕ ರವೀಂದ್ರ, ನಿರ್ದೇಶಕ ರಮೇಶ್ ಬೇಗಾರ್, ನಾಯಕ ರಜನೀಶ್, ನಾಯಕಿ ನಾಗಶ್ರೀ ಪ್ರಶಸ್ತಿ ಸ್ವೀಕರಿದರು.

ಛಾಯಾಗ್ರಾಹಕ ಶಶಿರ ಶೃಂಗೇರಿ, ಸಂಕಲನಕಾರ ಅವಿನಾಶ್ ಶೃಂಗೇರಿ, ಕಲಾ ನಿರ್ದೇಶಕ ಅಭಿಷೇಕ್, ನಿರ್ವಾಹಕ ಕಾರ್ತಿಕ್ ಶೃಂಗೇರಿ ಭಾಗವಹಿಸಿದ್ದರು.

ರಮೇಶ್ ಬೇಗಾರ್ ಮಾತನಾಡಿ, ‘ಇದೊಂದು ಸಾಮಾಜಿಕ ಸಂದೇಶದ ಚಿತ್ರವಾದರೂ ವಾಣಿಜ್ಯ ವಿಭಾಗದಲ್ಲೂ ಉತ್ತಮ ಸಾಧನೆ ಮಾಡಿದ ಹೆಗ್ಗಳಿಕೆ ಪಡೆದಿದೆ. ಮಲೆನಾಡ ಗ್ರಾಮೀಣ ಪ್ರದೇಶದ ಕಲಾವಿದ ತಂತ್ರಜ್ಞರಿಗೆ ಒಲಿದ ಮೊದಲ ಪ್ರಶಸ್ತಿ ಇದಾಗಿದ್ದು, ಮಲೆನಾಡ ಸಮಸ್ತ ಜನತೆಗೆ ಪ್ರಶಸ್ತಿಯನ್ನು ಸಮರ್ಪಿಸುತ್ತೇವೆ’ ಎಂದರು.

2023ರಲ್ಲಿ ಚಿತ್ರೀಕರಣಗೊಂಡು ಬಿಡುಗಡೆ ಆಗಿ ಎಬಿಸಿ ಕೇಂದ್ರಗಳಲ್ಲಿ 50 ದಿನ ಪ್ರದರ್ಶನಗೊಂಡ ಜಲಪಾತ ಅಮೆಜಾನ್‌ ಪ್ರೈಮ್‍ನಲ್ಲೂ ಬಿಡುಗಡೆಗೊಂಡಿದೆ. 8ಕ್ಕೂ ಮಿಕ್ಕಿದ ಐಎಂಡಿಬಿ ರೇಟಿಂಗ್ ದಾಖಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.