’ಅಪ್ಪ ತೀರಿದರು ಅನ್ನುವ ಸತ್ಯವನ್ನೇ ಜೀರ್ಣಿಸಿಕೊಳ್ಳಲಾಗಲಿಲ್ಲ. ಅವರಿಲ್ಲದ ಆ ಕಾಲ, ಆ ಖಾಲಿತನ ಎರಡನ್ನೂ ತಡೆದುಕೊಳ್ಳುವುದಾಗಲಿಲ್ಲ. ಆಗ ಅದ್ನಾನ್ ಸಾಮಿ ಅವರು ಬೆಂಬಲಿಸಿದ್ದು ಮರೆಯಲಾಗುವುದಿಲ್ಲ‘ ಫರ್ದಿನ್ ಖಾನ್ ತಮ್ಮ ಕಷ್ಟದ ದಿನಗಳನ್ನು ಹೀರಾಮಂಡಿ ವೆಬ್ ಸಿರೀಸ್ ಬಿಡುಗಡೆಯ ನಂತರ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅತಿಯಾದ ತೂಕ, ಬದುಕಿನಲ್ಲಿ ಉತ್ಸಾಹ ಕಳೆದುಕೊಂಡಿದ್ದು, ಖಿನ್ನತೆಗೆ ಜಾರಿದ್ದು ಎಲ್ಲವನ್ನೂ ನೆನಪಿಸಿಕೊಂಡಿದ್ದಾರೆ.
ಹನ್ನೆರಡು ವರ್ಷಗಳ ನಂತರ ಮತ್ತೆ ತೆರೆಗೆ ಮರಳಿರುವ ಫರ್ದಿನ್ ಖಾನ್ ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ‘ಈ ಹನ್ನೆರಡು ವರ್ಷಗಳಲ್ಲಿ ಬದುಕು ಬದಲಾಗಿದೆ. ಬದುಕನ್ನು ನೋಡುವ ದೃಷ್ಟಿಕೋನವೂ ಬದಲಾಗಿದೆ. ಜನರು ಸಿನಿಮಾಗಳನ್ನು ನೋಡುವ ಬಗೆ, ಗ್ರಹಿಸುವ ಬಗೆ ಬದಲಾಗಿದೆ. ಹಾಗೆಯೇ ಸಿನಿಮಾದ ಭಾಷ್ಯವೂ ಬದಲಾಗಿದೆ. ಇವೆಲ್ಲವನ್ನೂ ನೋಡಿದಾಗ ನಿಜವಾಗಿಯೂ ಮತ್ತೆ ಒತ್ತಡಕ್ಕೆ ಒಳಗಾಗಿದ್ದೆ. ಆದರೆ ನನ್ನ ಅದೃಷ್ಟ, ಸ್ಕ್ರೀನ್ಗೆ ಮರಳಿದ್ದು ಒಟಿಟಿ ಮೂಲಕ. ಇದು ತುಸು ಸಮಾಧಾನ ತಂದಿದೆ. ಆದರೆ ಹೊಸಬನಂತೆಯೇ ಸಾಕಷ್ಟು ಕುತೂಹಲಿಯಾಗಿದ್ದೆ. ಎಲ್ಲವೂ ಹೊಸದೆನಿಸುತ್ತಿದೆ‘ ಎಂದು ಹೇಳಿದ್ದಾರೆ.
ಫಿರೋಜ್ ಖಾನ್ ತೀರಿ ಹೋದ ನಂತರ ಖಿನ್ನತೆಗೆ ಒಳಗಾಗಿದ್ದ ಫರ್ದಿನ್ ಖಾನ್ ಸ್ಥೂಲಕಾಯ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಅತಿತೂಕದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ತೂಕ ನಿರ್ವಹಣೆ ಮತ್ತು ತೂಕ ಇಳಿಸಲು ಅದ್ನಾನ್ ಸಾಮಿ ಅವರು ಸಹಾಯ ಮಾಡಿದ್ದರು. ಗಾಯಕ ಮತ್ತು ಪಿಯಾನೊ ವಾದಕ ಅದ್ನಾನ್ ಸಾಮಿ ಅವರೂ ತಮ್ಮ ತೂಕವನ್ನು ಗಮನಾರ್ಹವಾಗಿ ಇಳಿಸಿಕೊಂಡಿದ್ದರು.
2000ನೇ ಇಸ್ವಿಯಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಜಂಗಲ್ ಚಿತ್ರದಿಂದ ಸಿನಿಮಾರಂಗಕ್ಕೆ ಬಂದಿದ್ದ ಫರ್ದಿನ್ ಖಾನ್ ಹನ್ನೆರಡು ವರ್ಷ ಚಿತ್ರರಂಗದಿಂದ ದೂರ ಉಳಿದಿದ್ದರು. ಈಗ ಆಗಸ್ಟ್ನಲ್ಲಿ ಅವರು ತಾರಾಗಣದಲ್ಲಿರುವ ಖೇಲ್ಖೇಲ್ ಮೆ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ತಾಪ್ಸಿ ಪನ್ನು ಸಹ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.