ನಟ ಧರ್ಮಕೀರ್ತಿರಾಜ್, ಕಾವ್ಯ ಭಗವಂತ ಜೋಡಿಯಾಗಿ ನಟಿಸುತ್ತಿರುವ ‘ಯುಕೆ ಲವ್ ಸ್ಟೋರಿ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ನಟ ಅಜಯ್ರಾವ್ ಪ್ರಥಮ ದೃಶ್ಯಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ವಿಜಯ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ರೋಮನಾಸ್ ಕ್ರಿಯೇಶನ್ಸ್ ಅಡಿಯಲ್ಲಿ ಎಸ್.ಜೆ.ಸುರೇಶ್ ಆರೋಕ್ಯರಾಜ್ ಬಂಡವಾಳ ಹೂಡುತ್ತಿದ್ದಾರೆ.
‘ಯುಕೆ ಎಂದರೆ ಉತ್ತರ ಕರ್ನಾಟಕ. ಆ ಭಾಗದಲ್ಲಿ ನಡೆಯುವ ರಗಡ್ ಪ್ರೀತಿಯ ಕಥೆಯಿದು. ಅಲ್ಲಿನ ಜನರ ಒಡನಾಟ, ಭಾಷೆ ತಿಳಿದುಕೊಂಡು, ಸುಮಾರು ಆರು ತಿಂಗಳುಗಳ ಕಾಲ ಅವರೊಂದಿಗಿದ್ದು ಚಿತ್ರಕಥೆ ಸಿದ್ದಪಡಿಸಿದ್ದೇನೆ. ಶಂಕರ್ನಾಗ್ ನನ್ನ ಸಿನಿಪಯಣಕ್ಕೆ ಆದರ್ಶ’ ಎಂದರು ನಿರ್ದೇಶಕರು.
ಒರಟು ಸ್ವಭಾವದ ಹಳ್ಳಿ ಹುಡುಗನಾಗಿ ಧರ್ಮ ಕೀರ್ತಿರಾಜ್ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ಬಲ ರಾಜವಾಡಿ, ಜಿ.ಜಿ.ಗೋವಿಂದೆಗೌಡ, ರವಿರೆಡ್ಡಿ, ಮಂಡ್ಯ ಸಿದ್ದು ಮುಂತಾದವರ ತಾರಾಬಳಗವಿದೆ. ಡಾ.ಕಿರಣ್ ತೋಟಂಬೈಲ್ ಸಂಗೀತ ಸಂಯೋಜಿಸುತ್ತಿದ್ದಾರೆ. ವಿ.ಪಳನಿವೇಲು ಛಾಯಾಚಿತ್ರಗ್ರಹಣ, ಸಿ.ಕೆ.ಕುಮಾರ್ ಸಂಕಲನ ಚಿತ್ರಕ್ಕಿದೆ. ಕಲಬುರಗಿ, ಕೊಳ್ಳೇಗಾಲ, ಯಾದಗಿರಿ, ಹುಬ್ಬಳ್ಳಿ, ಬೆಳಗಾವಿ ಮೊದಲಾದೆಡೆ ಚಿತ್ರೀಕರಣ ನಡೆಸಲು ತಂಡ ಆಲೋಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.