ADVERTISEMENT

‘ಗ್ಯಾಂಗ್ಸ್ ಆಫ್ ಯುಕೆ’ಯಲ್ಲಿ ರವಿ ಶ್ರೀವತ್ಸ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 19:42 IST
Last Updated 18 ಸೆಪ್ಟೆಂಬರ್ 2024, 19:42 IST
ರವಿ ಶ್ರೀವತ್ಸ
ರವಿ ಶ್ರೀವತ್ಸ   

‘ಡೆಡ್ಲಿ ಸೋಮ’, ‘ಮಾದೇಶ’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ರವಿ ಶ್ರೀವತ್ಸ ಇದೀಗ ತಮ್ಮದೇ ನಿರ್ಮಾಣ ಸಂಸ್ಥೆ ಮೂಲಕ ಉತ್ತರ ಕರ್ನಾಟಕದ ಕಥೆಯುಳ್ಳ ‘ಗ್ಯಾಂಗ್ಸ್ ಆಫ್ ಯುಕೆ’ ಸಿನಿಮಾವನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಹಾಗೂ ರವಿ ಶ್ರೀವತ್ಸ ಅವರ ‘ಡೆಡ್ಲಿ ಆರ್ಟ್ಸ್’ ಸಂಸ್ಥೆಯ ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು.

‘2018 ರಲ್ಲಿ ಮಾಡಿಕೊಂಡಿದ್ದ ಕಥೆಯಿದು. ನಿರ್ಮಾಪಕ ಕೆ.ವಿ.ರಾಜು ಬಳಿಕ ಎಂ.ಎಸ್. ರಮೇಶ್ ನನಗೆ ಜೊತೆಯಾದರು. ಚಿತ್ರದಲ್ಲಿ ಬಹುತೇಕ ಹೊಸಬರೇ ಇದ್ದಾರೆ. ಏಪ್ರಿಲ್‌ನಲ್ಲಿ ಚಿತ್ರೀಕರಣ ಪ್ರಾರಂಭಿಸಿದೆವು. ಕಳೆದ ವಾರ ಚಿತ್ರೀಕರಣ ಪೂರ್ಣಗೊಂಡಿದೆ. ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್‌ನಲ್ಲಿ ನಡೆದ ಘಟನೆ ಇಟ್ಟುಕೊಂಡು ಮಾಡಿದ ಚಿತ್ರಕಥೆಯಿದು. ರಕ್ತ ತನ್ನ ಕುರುಹನ್ನು ಬಿಟ್ಟು ಹೋಗುತ್ತದೆ, ಜಿದ್ದು ಒಬ್ಬರಿಂದ ಒಬ್ಬರಿಗೆ ವರ್ಗಾವಣೆಯಾಗುತ್ತದೆ ಎಂಬುದು ಚಿತ್ರದ ಪರಿಕಲ್ಪನೆ. ‘ಉತ್ತರ ಕರ್ನಾಟಕದ ಹತ್ಯಾಕಾಂಡ’ ಎಂಬ ಟ್ಯಾಗ್‌ಲೈನ್ ಈ ಚಿತ್ರಕ್ಕಿದೆ’ ಎಂದು ಚಿತ್ರದ ಕುರಿತು ಮಾಹಿತಿ ನೀಡಿದರು. 

ಕೆ.ವಿ‌.ರಾಜು ಅವರ ಪುತ್ರ ಅಮೋಘ್‌ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒರಟ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ ಮೊದಲಾದವರು ತಾರಾಗಣದಲ್ಲಿದ್ದಾರೆ. ಎಲ್.ಎನ್. ರೆಡ್ಡಿ, ಎಂ.ಎಸ್‌.ರಮೇಶ್ ಬಂಡವಾಳ ಹೂಡಿದ್ದಾರೆ.

ADVERTISEMENT

ಶಿಶುನಾಳ‌ ಷರೀಫರ 8 ಗೀತೆಗಳ ತುಣುಕನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಒಟ್ಟು 9 ಹಾಡುಗಳಿದ್ದು, ಸಾಧು ಕೋಕಿಲ ಸಂಗೀತವಿದೆ. ಡಿಸೆಂಬರ್ ಅಥವಾ ಜನವರಿಗೆ ಚಿತ್ರ ಬಿಡುಗಡೆ ಮಾಡಲು ತಂಡ ಯೋಜನೆ ಹಾಕಿಕೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.