ಮಾರಮ್ಮ ದೇವಿ ಕುರಿತಾದ ಕಥೆ ಹೊಂದಿರುವ ಭಕ್ತಿ ಪ್ರಧಾನ ‘ಸಿಂಹರೂಪಿಣಿ’ ಚಿತ್ರದ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಅಕ್ಟೋಬರ್ 17ರಂದು ಚಿತ್ರವು ತೆರೆಗೆ ಬರಲಿದೆ. ಕೆ.ಎಂ.ನಂಜುಂಡೇಶ್ವರ ಕಥೆ ಬರೆದು, ಶ್ರೀಚಕ್ರ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಿಸಿರುವ ಚಿತ್ರಕ್ಕೆ ಕಿನ್ನಾಳ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ದೇವಿ ಇದ್ದಾಳಾ, ಆಕೆಯ ಶಕ್ತಿ ಏನು ಎಂಬಿತ್ಯಾದಿ ಪ್ರಶ್ನೆಗಳಿಗೆ ನನ್ನ ಪಾತ್ರವು ಉತ್ತರ ನೀಡಲಿದೆ. ಅಂದು ‘ಅಣ್ಣಮಯ್ಯ’ ತೆಲುಗು ಚಿತ್ರ ಹಿಟ್ ಆಗಿತ್ತು. ಅದೇ ರೀತಿ ‘ಸಿಂಹರೂಪಿಣಿ’ ಕೂಡ ದೊಡ್ಡ ಯಶಸ್ಸು ಕಾಣಲಿ’ ಎಂದರು ಹಿರಿಯ ನಟ ಸುಮನ್.
‘ಏನೇ ಕಷ್ಟ ಎದುರಾದರೂ ಗ್ರಾಮೀಣ ಭಾಗದಲ್ಲಿ ಅವರು ನಂಬಿರುವಂತಹ ದೇವರ ಮೊರೆ ಹೋಗುತ್ತಾರೆ. ಜಾತ್ರೆ, ಉತ್ಸವಗಳಲ್ಲಿ ಇನ್ನೂ ನಂಬಿಕೆ ಇದೆ ಎನ್ನುವಂಥ ಸಣ್ಣ ಸಣ್ಣ ವಿಷಯಗಳನ್ನು ಹೆಕ್ಕಿ ಪಾತ್ರಗಳ ಮೂಲಕ ತೋರಿಸಲಾಗಿದೆ. ಪ್ರತಿಯೊಂದು ದೇವರಿಗೂ ಹಿನ್ನೆಲೆ ಇರುತ್ತದೆ. ಹಾಗೆಯೇ ದೇವಿಯು ಮಹಾಲಕ್ಷ್ಮಿ ರೂಪದಲ್ಲಿ ಭೂಮಿಗೆ ಬರುತ್ತಾಳೆ. ಮುಂದೆ ಏಕೆ ಮಾರಮ್ಮ ಆಗುತ್ತಾಳೆ ಎಂಬುದಕ್ಕೆ ಚಿತ್ರದಲ್ಲಿ ಉತ್ತರ ನೀಡಲಾಗಿದೆ’ ಎಂದರು ನಿರ್ದೇಶಕರು.
ಯಶ್ ಶೆಟ್ಟಿ, ಯಶಸ್ವಿನಿ, ಅಂಕಿತಾ ಗೌಡ, ದಿವ್ಯಾ ಆಲೂರು, ನೀನಾಸಂ ಅಶ್ವಥ್, ಹರೀಶ್ ರಾಯ್, ವಿಜಯ್ ಚೆಂಡೂರು ಮುಂತಾದವರು ಚಿತ್ರದಲ್ಲಿದ್ದಾರೆ. ಆಕಾಶ್ಪರ್ವ ಸಂಗೀತ, ಕಿರಣ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.