ADVERTISEMENT

IC-814– ವೆಬ್‌ ಸರಣಿ: ನೈಜ ಆರೋಪಿಗಳ ಹೆಸರು ಪ್ರಕಟಿಸಿದ ನೆಟ್‌ಫ್ಲಿಕ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2024, 15:00 IST
Last Updated 3 ಸೆಪ್ಟೆಂಬರ್ 2024, 15:00 IST
<div class="paragraphs"><p>ಐಸಿ–814– ದಿ ಕಂದಹಾರ್‌ ಹೈಜಾಕ್‌’&nbsp;ವೆಬ್‌ಸರಣಿ</p></div>

ಐಸಿ–814– ದಿ ಕಂದಹಾರ್‌ ಹೈಜಾಕ್‌’ ವೆಬ್‌ಸರಣಿ

   

ನವದೆಹಲಿ: ಕಂದಹಾರ್ ವಿಮಾನ ಅಪಹರಣ ಪ್ರಕರಣ ಆಧಾರಿತ ‘ಐಸಿ814–ದಿ ಕಂದಹಾರ್ ಹೈಜಾಕ್’ ವೆಬ್ ಸರಣಿಯಲ್ಲಿ ಬಳಸಲಾಗಿರುವ ಗುಪ್ತ ನಾಮಗಳೊಂದಿಗೆ ಭಯೋತ್ಪಾದಕರ ನೈಜ ಹೆಸರನ್ನು ಪ್ರಕಟಿಸುವುದಾಗಿ ನೆಟ್‌ಫ್ಲಿಕ್ಸ್‌ ಮುಖ್ಯಸ್ಥರು ಹೇಳಿದ್ದಾರೆ.

1999ರ ಕಂದಹಾರ್ ವಿಮಾನ ಅಪಹರಣದಲ್ಲಿ ಭಾಗಿಯಾದ ಐವರು ಭಯೋತ್ಪಾದಕರು ಕೃತ್ಯದ ವೇಳೆ ತಮ್ಮ ಹೆಸರುಗಳನ್ನು ಬದಲಿಸಿಕೊಂಡಿದ್ದರು. ಆ ಹೆಸರುಗಳನ್ನೇ ವೆಬ್ ಸರಣಿಯಲ್ಲಿ ನಿರ್ದೇಶಕರು ಬಳಸಿಕೊಂಡಿದ್ದರು. ಇದರಲ್ಲಿ ಭೋಲಾ ಹಾಗೂ ಶಂಕರ್ ಎಂಬ ಹಿಂದೂ ಹೆಸರುಳ್ಳ ಎರಡು ಪಾತ್ರಗಳಿದ್ದು, ಈ ಕುರಿತು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಸಹಿತ ಹಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು.

ADVERTISEMENT

‘ವಿಮಾನ ಅಪಹರಣಕಾರರು ತಮ್ಮನ್ನು ಮುಸ್ಲಿಂ ಗುರುತು ಮರೆಮಾಚಲು ಹೆಸರುಗಳನ್ನು ಬದಲಿಸಿದ್ದರು. ಆದರೆ ಚಿತ್ರ ತಯಾರಕರಾದ ಅನುಭವ ಸಿನ್ಹಾ ಅವರು, ಅಪಹರಣಕಾರರ ಕ್ರಿಮಿನಲ್ ಉದ್ದೇಶವನ್ನು ಕಾನೂನು ಬದ್ಧಗೊಳಿಸುವ ಪ್ರಯತ್ನ ನಡೆಸಿದ್ದಾರೆ. ಇದೇ ಸರಣಿಯನ್ನು ಹತ್ತು ವರ್ಷಗಳ ನಂತರ ನೋಡುವವರಿಗೆ ಹಿಂದೂಗಳೇ ವಿಮಾನ ಅಪಹರಿಸಿದ್ದು ಎಂಬ ತಪ್ಪು ಕಲ್ಪನೆ ಮೂಡಲಿದೆ. ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳು, ಎಲ್ಲಾ ಮುಸ್ಲಿಮರ ಅಪರಾಧಗಳನ್ನು ಮರೆಮಾಚುವ ಉದ್ದೇಶ ಹೊಂದಲಾಗಿದೆ. 70ರ ದಶಕದ ನಂತರ ಸಿನಿಮಾ ಮಾಧ್ಯಮವನ್ನು ಕಮ್ಯುನಿಸ್ಟರು ತಮ್ಮ ಅನುಕೂಲಕ್ಕಾಗಿ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಅದು ಈಗಲೂ ಮುಂದುವರಿದಿದೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಮಾಳವಿಯಾ ಆರೋಪಿಸಿದ್ದರು.

ಈ ವಿಷಯವಾಗಿ ಸಲ್ಲಿಕೆಯಾದ ದೂರು ಆಧರಿಸಿ ಮಾಹಿತಿ ಮತ್ತು ಪ್ರಸಾರ ಇಲಾಖೆ ನೆಟ್‌ಫ್ಲಿಕ್ಸ್‌ಗೆ ನೋಟಿಸ್ ಜಾರಿ ಮಾಡಿತ್ತು. 

ಇದಾದ ಬೆನ್ನಲ್ಲೇ ನೆಟ್‌ಫ್ಲಿಕ್ಸ್‌ನ ಭಾರತದ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್‌ ಅವರು ಅಧಿಕಾರಿಗಳನ್ನು ಮಂಗಳವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಇದಾದ ಬೆನ್ನಲ್ಲೇ ವೆಬ್ ಸರಣಿ ಆರಂಭದಲ್ಲಿ ಪ್ರಕಟಿಸುವ ‘ಹಕ್ಕು ನಿರಾಕರಣೆ’ಯಲ್ಲಿ ಕೃತ್ಯದಲ್ಲಿ ಪಾಲ್ಗೊಂಡ ಭಯೋತ್ಪಾದಕರ ನೈಜ ಹೆಸರು ಹಾಗೂ ರಹಸ್ಯ ಸಂಕೇತ ರೂಪದ ಹೆಸರು ಎರಡನ್ನೂ ಪ್ರಸಾರ ಮಾಡಲಾಗುವುದು ಎಂದು ನೆಟ್‌ಫ್ಲಿಕ್ಸ್ ಹೇಳಿದೆ.

ಪ್ರಕರಣದ ಹಿನ್ನೆಲೆ: 1999ರ ಡಿ. 24ರಂದು ಇಂಡಿಯನ್ ಏರ್‌ಲೈನ್ಸ್‌ಗೆ ಸೇರಿದ್ದ ವಿಮಾನವನ್ನು ಪಾಕಿಸ್ತಾನ ಮೂಲದ ಹರ್ಕತ್ ಉಲ್ ಮುಜಾಹಿದ್ದೀನ್ ಭಯೋತ್ಪಾದಕ ತಂಡವು ಅಪಹರಿಸಿತ್ತು. ವಿಮಾನದಲ್ಲಿ 191 ಜನ ಪ್ರಯಾಣಿಕರಿದ್ದರು. ಈ ವಿಮಾನವು ನೇಪಾಳದ ಕಠ್ಮಂಡುವಿನಿಂದ ದೆಹಲಿಯತ್ತ ಹೊರಟಿತ್ತು. ವಿಮಾನ ಟೇಕ್‌ಆಫ್ ಆದ ಕೆಲವೇ ಹೊತ್ತಿನಲ್ಲಿ ಒಳಗಿದ್ದ ಅಪಹರಣಕಾರರು ವಿಮಾನವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ನಂತರ ಅದು ಅಮೃತಸರ, ಲಾಹೋರ್, ದುಬೈನಲ್ಲಿ ಇಳಿದು, ಅಂತಿಮವಾಗಿ ಆಫ್ಗಾನಿಸ್ತಾನದ ಕಂದಹಾರ್‌ನಲ್ಲಿ ಇಳಿಯಿತು.

ಅಪಹರಣಕಾರಾರ ವಶದಲ್ಲಿದ್ದ ಪ್ರಜೆಗಳನ್ನು ಸುರಕ್ಷಿತವಾಗಿ ಕರೆತರಲು ಭಾರತದ ಜೈಲಿನಲ್ಲಿದ್ದ ಮಸೂದ್ ಅಜರ್, ಅಹ್ಮದ್ ಒಮರ್ ಸಯೀದ್ ಶೇಖ್ ಹಾಗೂ ಮುಷ್ತಾಕ್‌ ಅಹ್ಮದ್ ಝರ್ಗಾರ್‌ ಎಂಬ ಮೂವರು ಉಗ್ರರನ್ನು ಬಿಡುಗಡೆ ಮಾಡುವುದು ಅಂದಿನ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಅವರಿಗೆ ಅನಿವಾರ್ಯವಾಯಿತು. ವರದಿಗಳ ಪ್ರಕಾರ ತಾಲಿಬಾನ್‌ ಆಡಳಿತವು ಅಪಹರಣಕಾರರಿಗೆ ನೆರವಾಗುವುದರ ಜತೆಗೆ, ಅವರು ಸುರಕ್ಷಿತವಾಗಿ ಪಾಕಿಸ್ತಾನ ತಲುಪಲು ನೆರವಾಗಿತ್ತು ಎಂದೆನ್ನಲಾಗಿದೆ.

2000 ಇಸವಿಯ ಜ. 6ರಂದು ಕೇಂದ್ರ ಸರ್ಕಾರವು ಅಪಹರಣಕಾರರ ಹೆಸರು ಬಿಡುಗಡೆ ಮಾಡಿತ್ತು. ಇಬ್ರಾಹಿಂ ಅತ್ತರ್, ಶಹೀದ್ ಅಖ್ತರ್ ಸಯೀದ್, ಸುನ್ನಿ ಅಹ್ಮದ್ ಖ್ವಾಜಿ, ಮಿಸ್ತ್ರಿ ಜಹೂರ್ ಇಬ್ರಾಹಿಂ ಹಾಗೂ ಶಾಕಿರ್‌ ಐಸಿ 814 ಅಪಹರಿಸಿದ್ದರು. ವಿಮಾನದೊಳಗಿದ್ದ ಅಪಹರಣಕಾರರು ತಮ್ಮನ್ನು ಪರಸ್ಪರ ಕ್ರಮವಾಗಿ (1) ಚೀಫ್‌, (2) ಡಾಕ್ಟರ್‌, (3) ಬರ್ಗರ್, (4) ಭೋಲಾ, (5) ಶಂಕರ್‌ ಎಂದು ಪರಸ್ಪರ ಸಂಬೋಧಿಸುತ್ತಿದ್ದರು’ ಎಂದು ಗೃಹ ಇಲಾಖೆ ಹೇಳಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.