ADVERTISEMENT

ನಟ ರವಿಶಂಕರ್‌ ಪುತ್ರ ಅದ್ವೆ ನಟನೆಯ ‘ಸುಬ್ರಹ್ಮಣ್ಯ’ನ ಮೊದಲ ತುಣುಕು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 11:56 IST
Last Updated 17 ಸೆಪ್ಟೆಂಬರ್ 2024, 11:56 IST
ಅದ್ವೆ 
ಅದ್ವೆ    

ಬಹುಭಾಷಾ ನಟ ರವಿಶಂಕರ್‌ ಅವರ ಪುತ್ರ ಅದ್ವೆ ನಟನೆಯ ‘ಸುಬ್ರಹ್ಮಣ್ಯ’ ಸಿನಿಮಾದ ಗ್ಲಿಂಪ್ಸ್‌ ಬಿಡುಗಡೆಯಾಗಿದೆ. ರವಿಶಂಕರ್‌ ಅವರೇ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಅವರು ಇಪ್ಪತ್ತು ವರ್ಷಗಳ ನಂತರ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದಾರೆ. 

ಇತ್ತೀಚೆಗೆ ದುಬೈನಲ್ಲಿ ನಡೆದ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅದ್ವೆಯನ್ನು ಪರಿಚಯಿಸುವ ಈ ತುಣುಕು ಬಿಡುಗಡೆಯಾಗಿದೆ. ವಿಷಪೂರಿತ ಹಾವುಗಳಿಂದ ತುಂಬಿದ ಬಾವಿಗೆ ಅದ್ವೆ ಹಗ್ಗದ ಮೂಲಕ ಪ್ರವೇಶಿಸುವ, ಆ ಬಾವಿಯಲ್ಲಿರುವ ಪುರಾತನ ಪುಸ್ತಕವನ್ನು ಎತ್ತಿಕೊಂಡು ಹೊರ ಬರುವ ದೃಶ್ಯ ಇದರಲ್ಲಿದ್ದು, ಗ್ರಾಫಿಕ್ಸ್‌ಗೆ ಹೆಚ್ಚಿನ ಒತ್ತು ನೀಡಲಾಗಿದೆ. ‘ಸುಬ್ರಹ್ಮಣ್ಯ’ನ ಈ ಗ್ಲಿಂಪ್ಸ್‌ ತಯಾರಿಗೆ ವಿಎಫ್‌ಎಕ್ಸ್‌ ತಂತ್ರಜ್ಞರು ನಾಲ್ಕು ತಿಂಗಳಿನಿಂದ ದುಡಿದಿದ್ದಾರೆ. ಚಿತ್ರದ ಕ್ರಿಯೇಟಿವ್ ನಿರ್ಮಾಪಕ ಮತ್ತು ವಿಎಫ್‌ಎಕ್ಸ್ ಮೇಲ್ವಿಚಾರಕ ನಿಖಿಲ್ ಕೋಡೂರು ನೇತೃತ್ವದಲ್ಲಿ ಮುಂಬೈ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈನ ಪ್ರಸಿದ್ಧ ಸ್ಟುಡಿಯೋಗಳಲ್ಲಿ ವಿಎಫ್‌ಎಕ್ಸ್ ಕೆಲಸ ನಡೆದಿದೆ ಎಂದಿದೆ ಚಿತ್ರತಂಡ. ‘ಸುಬ್ರಹ್ಮಣ್ಯ’ ಸಿನಿಮಾ ಸೋಶಿಯೋ-ಫ್ಯಾಂಟಸಿ ಶೈಲಿಯ ಸಿನಿಮಾವಾಗಿದ್ದು ಜೊತೆ ಅಡ್ವೆಂಚರ್ ಅಂಶಗಳೂ ಈ ಸಿನಿಮಾದಲ್ಲಿದೆ.

ಈ ಪ್ಯಾನ್‌ ಇಂಡಿಯಾ ಸಿನಿಮಾವನ್ನು ಎಸ್.ಜಿ ಮೂವೀ ಮೇಕರ್ಸ್ ಸಂಸ್ಥೆಯ ಮೂಲಕ ತಿರುಮಲ ರೆಡ್ಡಿ ಹಾಗೂ ಅನಿಲ್ ಕಡಿಯಾಲ ಅವರು ನಿರ್ಮಾಣ ಮಾಡುತ್ತಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ವಿಘ್ನೇಶ್ ರಾಜ್ ಛಾಯಾಚಿತ್ರಗ್ರಹಣ, ವಿಜಯ್ ಎಂ. ಕುಮಾರ್ ಸಂಕಲನ ಚಿತ್ರಕ್ಕಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.