ಅತ್ಯುತ್ತಮ ಚೊಚ್ಚಲ ನಿರ್ದೇಶನ ನಿತಿನ್ ಕೃಷ್ಣಮೂರ್ತಿ
ಚಿತ್ರ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ 2023ರ ಆರಂಭದಲ್ಲಿ ಚಿತ್ರಮಂದಿರಗಳಿಗೆ ಉಲ್ಲಾಸ ತುಂಬಿದ ಸಿನಿಮಾ ಇದು. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆದಿದ್ದಷ್ಟೇ ಅಲ್ಲದೆ ಚಿತ್ರರಂಗಕ್ಕೂ ಉಸಿರು ತುಂಬಿದ ಹೆಗ್ಗಳಿಕೆ ಈ ಸಿನಿಮಾದ್ದು. ಹಾಸ್ಯದ ಕಚಗುಳಿಯಿಟ್ಟು, ಸಿದ್ಧಸೂತ್ರಗಳನ್ನೆಲ್ಲಾ ಬದಿಗೊತ್ತಿ ಭಿನ್ನವಾದ ಮಾದರಿಯ ಸಿನಿಮಾವೊಂದನ್ನು ನಿತಿನ್ ಕೃಷ್ಣಮೂರ್ತಿ ಪ್ರೇಕ್ಷಕರೆದುರಿಗೆ ಇಟ್ಟಿದ್ದರು. ಇದು ಯುವಜನರನ್ನು ದಂಡುದಂಡಾಗಿ ಚಿತ್ರಮಂದಿರದತ್ತ ಸೆಳೆದಿತ್ತು.
ಈ ಸಿನಿಮಾದ ನಿರ್ದೇಶನಕ್ಕಾಗಿ ನಿತಿನ್ ಕೃಷ್ಣಮೂರ್ತಿ ಅತ್ಯುತ್ತಮ ಚೊಚ್ಚಲ ನಿರ್ದೇಶನ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಾಗತಿಹಳ್ಳಿ ಚಂದ್ರಶೇಖರ್, ‘ನಮ್ಮನ್ನೆಲ್ಲ 80–90ರ ದಶಕದಲ್ಲಿ ಕಥೆಗಾರರಾಗಿ ಬೆಳೆಸಿದ ಪತ್ರಿಕೆ ‘ಪ್ರಜಾವಾಣಿ’. ಈ ಪತ್ರಿಕೆಯನ್ನು ಓದದೇ ಇರುವ ದಿನವಿಲ್ಲ. ಪೂರ್ವಗ್ರಹರಹಿತವಾಗಿ ಈ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಈ ಪತ್ರಿಕೆ ಒಂದು ಸಿನಿಮಾ ಸಂಬಂಧಿಸಿದ ಕಾರ್ಯಕ್ರಮ ಆಗಬೇಕು ಎನ್ನುವ ಕೊರತೆ ಇತ್ತು. ಅದು ಈಗ ನೀಗಿದೆ’ ಎಂದರು.
‘ಪ್ರಜಾವಾಣಿ’ಗೂ ನನಗೂ ಅವಿನಾಭಾವ ಸಂಬಂಧ ಇದೆ. ಕಾಲೇಜು ದಿನದಲ್ಲಿ ಪತ್ರಿಕೆ ನಡೆಸಿದ ಕ್ವಿಜ್ ಸ್ಪರ್ಧೆಯಲ್ಲಿ ಏರ್ಕೂಲರ್ ಗೆದ್ದಿದ್ದೆ’ ಎನ್ನುವ ನೆನಪನ್ನು ನಿರ್ದೇಶದ ಸಿಂಪಲ್ ಸುನಿ ಹಂಚಿಕೊಂಡರು.
ತಂದೆ ಹಾಗೂ ಅಪ್ಪುಗೆ ಪ್ರಶಸ್ತಿ ಅರ್ಪಣೆ: ‘ನನ್ನ ಚೊಚ್ಚಲ ಸಿನಿಮಾದಲ್ಲಿ ಮುನ್ನೂರು ಜನರು ಕಾರ್ಯನಿರ್ವಹಿಸಿದ್ದರು. ನಮ್ಮ ಸಿನಿಮಾಗೆ ಬೆಂಬಲವಾಗಿ ನಿಂತಿದ್ದು ಇಡೀ ಕನ್ನಡ ಚಿತ್ರರಂಗ. ಇಲ್ಲಿ ಕುಳಿತಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾಗೆ ಪ್ರೋತ್ಸಾಹ ನೀಡಿದ್ದರು. ಕನ್ನಡ ಚಿತ್ರರಂಗ ಎನ್ನುವುದು ಬಹಳ ಪ್ರೀತಿ ನೀಡುವ ಇಂಡಸ್ಟ್ರಿ. ಹೊಸಬರಿಗೆ ಈ ರೀತಿಯ ಬೆಂಬಲ ಸಿಗುತ್ತಲೇ ಇರಬೇಕು. ಹೀಗಿದ್ದಾಗ ಇಡೀ ಚಿತ್ರರಂಗ ಬೆಳೆಯಲು ಸಾಧ್ಯ. ಈ ಪ್ರಶಸ್ತಿಯನ್ನು ನನ್ನ ಪ್ರೀತಿಯ ತಂದೆ ಹಾಗೂ ಅಪ್ಪು ಸರ್ಗೆ ಅರ್ಪಿಸುತ್ತೇನೆ’ ಎಂದರು ನಿತಿನ್ ಕೃಷ್ಣಮೂರ್ತಿ.
‘ಹಾಸ್ಟೆಲ್ ಹುಡುಗರಿಗೆ’ ಸಿನಿಮಾ ಆಯಿತು ಮುಂದೆ ಎನ್ನುವ ಅನುಶ್ರೀ ಪ್ರಶ್ನೆಗೆ, ‘ಹೊಸ ಕಥೆ ಬರೆಯುತ್ತಿದ್ದೇನೆ. ಯಾವ ಜಾನರ್ನ ಸಿನಿಮಾ ಎಂದು ಮುಂದೆ ತಿಳಿಯಲಿದೆ’ ಎಂದ ನಿತಿನ್, ಕುತೂಹಲವನ್ನು ಉಳಿಸಿದರು.
ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು: ಉಮೇಶ್ ಕೆ.ಕೃಪ(ಚಿತ್ರ: ಟಗರುಪಲ್ಯ), ಶಶಾಂಕ್ ಸೋಗಾಲ್(ಚಿತ್ರ: ಡೇರ್ಡೆವಿಲ್ ಮುಸ್ತಾಫಾ), ಸಿಂಧು ಶ್ರೀನಿವಾಸಮೂರ್ತಿ(ಚಿತ್ರ: ಆಚಾರ್ ಆ್ಯಂಡ್ ಕೋ.), ನಿತಿನ್ ಕೃಷ್ಣಮೂರ್ತಿ(ಚಿತ್ರ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ), ವಿಶಾಲ್ ಅತ್ರೇಯ(ಚಿತ್ರ: ತತ್ಸಮ ತದ್ಭವ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.