ADVERTISEMENT

ಅತ್ಯಾಚಾರ ಆರೋಪಿ ಜಾನಿ ಮಾಸ್ಟರ್‌ಗೆ ಘೋಷಣೆಯಾಗಿದ್ದ ರಾಷ್ಟ್ರೀಯ ಪ್ರಶಸ್ತಿ ಅಮಾನತು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2024, 5:33 IST
Last Updated 6 ಅಕ್ಟೋಬರ್ 2024, 5:33 IST
<div class="paragraphs"><p>ಜಾನಿ ಮಾಸ್ಟರ್</p></div>

ಜಾನಿ ಮಾಸ್ಟರ್

   

ನವದೆಹಲಿ: ಅತ್ಯಾಚಾರ ಆರೋಪ ಎದುರಿಸುತ್ತಿರುವ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಅವರಿಗೆ ಘೋಷಿಸಲಾಗಿದ್ದ ರಾಷ್ಟ್ರೀಯ ಪ್ರಶಸ್ತಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಿಂಪಡೆದಿದೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.

ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ, ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದ್ದರಿಂದ ಅದರ ಸ್ವೀಕಾರ ಸಮಾರಂಭಕ್ಕೆ ತೆರಳಲು ಇತ್ತೀಚೆಗೆ ಮಧ್ಯಂತರ ಜಾಮೀನು ಪಡೆದಿದ್ದರು.

ADVERTISEMENT

ಜಾನಿ ಮಾಸ್ಟರ್ ನಿಜವಾದ ಹೆಸರು ಶೇಕ್ ಜಾನಿ ಬಾಷಾ ಎಂಬುದಾಗಿದ್ದು, ‘ತಿರುಚಿತ್ರಂಬಲಂ’ನ ಚಿತ್ರದ ‘ಮೇಘಮ್ ಕರುಕ್ಕಥಾ’ಹಾಡಿಗೆ ಅತ್ಯುತ್ತಮ ನೃತ್ಯ ಸಂಯೋಜನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದ್ದರು. ನೃತ್ಯ ನಿರ್ದೇಶಕ ಸತೀಶ್ ಕೃಷ್ಣನ್ ಅವರೊಂದಿಗೆ ಜಾನಿ ಮಾಸ್ಟರ್ ಪ್ರಶಸ್ತಿ ಹಂಚಿಕೊಂಡಿದ್ದರು. ಇದೀಗ, ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೋಶವು ಪ್ರಶಸ್ತಿಯನ್ನು ಅಮಾನತುಗೊಳಿಸಿದೆ ಎಂದು ಪ್ರಕಟಣೆ ನೀಡಿದೆ.

ಅಕ್ಟೋಬರ್ 8ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಾನಿ ಮಾಸ್ಟರ್ ಅವರಿಗೆ ನೀಡಿದ್ದ ಆಹ್ವಾನವನ್ನೂ ಹಿಂತೆಗೆದುಕೊಳ್ಳಲಾಗಿದೆ.

ಆರೋಪ ಏನು?

ಜಾನಿ ಮಾಸ್ಟರ್, 2020ರಿಂದ ಹಲವು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಅವರ ಸಹಾಯಕಿಯಾಗಿದ್ದ, ಕಿರಿಯ ನೃತ್ಯ ನಿರ್ದೇಶಕಿಯೊಬ್ಬರು ನರ್ಸಿಂಗಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪೊಲೀಸ್‌ ತನಿಖೆ ಆರಂಭವಾದ ಬೆನ್ನಲ್ಲೇ ಜಾನಿ ಮಾಸ್ಟರ್‌ ತಲೆಮರೆಸಿಕೊಂಡಿದ್ದರು.

ಸೈಬರಾಬಾದ್‌ ಪೊಲೀಸರು ಜಾನಿ ಅವರನ್ನು ಗೋವಾದಲ್ಲಿ ಬಂಧಿಸಿ, ಬಳಿಕ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಮೊದಲ ಬಾರಿ ಲೈಂಗಿಕ ದೌರ್ಜನ್ಯ ನಡೆದಾಗ ತಾನು ಬಾಲಕಿಯಾಗಿದ್ದೆ ಎಂದು ದೂರುದಾರೆ ಆರೋಪಿಸಿರುವುದರಿಂದ ಜಾನಿ ಮಾಸ್ಟರ್‌ ವಿರುದ್ಧ ಪೋಕ್ಸೊ ಪ್ರಕರಣವೂ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.