‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ವರ್ಷ ಇಲ್ಲಿಯವರೆಗೆ ಪೃಥ್ವಿ ನಟನೆಯ ‘ಜೂನಿ’, ‘ಫಾರ್ ರಿಜಿಸ್ಟ್ರೇಷನ್’ ಹಾಗೂ ‘ಮತ್ಸ್ಯಗಂಧ’ ಸಿನಿಮಾಗಳು ಬಿಡುಗಡೆಯಾಗಿದ್ದು, ‘ಭುವನಂ ಗಗನಂ’ ಚಿತ್ರ ತೆರೆಗೆ ಬರಲು ಸಜ್ಜಾಗುತ್ತಿದೆ. ಇದೇ ಸಂದರ್ಭದಲ್ಲಿ ‘ಚೌಕಿದಾರ್’ ಎಂಬ ಹೊಸ ಪ್ರಾಜೆಕ್ಟ್ಗೆ ಪೃಥ್ವಿ ಹೆಜ್ಜೆ ಇಟ್ಟಿದ್ದಾರೆ.
‘ರಥಾವರ’ ಸಿನಿಮಾ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾ ಜುಲೈ ಮೊದಲ ವಾರ ಸೆಟ್ಟೇರಲಿದೆ. ನಟ ಶ್ರೀಮುರಳಿ ಚಂದ್ರಶೇಖರ್ ಬಂಡಿಯಪ್ಪ ಅವರ ಸಿನಿಮಾಗೆ ಸಾಥ್ ನೀಡಿದ್ದು, ಶೀರ್ಷಿಕೆ ಬಿಡುಗಡೆ ಮಾಡಿ ಶುಭಕೋರಿದ್ದಾರೆ. ‘ಚೌಕಿದಾರ್ ಮಾಸ್ ಸಿನಿಮಾವಲ್ಲ. ಇದು ಫ್ಯಾಮಿಲಿ ಎಂಟರ್ಟೈನರ್. ಕನ್ನಡದ ಜೊತೆಗೆ ಬಹುಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ’ ಎಂದಿದೆ ಚಿತ್ರತಂಡ. ಚಿತ್ರದಲ್ಲಿ ಬಹುಭಾಷಾ ನಟ ಸಾಯಿಕುಮಾರ್ ನಟಿಸಲಿದ್ದು, ಉಳಿದ ತಾರಾಬಳಗವನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಿದೆ.
‘ಆನೆ ಪಟಾಕಿ’ ಮೂಲಕ ಸ್ಯಾಂಡಲ್ವುಡ್ಗೆ ಹೆಜ್ಜೆ ಇಟ್ಟಿದ್ದ ಚಂದ್ರಶೇಖರ್ ಬಂಡಿಯಪ್ಪ, ಆ ಬಳಿಕ ‘ರಥಾವರ’ ಸಿನಿಮಾ ಮಾಡಿದ್ದರು. ಬಳಿಕ ‘ತಾರಕಾಸುರ’, ‘ರೆಡ್ ಕಾಲರ್’ ಎಂಬ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ಅವರು, ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರಕ್ಕೂ ಕಥೆ ಬರೆದಿದ್ದಾರೆ. ‘ಚೌಕಿದಾರ್’ ಸಿನಿಮಾವನ್ನು ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿ. ನಾಗೇಂದ್ರಪ್ರಸಾದ್, ಪ್ರಮೋದ್ ಮರವಂತೆ ಗೀತೆಗಳನ್ನು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.