ಕರ್ನಾಟಕದ ಶ್ರೀಮಂತ ಸಿನಿಮಾ ಪರಂಪರೆಯನ್ನು ಆಚರಿಸುವ, ಸಂಭ್ರಮಿಸುವ, ಬೆಸೆಯುವ ವೇದಿಕೆಯಾಗಿರುವ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಇದೇ ಜೂನ್ 28ರಂದು ಅದ್ಧೂರಿಯಾಗಿ ನಡೆಯಲಿದೆ.
ತನ್ನ ‘ಅಮೃತ ಸಂಭ್ರಮ’ದ ಸಂದರ್ಭದಲ್ಲಿ ‘ಪ್ರಜಾವಾಣಿ’ ಪ್ರಾರಂಭಿಸಿದ್ದ ಈ ‘ಸಿನಿ ಸಮ್ಮಾನ’ವೆಂಬ ವರ್ಣರಂಜಿತ, ಅರ್ಥಗರ್ಭಿತ ಕಾರ್ಯಕ್ರಮದಲ್ಲಿ ಈ ಬಾರಿ ಚಂದನವನದ ಮೇರು ನಟ–ನಟಿಯರು, ಚಿತ್ರರಂಗದ ಗಣ್ಯರು ಭಾಗವಹಿಸಲಿದ್ದಾರೆ. 2023ರಲ್ಲಿ ತೆರೆಕಂಡ ಸಿನಿಮಾಗಳನ್ನು ಈ ಬಾರಿಯ ಪ್ರಶಸ್ತಿ ಪರಿಗಣಿಸಲಾಗಿದ್ದು, ತಲಾ ಐವರಂತೆ ಒಟ್ಟು 25 ವಿಭಾಗಗಳಲ್ಲಿ ಪ್ರಶಸ್ತಿಗೆ ನೂರಕ್ಕೂ ಅಧಿಕ ಜನರು ನಾಮನಿರ್ದೇಶನಗೊಂಡಿದ್ದಾರೆ. ಈ ಪೈಕಿ ಯಾರ ಮುಡಿಗೆ ಈ ಚೆಂದದ ಸಮ್ಮಾನ ಎನ್ನುವುದು ಜೂನ್ 28ರಂದೇ ಘೋಷಣೆಯಾಗಲಿದೆ.
ವರ್ಷದ ಅತ್ಯುತ್ತಮ ಚಿತ್ರ (2023) ವಿಭಾಗದಲ್ಲಿ ‘ಪಿಂಕಿ ಎಲ್ಲಿ?’, ‘ಸ್ವಾತಿ ಮುತ್ತಿನ ಮಳೆ ಹನಿಯೇ’, ‘ವಿರಾಟಪುರ ವಿರಾಗಿ’, ‘ಕಾಟೇರ’ ಹಾಗೂ ‘ಡೇರ್ಡೆವಿಲ್ ಮುಸ್ತಾಫಾ’ ನಾಮಿನಿರ್ದೇಶನಗೊಂಡಿದೆ.
ಅತ್ಯುತ್ತಮ ನಟ ವಿಭಾಗದಲ್ಲಿ ‘ಘೋಸ್ಟ್’ ಚಿತ್ರದಲ್ಲಿನ ನಟನೆಗಾಗಿ ಶಿವರಾಜ್ಕುಮಾರ್, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹಾಗೂ ‘ಟೋಬಿ’ ಚಿತ್ರದಲ್ಲಿನ ನಟನೆಗಾಗಿ ರಾಜ್ ಬಿ.ಶೆಟ್ಟಿ, ‘ಡೇರ್ಡೆವಿಲ್ ಮುಸ್ತಾಫಾ’ ಚಿತ್ರದಲ್ಲಿನ ನಟನೆಗಾಗಿ ಶಿಶಿರ ಬೈಕಾಡಿ ನಾಮನಿರ್ದೇಶನಗೊಂಡಿದ್ದಾರೆ.
ಅತ್ಯುತ್ತಮ ನಟಿ ವಿಭಾಗದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿನ ನಟನೆಗಾಗಿ ಸಿರಿ ರವಿಕುಮಾರ್, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿನ ನಟನೆಗಾಗಿ ರುಕ್ಮಿಣಿ ವಸಂತ್, ‘ಪಿಂಕಿ ಎಲ್ಲಿ?’ ಚಿತ್ರದಲ್ಲಿನ ನಟನೆಗಾಗಿ ಅಕ್ಷತಾ ಪಾಂಡವಪುರ, ‘ಆಚಾರ್ ಆ್ಯಂಡ್ ಕೋ.’ ಚಿತ್ರದಲ್ಲಿನ ನಟನೆಗಾಗಿ ಸಿಂಧು ಶ್ರೀನಿವಾಸ ಮೂರ್ತಿ, ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದಲ್ಲಿನ ನಟನೆಗಾಗಿ ಮಿಲನ ನಾಗರಾಜ್ ನಾಮನಿರ್ದೇಶನಗೊಂಡಿದ್ದಾರೆ.
ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಬಿ.ಎಸ್.ಲಿಂಗದೇವರು, ಹೇಮಂತ್ ಎಂ.ರಾವ್, ಪೃಥ್ವಿ ಕೊಣನೂರು, ಸಿಂಧು ಶ್ರೀನಿವಾಸ ಮೂರ್ತಿ, ಶಶಾಂಕ್ ಸೋಗಾಲ್ ನಾಮನಿರ್ದೇಶನಗೊಂಡಿದ್ದಾರೆ.
ಜೊತೆಗೆ ‘ಜನ ಮೆಚ್ಚಿದ ನಟ’, ‘ಜನ ಮೆಚ್ಚಿದ ನಟಿ’, ‘ಜನ ಮೆಚ್ಚಿದ ಸಿನಿಮಾ’, ‘ಜನ ಮೆಚ್ಚಿದ ಸಂಗೀತ’ ಹೀಗೆ ನಾಲ್ಕು ವಿಭಾಗಗಳಲ್ಲಿ ಜನರೇ ಮತದಾನ ಮಾಡಿ ಕಲಾವಿದರ ಮುಡಿಗೆ ವಿಜಯದ ಕಿರೀಟ ತೊಡಿಸಬಹುದು. ವೋಟ್ ಮಾಡಲು ಈ ಲಿಂಕ್ಗೆ ಭೇಟಿ ನೀಡಿ. ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ. bit.ly/prajavanicinesammanS2
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.