‘ದೂರದರ್ಶನ’ ಸಿನಿಮಾ ಮೂಲಕ ಭಿನ್ನವಾದ ಕಥೆಯೊಂದನ್ನು ಪ್ರೇಕ್ಷಕರ ಎದುರಿಗೆ ಇಟ್ಟಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ತಮ್ಮ ಎರಡನೇ ಪ್ರಾಜೆಕ್ಟ್ ಘೋಷಿಸಿದ್ದಾರೆ.
ಚಿತ್ರಕ್ಕೆ ‘ಪೀಟರ್’ ಎಂಬ ಶೀರ್ಷಿಕೆ ಇಡಲಾಗಿದ್ದು, ಕನ್ನಡ ಸೇರಿದಂತೆ ತಮಿಳು ಹಾಗೂ ಮಲಯಾಳದಲ್ಲಿ ಸಿನಿಮಾ ತಯಾರಾಗಲಿದೆ. ಕನ್ನಡದಲ್ಲಿ ಶೀರ್ಷಿಕೆಯನ್ನು ಡಾಲಿ ಧನಂಜಯ ಹಾಗೂ ತಮಿಳಿನಲ್ಲಿ ವಿಜಯ್ ಸೇತುಪತಿ ಅವರು ಶೀರ್ಷಿಕೆ ಅನಾವರಣಗೊಳಿಸಿದರು. ‘ಈ ಸಿನಿಮಾ ಸೆನ್ಸಿಟಿವ್ ಕ್ರೈಮ್ ಡ್ರಾಮಾ ಕಥಾಹಂದರಲ್ಲಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಥಾವಸ್ತುವನ್ನು ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ‘ಪೀಟರ್’ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಚೆಂಡೆ ಮೇಳನ್ನು ಚಿತ್ರಮಂದಿರಗಳಲ್ಲಿ ಅನುಭವಿಸುವುದೇ ಚೆಂದ’ ಎಂದಿದ್ದಾರೆ ಸುಕೇಶ್.
ಚಿತ್ರದ ತಾರಾಬಳಗದಲ್ಲಿ ರಾಜೇಶ್ ಧ್ರುವ, ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ಇದ್ದಾರೆ. ಚಿತ್ರತಂಡ ಈಗಾಗಲೇ 29 ದಿನಗಳ ಶೂಟಿಂಗ್ ಮುಗಿಸಿದೆ. ಮಡಿಕೇರಿಯ ಭಾಗಮಂಡಲದ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ನಡಿ ‘ಪೀಟರ್’ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಚಿತ್ರಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.