‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್, ಧನ್ಯ ರಾಮ್ಕುಮಾರ್ ನಟನೆಯ ‘ಚೌಕಿದಾರ್’ ಸಿನಿಮಾದ ಮುಹೂರ್ತ ಇತ್ತೀಚೆಗೆ ನಡೆಯಿತು. ‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶಿಸುತ್ತಿರುವ ಹೊಸ ಚಿತ್ರ ಇದಾಗಿದ್ದು, ಚಿತ್ರದಲ್ಲಿ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಅವರೂ ನಟಿಸುತ್ತಿದ್ದಾರೆ.
ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿ ಚಿತ್ರದ ಮುಹೂರ್ತ ನಡೆಯಿತು. ‘ಇದು ನನ್ನ ಆರನೇ ಸಿನಿಮಾ. ಬಹುಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಪೃಥ್ವಿ ಅಂಬಾರ್ ಅವರನ್ನು ಬಹುತೇಕ ಸಿನಿಮಾಗಳಲ್ಲಿ ಲವರ್ ಬಾಯ್ ರೀತಿ ತೋರಿಸಿದ್ದಾರೆ. ಅವರಿಗೆ ಭಿನ್ನವಾದ ಪಾತ್ರವೊಂದನ್ನು ಹೆಣೆಯಬೇಕು ಎಂದಿತ್ತು. ಈ ನಿಟ್ಟಿನಲ್ಲಿ ಕಥೆ ಹೇಳಿದೆ. ನಿರ್ಮಾಪಕರು ಒಪ್ಪಿದರು. ಪೃಥ್ವಿ ಅವರು ತಮ್ಮ ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ’ ಎಂದರು ಚಂದ್ರಶೇಖರ್ ಬಂಡಿಯಪ್ಪ.
‘ಕಥೆ ಕೇಳಿದಾಗ ನನಗೆ ಅನಿಸಿದ್ದು ಈ ಪಾತ್ರ ಮಾಡಲು ಸಾಕಷ್ಟು ಪ್ರಯತ್ನ ಬೇಕೆಂದು ತಿಳಿಯಿತು. ಸಿದ್ಧವಾಗಲು ಸಮಯಾವಕಾಶ ಕೇಳಿದ್ದೆ. ನಿರ್ದೇಶಕರು ಸಮಯ ನೀಡಿದ್ದರು. ಚಿತ್ರದಲ್ಲಿ ಕೌಟುಂಬಿಕ ಅಂಶಗಳ ಜೊತೆಗೆ ಹಲವು ವಿಷಯಗಳನ್ನು ಜೋಡಿಸಲಾಗಿದೆ’ ಎನ್ನುತ್ತಾರೆ ಪೃಥ್ವಿ ಅಂಬಾರ್.
ನಟನಾಗಿ 50 ವರ್ಷ: ‘ಮುಂದಿನ ವರ್ಷ ನಟನಾಗಿ 50 ವರ್ಷ ಪೂರ್ಣಗೊಳ್ಳುತ್ತದೆ. ಕನ್ನಡ ಸಿನಿ ಪಯಣಕ್ಕೂ 30 ತುಂಬುತ್ತದೆ. ಪ್ರತಿ ದಿನ, ಪ್ರತಿ ಸಿನಿಮಾದ ಪಾತ್ರವೂ ಸವಾಲಿನದ್ದೇ. ಈಗ ಹದಿನೈದು ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚಂದ್ರಶೇಖರ್ ಕಥೆಯನ್ನು ಅಚ್ಚುಕಟ್ಟಾಗಿ ಹೆಣೆದಿದ್ದಾರೆ. ಚೌಕಿದಾರ್ ಕಥೆ ಒಂದು ಭಾವನಾತ್ಮಕ ಪಯಣ’ ಎಂದರು ಸಾಯಿಕುಮಾರ್. ವಿದ್ಯಾಶೇಖರ್ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ‘ಚೌಕಿದಾರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.