ನಟಿ ಶ್ರಾವ್ಯಾ ರಾವ್ ಅಭಿನಯದ ‘ಮಾಯಾನಗರಿ’ ತೆರೆಗೆ ಬರಲು ಸಿದ್ಧವಾಗಿದೆ. ಮತ್ತೊಂದು ಚಿತ್ರ ‘ಅಥಿ ಐ ಲವ್ ಯು’ ಇಂದು (ಡಿ.8) ತೆರೆ ಕಾಣುತ್ತಿದೆ. ತಮ್ಮ ಸಿನಿಪಯಣದ ಕುರಿತು ಶ್ರಾವ್ಯಾ ಮಾತಿಗೆ ಸಿಕ್ಕರು...
‘ಅಥಿ ಐ ಲವ್ ಯು’ ಚಿತ್ರದಲ್ಲಿ ನಿಮ್ಮ ಪಾತ್ರವೇನು?
ಇದೊಂದು ಕಲಾತ್ಮಕ ಚಿತ್ರ. ಇಡೀ ಚಿತ್ರದಲ್ಲಿ ಗಂಡ–ಹೆಂಡತಿ ಎರಡೇ ಪಾತ್ರ. ಹೊಸತಾಗಿ ಮದುವೆಯಾದ ಹುಡುಗಿಯ ಬದುಕಿನ ಕಥೆಯನ್ನು ಹೇಳುವ ಚಿತ್ರವಿದು.
‘ಮಾಯಾನಗರಿ’ ಚಿತ್ರದ ಪಾತ್ರದ ಕುರಿತು ಹೇಳಬಹುದೇ?
ಸಿನಿಮಾದಲ್ಲಿ ‘ಮಲ್ಲಿಕಾ’ ಎಂಬ ಪಾತ್ರ ಮಾಡಿರುವೆ. ಹಲವು ಭಾವನೆಗಳಿರುವ ಪಾತ್ರವಿದು. ಅಭಿನಯಕ್ಕೆ ಸಾಕಷ್ಟು ಅವಕಾಶ ಇರುವ, ಸವಾಲನ್ನೂ ಒಡ್ಡುವ ಪಾತ್ರವಿದು.
ನಾಯಕ ಅನೀಶ್ ತೇಜೇಶ್ವರ್ ಜೊತೆಗಿನ ನಟನೆ ಅನುಭವ ಹೇಗಿತ್ತು?
ಅನೀಶ್ ತುಂಬ ಒಳ್ಳೆಯ ನಟ. ಜೊತೆಗೆ ತುಂಬಾ ಪರಿಶ್ರಮಿ. ಹೀಗಾಗಿ ನಟನೆಯಲ್ಲಿ ನಮ್ಮಿಬ್ಬರ ನಡುವೆ ಒಂದು ಆರೋಗ್ಯಯುತ ಸ್ಪರ್ಧೆ ಇತ್ತು. ಇದೊಂದು ‘ಹಾರರ್ ಡ್ರಾಮಾ’ ಇರುವ ಚಿತ್ರ. 100 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ. ಕಲಿಕೆಗೆ ಸಾಕಷ್ಟು ಅವಕಾಶವಿತ್ತು. ದಡ್ಡತನ, ಪ್ರೀತಿ, ಥ್ರಿಲ್ಲರ್ ಅಂಶಗಳಿವೆ. ಚಿಕ್ಕಮಗಳೂರಿನ ಚಳಿಯಲ್ಲಿ ಶೂಟಿಂಗ್ ಮಾಡಿದ್ದು ಒಂದು ಅನನ್ಯ ಅನುಭವ.
ನಿಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾಹಿತಿ ನೀಡಿ.
ಸಿಂಪಲ್ ಸುನಿ ನಿರ್ದೇಶನದ ‘ಮೋಡ ಕವಿದ ವಾತಾವರಣ’ ಚಿತ್ರ ಒಪ್ಪಿಕೊಂಡಿದ್ದೇನೆ. ಹೊಸ ನಾಯಕನೊಬ್ಬನನ್ನು ಈ ಚಿತ್ರದ ಮೂಲಕ ಸುನಿ ಪರಿಚಯಿಸುತ್ತಿದ್ದಾರೆ. ‘ಕನಸೊಂದು ಶುರುವಾಗಿದೆ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಹೊಸಬರ ಇನ್ನೊಂದು ಸಿನಿಮಾ ಮಾತುಕತೆ ಹಂತದಲ್ಲಿದೆ.
ಇಲ್ಲಿಯ ತನಕ ಸಿನಿಪಯಣ ಹೇಗಿತ್ತು?
ಬಾಲ ನಟಿಯಾಗಿ ಆಸಕ್ತಿಯಿಂದ ಚಿತ್ರರಂಗಕ್ಕೆ ಬಂದೆ. ಸಿನಿಮಾವನ್ನು ತುಂಬ ಪ್ರೀತಿಸುತ್ತೇನೆ. ಹೀಗಾಗಿ ಚಿತ್ರೀಕರಣ, ಮೇಕಪ್, ಡೈಲಾಗ್ ಕಲಿಯುವಿಕೆಯಿಂದ ಹಿಡಿದು ಪ್ರಚಾರದ ತನಕ ಸಿನಿಮಾದ ಪ್ರತಿ ಹಂತವನ್ನು ಆಸ್ವಾದಿಸುತ್ತೇನೆ. ಸಿನಿಮಾದ ಹೊರತಾಗಿ ಜಾಹೀರಾತು ಚಿತ್ರೀಕರಣ, ಮಾಡೆಲಿಂಗ್ನಲ್ಲಿ ತೊಡಗಿಸಿಕೊಂಡಿದ್ದೇನೆ.
ಹೆಸರು ಬದಲಿಸಿಕೊಂಡಿದ್ದು ಏಕೆ?
ಸಂಖ್ಯಾಶಾಸ್ತ್ರದ ಪ್ರಕಾರ ‘ಶ್ರಾವ್ಯಾ’ದಿಂದ ‘ಸಾತ್ವಿಕಾ’ ಎಂದು ಹೆಸರು ಬದಲಿಸಿಕೊಂಡಿರುವೆ. ನನ್ನ ಹೆಸರಿನಲ್ಲಿ ‘ರಾವ್’ ಇಲ್ಲ. ಆದರೂ ಎಲ್ಲರೂ ‘ಶ್ರಾವ್ಯಾ ರಾವ್’ ಎಂದು ಕರೆಯುವುದು ರೂಢಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.