ADVERTISEMENT

ಬಸ್‌ ಡ್ರೈವರ್‌ ರಾಜ್‌ ಬಹದ್ದೂರ್‌ಗೆ ಫಾಲ್ಕೆ ಪ್ರಶಸ್ತಿ ಅರ್ಪಿಸಿದ ರಜನಿ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 12:18 IST
Last Updated 2 ಏಪ್ರಿಲ್ 2021, 12:18 IST
ರಜನಿಕಾಂತ್‌
ರಜನಿಕಾಂತ್‌   

ತಮಗೆ ದೊರೆತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನಟ ರಜನಿಕಾಂತ್‌ ಅವರು ಬಸ್ ಚಾಲಕ ರಾಜ್ ಬಹದ್ದೂರ್ ಅವರಿಗೆ ಅರ್ಪಿಸಿದ್ದಾರೆ.

ಬಿಎಂಟಿಸಿ (ಈ ಹಿಂದೆ ಬಿಟಿಎಸ್‌) ಬಸ್‌ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದಾಗ ತಮ್ಮ ನಟನೆ, ಪ್ರತಿಭೆಯನ್ನು ಗುರುತಿಸಿದವರು ಚಾಲಕ, ಸ್ನೇಹಿತ ರಾಜ್‌ ಬಹದ್ದೂರ್. ಅವರು ಪ್ರೋತ್ಸಾಹಿಸಿದರು. ಹಾಗಾಗಿ ಈ ಪ್ರಶಸ್ತಿಯನ್ನು ಅವರಿಗೆ ಅರ್ಪಿಸುತ್ತೇನೆ’ ಎಂದು ರಜನಿಕಾಂತ್‌ ಹೇಳಿದ್ದಾರೆ.

ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ ಅವರು ತಮ್ಮ ಹಿರಿಯ ಸಹೋದರ ಸತ್ಯನಾರಾಯಣ ರಾವ್ ಗಾಯಕ್‌ವಾಡ್‌ ಅವರನ್ನು ನೆನಪಿಸಿದ್ದಾರೆ. ‘ಸತ್ಯನಾರಾಯಣ ಅವರು ನನಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ನನ್ನ ಗುರು ಕೆ.ಬಾಲಚಂದರ್ ಅವರು ಈ ರಜನಿಕಾಂತ್ ಎಂಬ ಕಲಾವಿದನನ್ನು ಹುಟ್ಟು ಹಾಕಿದರು’ ಎಂದು ಭಾವುಕರಾಗಿ ನುಡಿದಿದ್ದಾರೆ.

ADVERTISEMENT

ಶಿಕ್ಷಣ ಮುಗಿಸಿದ ಬಳಿಕ ರಜನಿಕಾಂತ್‌ ಹಲವು ಕೆಲಸ ಮಾಡಿದರು. ಕೆಲ ಕಾಲ ಬಸ್‌ ಕಂಡಕ್ಟರ್‌ ಆಗಿ ದುಡಿದಿದ್ದರು. ರಾಜ್‌ ಬಹದ್ದೂರ್ ನೆರವಿನಿಂದ ಮದ್ರಾಸ್‌ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ಗೆ ಸೇರಿದರು. ಅಲ್ಲಿಂದ ಭಾರತೀಯ ಚಿತ್ರರಂಗದ ಮೇರು ನಟನಾಗಿ ಬೆಳೆದದ್ದು ಈಗ ಇತಿಹಾಸ.

ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಮೂಲ ಬೇರುಗಳನ್ನು, ನೆರವಾದವರನ್ನು ಪ್ರೀತಿಯಿಂದ ನೆನಪಿಸಿ ಪ್ರಶಸ್ತಿ ಅರ್ಪಿಸಿದ್ದಾರೆ ರಜನಿಕಾಂತ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.