ಬೆಂಗಳೂರು: ಗರುಡ ಗಮನ ವೃಷಭ ವಾಹನ, ಟೋಬಿ ಮತ್ತು ಒಂದು ಮೊಟ್ಟೆಯ ಕಥೆ ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ನಟ ರಾಜ್ ಬಿ. ಶೆಟ್ಟಿ ಇದೀಗ ಮತ್ತೊಂದು ಹೊಸ ಕಥೆಯ ಮೂಲಕ ತೆರೆಗೆ ಬರಲು ಸಜ್ಜಾಗಿದ್ದಾರೆ.
ಹೊಸ ಸಿನಿಮಾಕ್ಕೆ ‘ರೂಪಾಂತರ’ ಎಂಬ ಟೈಟಲ್ ಅಂತಿಮಗೊಂಡಿದ್ದು, ಚಿತ್ರದ ಪೋಸ್ಟರ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿದೆ. ಒಂದು ಮೊಟ್ಟೆ ಕಥೆ ಚಿತ್ರದ ತಂಡದ ಜೊತೆಯೇ ಮತ್ತೆ ಕೈಜೋಡಿಸಿರುವ ರಾಜ್ ಬಿ. ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ವಿಷಯ ಹಂಚಿಕೊಂಡಿರುವ ಅವರು, ‘ಕೆಲ ಸಿನೆಮಾಗಳು ಮನಸ್ಸಿಗೆ ಬಲು ಹತ್ತಿರ. ಅಂತಹ ಒಂದು ಸುಂದರ ಚಿತ್ರ ರೂಪಾಂತರ. ಈ ಸಿನಿಮಾದ ಭಾಗವಾಗಿರುವುದು, ಜತೆಗೆ ಈ ಚಿತ್ರವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ಜವಾಬ್ದಾರಿ ನನಗೆ ಲಭಿಸಿರುವುದು ನನ್ನ ವೃತ್ತಿ ಜೀವನದ ಭಾಗ್ಯ. ಈಗ ರೂಪಾಂತರದ ಪೋಸ್ಟರ್ ಅನ್ನು ನಿಮ್ಮ ಮುಂದೆ ಬಿಡುಗಡೆಗೊಳಿಸುತ್ತಿದ್ದೇವೆ. ಸದ್ಯದಲ್ಲೇ ಚಿತ್ರವೂ ನಿಮ್ಮ ಮುಂದೆ ಬರಲಿದೆ. ಎಂದಿನಂತೆ ಜೊತೆಗಿರಿ’ ಎಂದು ಬರೆದುಕೊಂಡಿದ್ದಾರೆ.
ಒಂದು ಮೊಟ್ಟೆಯ ಕಥೆಯ ನಿರ್ಮಾಪಕರಾದ ಸುಹಾನ್ ಪ್ರಸಾದ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಿಥಿಲೇಶ್ ಎಡವಲತ್ ಅವರು ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.