ADVERTISEMENT

‘ರಂಗಸ್ಥಳ’ದಲ್ಲಿ ಮನೋಜ್‌ ಜಯನ್ 

​ಪ್ರಜಾವಾಣಿ ವಾರ್ತೆ
Published 2 ಮೇ 2024, 1:27 IST
Last Updated 2 ಮೇ 2024, 1:27 IST
ಶಿಲ್ಪ ಕಾಮತ್, ವಿಲೋಕ್ ರಾಜ್  
ಶಿಲ್ಪ ಕಾಮತ್, ವಿಲೋಕ್ ರಾಜ್     

ಬಹುತೇಕ ಹೊಸಬರಿಂದಲೇ ಕೂಡಿರುವ ‘ರಂಗಸ್ಥಳ’ ಚಿತ್ರದೊಂದಿಗೆ ಮಲಯಾಳಂನ ಖ್ಯಾತ ನಟ ಮನೋಜ್‌ ಕೆ.ಜಯನ್ ಖಳನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಮತ್ತೆ ಬಂದಿದ್ದಾರೆ. ಮಲಯಾಳಂ, ತಮಿಳು, ತೆಲುಗು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಮನೋಜ್‌, 2005ರಲ್ಲಿ ಕನ್ನಡದ ‘ಉಗ್ರ ನರಸಿಂಹ’ ಚಿತ್ರದಲ್ಲಿ ನಟಿಸಿದ್ದರು.

ಅಘೋರ್ ಮೋಶನ್ ಪಿಕ್ಚರ್ಸ್‌ ಅಡಿಯಲ್ಲಿ ರೇವಣ್ಣ ನಿರ್ಮಿಸುತ್ತಿರುವ ಚಿತ್ರಕ್ಕೆ ಈಶ್ವರ್ ನಿತಿನ್ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ‘ಈಗಾಗಲೇ ಚಿತ್ರೀಕರಣ ಶುರುವಾಗಿದೆ. ನಮಗೆ ಲಾಭ ಬೇಡ, ಹಾಕಿದ ಹಣ ಬಂದರೆ ಸಾಕು. ನಮ್ಮ ಸಂಸ್ಥೆಯಿಂದ ಮುಂದೆಯೂ ಹೊಸಬರಿಗೆ ಅವಕಾಶ ಕೊಡುವ ಉದ್ದೇಶವಿದೆ. ನಾನು ರಾಜ್ಯಮಟ್ಟದ ವಾಲಿಬಾಲ್‌ ಆಟಗಾರನಾಗಿದ್ದು, ವಾಲಿಬಾಲ್‌ಗೆ ಸಂಬಂಧಪಟ್ಟ ಚಿತ್ರವನ್ನು ನಿರ್ಮಿಸುವ ಆಸೆಯೂ ನನಗಿದೆ’ ಎಂದರು ನಿರ್ಮಾಪಕ ರೇವಣ್ಣ.

ಈ ಹಿಂದೆ ‘ಗಿರ್ಕಿ’ ಚಿತ್ರದಲ್ಲಿ ನಟಿಸಿದ್ದ ವಿಲೋಕ್ ರಾಜ್ ಈ ಚಿತ್ರದ ನಾಯಕ. ಶಿಲ್ಪ ಕಾಮತ್ ನಾಯಕಿ. ‘ಇದೊಂದು ಗ್ರಾಮೀಣ ಸೊಗಡಿನ ಕಥೆಯಾಗಿದ್ದು, ಪುತ್ತೂರು, ಸುಳ್ಯ  ಭಾಗದ ಭಾಷೆ, ಸೊಗಡು, ಆಚಾರ, ವಿಚಾರ, ಕಲೆ, ಬದುಕಿನ ಸುತ್ತಲಿನ ಕಥೆ. ‘ರಂಗಸ್ಥಳ’ ಎಂದರೆ ಒಂದು ವೇದಿಕೆ. ರಂಗ ಕಲೆಗಳ ಪ್ರದರ್ಶನ ನಡೆಯುವ ಸ್ಥಳ. ಇಲ್ಲಿ ಬರುವ ಪಾತ್ರಧಾರಿಗಳು ಒಬ್ಬೊಬ್ಬರದು ಒಂದೊಂದು ರೀತಿಯ ಮನಸ್ಥಿತಿ. ಅದು ಹೇಗೆ, ಯಾವ ರೀತಿ, ಏನೆಲ್ಲಾ ತೊಂದರೆಗಳನ್ನು ನೀಡುತ್ತದೆ. ಈ ರಂಗ ಮಂಟಪದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಈಶ್ವರ್ ನಿತಿನ್.

ADVERTISEMENT

ಎನಾಷ್ ಒಲಿವೇರ ಛಾಯಾಚಿತ್ರಗ್ರಹಣ ಮಾಡುತ್ತಿದ್ದು, ಜೂಡೋ ಸ್ಯಾಂಡಿ ಆರು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.