ಗುಮ್ಮಟಗಳ ನಗರ ವಿಜಯಪುರದಲ್ಲಿ ರಾಖಾ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ವಿಜಯಪುರದ ಹಲವು ವಿದ್ಯಾಸಂಸ್ಥೆಗಳ ಮಾಲೀಕರೂ ಆದ ಡಾ.ಕೆ.ಬಿ.ನಾಗೂರ್(ಬಾಬು) ಅವರ ನಿರ್ಮಾಣದ ಚಿತ್ರ ಇದಾಗಿದ್ದು, ಸಾಹಿತಿ, ಸಂಭಾಷಣೆಗಾರ ಮಳವಳ್ಳಿ ಸಾಯಿಕೃಷ್ಣ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ನಟ ಕ್ರಾಂತಿ ಈ ಚಿತ್ರಕ್ಕೆ ಕಥೆ ಬರೆದಿದ್ದು, ಚಿತ್ರದ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ.
ತಂದೆ- ಮಕ್ಕಳ ಸಂಬಂಧ ಮೊದಲು ಹೇಗಿತ್ತು, ಈಗ ಹೇಗಿದೆ ಅಂತ ಹೇಳುವ ಚಿತ್ರವಿದು.
ನಿರ್ದೇಶಕ ಮಳವಳ್ಳಿ ಸಾಯಿಕೃಷ್ಣ ಮಾತನಾಡಿ, ‘ಸಂಭಾಷಣೆ ಬರೆಸಲೆಂದು ಬಂದವರು ನಿರ್ದೇಶನದ ಜವಾಬ್ದಾರಿ ಕೊಟ್ಟರು. ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆದಿದೆ. ಎರಡನೇ ಹಂತದಲ್ಲಿ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ಹೇಳಿದರು.
ನಾಯಕ ಕ್ರಾಂತಿ ಮಾತನಾಡಿ, ‘ ಇದು ಎರಡನೇ ಚಿತ್ರ. ಮಾಸ್ ಶೇಡ್ ಇರೋ ಪಾತ್ರ ಇದಾಗಿದ್ದು, ತನ್ನ ತಂದೆಗೆ ಶಾಸಕನಿಂದ ಆದ ಅವಮಾನಕ್ಕೆ ಮಗ ಹೇಗೆ ತನ್ನ ಬುದ್ಧಿವಂತಿಕೆಯಿಂದ ಸೇಡು ತೆಗೆದುಕೊಳ್ಳುತ್ತಾನೆ ಎನ್ನುವುದೇ ಕಥೆ’ ಎಂದು ತಿಳಿಸಿದರು.
ಶಿವಾ ಮೂವೀಸ್ ಮೂಲಕ ಡಾ.ಕೆ.ಬಿ. ನಾಗೂರ್(ಬಾಬು) ಚಿತ್ರ ನಿರ್ಮಿಸಿದ್ದು, ನಟಿ ಅಮೃತಾ ಚಿತ್ರದ ನಾಯಕಿ. ಛಾಯಾಗ್ರಾಹಕ ಆರ್.ಡಿ. ನಾಗಾರ್ಜುನ, ಕಲಾವಿದರಾದ ಗಿರೀಶ್ ಜತ್ತಿ, ಮಂಜುನಾಥ ಭಟ್, ರಾಜೇಂದ್ರ ಗುಗ್ವಾಡ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.