ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ 2ನೇ ಆವೃತ್ತಿ:ಜನಮೆಚ್ಚಿದ ನಟಿ ಪ್ರಶಸ್ತಿಗೆ ನಾಮನಿರ್ದೇಶನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 0:30 IST
Last Updated 19 ಜೂನ್ 2024, 0:30 IST
   
‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಎರಡನೇ ಆವೃತ್ತಿ ಸಮಾರಂಭ ಜೂನ್‌ 28ಕ್ಕೆ ನಡೆಯಲಿದೆ. 19 ವಿಭಾಗಗಳಲ್ಲಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರು ಮತ್ತು ಸಿನಿಮಾಗಳ ಪಟ್ಟಿ ಹಾಗೂ ಪರಿಚಯ–ವಿವರವನ್ನು ಈಗಾಗಲೇ ಪ್ರಕಟಿಸಲಾಗಿದೆ. ಇದೀಗ ‘ಜನಮೆಚ್ಚಿದ ನಟಿ’ ವಿಭಾಗದಲ್ಲಿ ಇರುವ ನಟರನ್ನು ಪರಿಚಯಿಸುವ ಸಮಯ. ನಿಮ್ಮ ನೆಚ್ಚಿನ ನಟರಿಗೆ ವೋಟ್‌ ಮಾಡಲು ಈ ಲಿಂಕ್‌ಗೆ ಲಾಗ್‌ಇನ್‌ ಆಗಿ. bit.ly/ prajavanicinesammanS2

ಮಿಲನ ನಾಗರಾಜ್‌, ರುಕ್ಮಿಣಿ ವಸಂತ್‌, ಅಕ್ಷತಾ ಪಾಂಡವಪುರ

‘ಕೌಸಲ್ಯಾ ಸುಪ್ರಜಾ ರಾಮ’ ಚಿತ್ರದಲ್ಲಿನ ನಟನೆಗಾಗಿ ಮಿಲನ ನಾಗರಾಜ್‌ ನಾಮನಿರ್ದೇಶನಗೊಂಡಿದ್ದಾರೆ. ‘ನಮ್‌ ದುನಿಯಾ ನಮ್‌ ಸ್ಟೈಲ್‌’ ಚಿತ್ರದ ಮುಖಾಂತರ ನಾಯಕಿಯಾಗಿ ತಮ್ಮ ಸಿನಿಪಯಣ ಆರಂಭಿಸಿದ ಮಿಲನ, ‘ಲವ್‌ ಮಾಕ್ಟೇಲ್‌’ ಚಿತ್ರದ ‘ನಿಧಿಮಾ’ಳಾಗಿ ಜನಪ್ರಿಯರಾದರು. ಇದು ಅವರ ಸಿನಿಪಯಣಕ್ಕೆ ತಿರುವು ನೀಡಿದ ಚಿತ್ರ. ‘ಲವ್‌ ಮಾಕ್ಟೇಲ್‌–2’, ‘ಕೌಸಲ್ಯಾ ಸುಪ್ರಜಾ ರಾಮ’, ‘ಲವ್‌ ಬರ್ಡ್ಸ್‌’, ‘ಫಾರ್‌ ರಿಜಿಸ್ಟ್ರೇಷನ್‌’ ಸಿನಿಮಾಗಳಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿರುವ ಅವರು ಸದ್ಯ, ‘ಆರಾಮ್‌ ಅರವಿಂದ ಸ್ವಾಮಿ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. 

‘ಸಪ್ತ ಸಾಗರದಾಚೆ ಎಲ್ಲೋ–Side A’ ಚಿತ್ರದಲ್ಲಿನ ನಟನೆಗಾಗಿ ರುಕ್ಮಿಣಿ ವಸಂತ್‌ ನಾಮನಿರ್ದೇಶನಗೊಂಡಿದ್ದಾರೆ. ಲಂಡನ್‌ನ ‘ರಾಯಲ್‌ ಅಕಾಡೆಮಿ ಆಫ್‌ ಡ್ರಾಮಾಟಿಕ್‌ ಆರ್ಟ್ಸ್‌’ನಲ್ಲಿ ತರಬೇತಿ ಪಡೆದು ಸಿನಿಮಾ ಕ್ಷೇತ್ರಕ್ಕೆ ಧುಮುಕಿದ್ದ ರುಕ್ಮಿಣಿ ‘ಬೀರ್‌ಬಲ್‌’ ಬೆಡಗಿಯಾಗಿ ಚಂದನವನ ಪ್ರವೇಶಿಸಿದರು. ರುಕ್ಮಿಣಿ ವಸಂತ್‌ಗೆ ಚಿತ್ರರಂಗದಲ್ಲಿ ಬ್ರೇಕ್‌ ನೀಡಿದ್ದು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರ. ತಮ್ಮ ಸಹಜ ನಟನೆಯಿಂದ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದಲ್ಲಿ ‘ಪ್ರಿಯಾ’ ಎಂಬ ಪಾತ್ರಕ್ಕೆ ರುಕ್ಮಿಣಿ ಜೀವತುಂಬಿದ್ದರು. ಇದೀಗ ಶ್ರೀಮುರಳಿಯ ‘ಬಘೀರ’, ಶಿವರಾಜ್‌ಕುಮಾರ್‌ ಅವರ ‘ಭೈರತಿ ರಣಗಲ್‌’ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ ಬಹುಭಾಷಾ ನಟ ವಿಜಯ್‌ ಸೇತುಪತಿ ಅವರೊಂದಿಗೆ ತೆರೆಹಂಚಿಕೊಳ್ಳಲು ಸಜ್ಜಾಗಿದ್ದಾರೆ. 

ADVERTISEMENT

ನಟಿ ಅಕ್ಷತಾ ಪಾಂಡವಪುರ ‘ಪಿಂಕಿ ಎಲ್ಲಿ?’ ಚಿತ್ರದ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ಕಾಲೇಜು ವಿದ್ಯಾಭ್ಯಾಸದ ನಂತರ ನೀನಾಸಂನಲ್ಲಿ ರಂಗ ತರಬೇತಿ ಪಡೆದು, ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್‌ಎಸ್‌ಡಿ)ಯಲ್ಲಿ ಮೂರು ವರ್ಷ ರಂಗಭೂಮಿಯಲ್ಲಿ ಹೆಚ್ಚುವರಿ ತರಬೇತಿ ಪಡೆದರು. ‘ಪಲ್ಲಟ’ ಚಿತ್ರದಲ್ಲಿನ ನಟನೆಗೆ ‘ರಾಜ್ಯ ಪ್ರಶಸ್ತಿ’ ಲಭಿಸಿದೆ. ‘ಆ ಒಂದು ನೋಟು’, ‘ಪಿಂಕಿ ಏಲ್ಲಿ?’, ‘ಕೋಳಿ ಎಸ್ರು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದು, ನಟನೆಗಾಗಿ  ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. 

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿನ ನಟನೆಗಾಗಿ ಸಿರಿ ರವಿಕುಮಾರ್‌ ನಾಮನಿರ್ದೇಶನಗೊಂಡಿದ್ದಾರೆ. ‘ಸಕುಟುಂಬ ಸಮೇತ’ ಚಿತ್ರದ ಮೂಲಕ ಚಂದನವನದಲ್ಲಿ ಗುರುತಿಸಿಕೊಂಡ ಸಿರಿ, ಆರ್‌ಜೆ, ರೂಪದರ್ಶಿ, ನಿರೂಪಕಿಯಾಗಿ ಕೆಲಸ ಮಾಡಿದ್ದಾರೆ. ರಂಗಭೂಮಿಯಲ್ಲೂ ಸಕ್ರಿಯವಾಗಿರುವ ಸಿರಿ, ರಾಜ್‌ ಬಿ.ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ‘ಪ್ರೇರಣಾ’ ಎಂಬ ಪಾತ್ರ ನಿರ್ವಹಿಸಿದ್ದರು. ‘ಬ್ಯಾಚುಲರ್‌ ಪಾರ್ಟಿ’, ‘O2’ ಸಿನಿಮಾಗಳ ಬಳಿಕ, ‘ಆಬ್ರಕಡಾಬ್ರ’, ‘ಬಿಸಿಬಿಸಿ Ice-Cream’ ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಸಿರಿ ರವಿಕುಮಾರ್‌, ಚೈತ್ರಾ ಜೆ.ಆಚಾರ್‌, ಸಿಂಧು ಶ್ರೀನಿವಾಸಮೂರ್ತಿ

‘ಟೋಬಿ’ ಸಿನಿಮಾದಲ್ಲಿನ ನಟನೆಗಾಗಿ ಚೈತ್ರಾ ಜೆ.ಆಚಾರ್‌ ನಾಮನಿರ್ದೇಶನಗೊಂಡಿದ್ದಾರೆ. ‘ಬೆಂಗಳೂರು ಕ್ವೀನ್ಸ್‌’ ಎಂಬ ವೆಬ್‌ಸರಣಿಯಲ್ಲಿ ‘ಸೈಲೆಂಟ್‌ ಸ್ವಾತಿ’ಯಾಗಿ ಬಣ್ಣದ ಲೋಕಕ್ಕೆ ಹೆಜ್ಜೆ ಇಟ್ಟ ಇವರು, ‘ಮಹಿರ’ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಬಳಿಕ ‘ತಲೆದಂಡ’, ‘ಆದೃಶ್ಯ’, ‘ಗಿಲ್ಕಿ’ ಹೀಗೆ ಸಾಲು ಸಾಲು ಸಿನಿಮಾಗಳು ಚೈತ್ರಾ ಕೈಹಿಡಿದವು. 2023ರಲ್ಲಿ ಅವರ ನಟನೆಯ ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳು ಬಿಡುಗಡೆಗೊಂಡವು. ‘ಬ್ಲಿಂಕ್‌’ ಚಿತ್ರದ ಬಳಿಕ ಸದ್ಯ ಧನಂಜಯ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 

ನಟಿ, ನಿರ್ದೇಶಕಿ ಸಿಂಧು ಶ್ರೀನಿವಾಸಮೂರ್ತಿ ‘ಆಚಾರ್‌ ಆ್ಯಂಡ್‌ ಕೋ.’ ಚಿತ್ರದಲ್ಲಿನ ನಟನೆಗಾಗಿ ನಾಮನಿರ್ದೇಶನಗೊಂಡಿದ್ದಾರೆ. ತಮ್ಮ 16ನೇ ವಯಸ್ಸಿನಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಇವರು, ‘ಫ್ರೆಂಚ್‌ ಬಿರಿಯಾನಿ’, ತೆಲುಗಿನ ‘ಸಿನಿಮಾ ಬಂಡಿ’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಬ್‌ಸೀರೀಸ್‌, ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಸದ್ಯ ಆಕರ್ಷ್‌ ಎಚ್‌.ಪಿ. ನಿರ್ದೇಶನದ ‘ಫ್ಯಾಮಿಲಿ ಡ್ರಾಮಾ’ ಚಿತ್ರದಲ್ಲಿ ಸಿಂಧು ನಟಿಸುತ್ತಿದ್ದಾರೆ.  

ಈ ಕಾರ್ಯಕ್ರಮ ಕ್ಯಾಸಾಗ್ರ್ಯಾಂಡ್ ಪ್ರಸ್ತುತಪಡಿಸುತ್ತಿರುವ ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ. Powered by ಅಮೃತ್ ನೋನಿ ರೀಚ್‌ರೂಟ್‌.

ಬ್ಯಾಂಕಿಂಗ್ ಪಾರ್ಟ್ನರ್: ಕೆನರಾ ಬ್ಯಾಂಕ್.

ಮೊಬಿಲಿಟಿ ಪಾರ್ಟ್ನರ್ : ಮಹೀಂದ್ರಾ,

ಏರ್‌ಲೈನ್ ಪಾರ್ಟ್ನರ್: ಸ್ಟಾರ್ ಏರ್,

ಎನರ್ಜಿ ಪಾರ್ಟ್ನರ್: ಕಾಂತಾರ ಪಾನ್ ಮಸಾಲ,

ಶಾರ್ಟ್ ವಿಡಿಯೊ ಪಾರ್ಟ್ನರ್: ಜೋಶ್.

ಸಹಪ್ರಾಯೋಜಕರು : ಫ್ರೀಡಂ ಆಯಿಲ್, ಟಿಟಿಕೆ ಪ್ರೆಸ್ಟೀಜ್, ಹೋಂಡಾ ಶೈನ್, ಇನ್‌ಸೈಟ್ಸ್ ಐಎಎಸ್, ಹೀರೊ ವಿಡಾ, ಸದ್ಗುರು ಆಯುರ್ವೇದ, ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಲಿ.

ಆಡಿಟ್ ಪಾರ್ಟ್ನರ್: ಅರ್ನ್ಸ್ಟ್ & ಯಂಗ್

ಟೆಲಿಕಾಸ್ಟ್ ಪಾರ್ಟ್ನರ್: ಝೀ ಕನ್ನಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.