ಅತ್ಯುತ್ತಮ ನಿರ್ದೇಶನ: ಹೇಮಂತ್ ಎಂ.ರಾವ್ (ಚಿತ್ರ: ಸಪ್ತ ಸಾಗರದಾಚೆ ಎಲ್ಲೋ)
‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ನಿರ್ದೇಶನಕ್ಕಾಗಿ ಹೇಮಂತ್ ಎಂ.ರಾವ್ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಪಡೆದರು.
12 ವರ್ಷಗಳ ಹಿಂದೆಯೇ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಕಥೆ ರಚಿಸಿದ್ದ ಹೇಮಂತ್, ಪ್ರಸ್ತುತ ಸಂದರ್ಭವನ್ನು ಪೋಣಿಸಿ ಕಥೆಗೆ ಜೀವ ನೀಡಿದ್ದರು. ಈ ಚಿತ್ರಕ್ಕಾಗಿ 137 ದಿನಗಳ ಸುದೀರ್ಘ ಚಿತ್ರೀಕರಣ ನಡೆಸಿದ್ದರು. ‘ಸೈಡ್–ಎ’ ಹಾಗೂ ‘ಸೈಡ್–ಬಿ’ ಎಂಬ ಭಿನ್ನ ಕಲ್ಪನೆಯ ಭಾಗಗಳನ್ನು ಮಾಡಿ ಸಿನಿಮಾವನ್ನು ಪ್ರೇಕ್ಷಕರ ಎದುರಿಗೆ ಇರಿಸಿದ್ದರು. ಕಥೆಯನ್ನು ಸೂಕ್ಷ್ಮವಾಗಿ ಹೆಣೆಯುವಲ್ಲಿ ಅವರದ್ದು ಎತ್ತಿದ ಕೈ. ಎಂಜಿನಿಯರಿಂಗ್ ಕಲಿತು ‘ಗುಲಾಬಿ ಟಾಕೀಸ್’ನಲ್ಲಿ ಗಿರೀಶ ಕಾಸರವಳ್ಳಿ ಅವರ ಸಹಾಯಕನಾಗಿ ಸಿನಿಪಯಣ ಆರಂಭಿಸಿದವರು ಹೇಮಂತ್. ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಮೂಲಕ ನಿರ್ದೇಶನದತ್ತ ಮೊದಲ ಹೆಜ್ಜೆ ಇಟ್ಟ ಹೇಮಂತ್, ‘ಕವಲುದಾರಿ’ ಸಿನಿಮಾ ಮೂಲಕ ತಮ್ಮ ನಿರ್ದೇಶನದ ಸಾಮರ್ಥ್ಯ ಪ್ರದರ್ಶಿಸಿದರು. ದೃಶ್ಯಗಳ ಹೆಣಿಗೆಯಲ್ಲಿ ಸಾವಧಾನ ತೋರುವ ನಿರ್ದೇಶಕನಾಗಿ ಅವರನ್ನು ಗುರುತಿಸುತ್ತದೆ ಚಿತ್ರರಂಗ. ಸೂಕ್ಷ್ಮ ಬರವಣಿಗೆ, ನಿರೂಪಣೆ ಇವರ ಅಸ್ತ್ರ.
ಸದ್ಯ ಶಿವರಾಜ್ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸುತ್ತಿರುವ ಹೇಮಂತ್ ಎಂ.ರಾವ್, ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಮಲಯಾಳದಲ್ಲಿ ಈ ಸಿನಿಮಾ ತೆರೆಗೆ ತರಲಿದ್ದಾರೆ.
ಸಿಂಧು ಶ್ರೀನಿವಾಸಮೂರ್ತಿ(ಚಿತ್ರ: ಆಚಾರ್ ಆ್ಯಂಡ್ ಕೋ.), ಬಿ.ಎಸ್.ಲಿಂಗದೇವರು(ಚಿತ್ರ: ವಿರಾಟಪುರ ವಿರಾಗಿ), ಪೃಥ್ವಿ ಕೊಣನೂರು(ಚಿತ್ರ: ಪಿಂಕಿ ಎಲ್ಲಿ?), ಶಶಾಂಕ್ ಸೋಗಾಲ್(ಚಿತ್ರ: ಡೇರ್ಡೆವಿಲ್ ಮುಸ್ತಾಫಾ), ಹೇಮಂತ್ ಎಂ. ರಾವ್(ಚಿತ್ರ: ಸಪ್ತ ಸಾಗರದಾಚೆ ಎಲ್ಲೋ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.