ADVERTISEMENT

ಆಳ–ಅಗಲ: ವಿಮೆ ಮಾಡಿಸುವ ರೈತರು ಹೆಚ್ಚಿದರೂ ಇಳಿಯುತ್ತಿದೆ ಕೇಂದ್ರ ಸರ್ಕಾರದ ವೆಚ್ಚ

ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 20:24 IST
Last Updated 9 ಫೆಬ್ರುವರಿ 2024, 20:24 IST
<div class="paragraphs"><p>ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಬರ ಬೆಳ ಒಣಗಿರುವ ದೃಶ್ಯ–ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌</p></div>

ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದ ಬರ ಬೆಳ ಒಣಗಿರುವ ದೃಶ್ಯ–ಪ್ರಜಾವಾಣಿ ಚಿತ್ರ/ತಾಜುದ್ದೀನ ಆಜಾದ್‌

   

ಪ್ರವಾಹ ಮತ್ತು ತೀವ್ರ ಬರದಂತಹ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರೈತರಿಗಾಗುವ ಆರ್ಥಿಕ ನಷ್ಟವನ್ನು ತುಂಬಿಕೊಡುವುದರಲ್ಲಿ ಬೆಳೆ ವಿಮೆ ಯೋಜನೆಯದ್ದು ಪ್ರಮುಖ ಪಾತ್ರ. ಈ ಯೋಜನೆಯ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರದ ಪಾಲೇ ಹೆಚ್ಚು. ರೈತರಿಗೆ ಬೆಳೆ ವಿಮೆ ಭದ್ರತೆಯನ್ನು ಒದಗಿಸುವಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚು ಹೊರೆಯಾಗದಂತೆ ಯುಪಿಎ ಸರ್ಕಾರವು ಈ ಯೋಜನೆಯ ನಿಯಮಗಳನ್ನು ರೂಪಿಸಿತ್ತು. ಆದರೆ ಈ ಯೋಜನೆಯ ನಿಯಮಗಳನ್ನು ಬದಲಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು, ತನ್ನ ಆರ್ಥಿಕ ಹೊಣೆಗಾರಿಕೆಯನ್ನು ಕಡಿಮೆ ಮಾಡಿಕೊಂಡಿದೆ

ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರೈತರಿಗೆ ಬೆಳೆ ನಷ್ಟವಾದರೆ, ಅದರ ಆರ್ಥಿಕ ನಷ್ಟವನ್ನು ತುಂಬಿಕೊಡುವ ವಿಮೆ ಯೋಜನೆಗಳು ಭಾರತದಲ್ಲಿ 1970ರ ದಶಕದಲ್ಲೇ ಆರಂಭವಾಗಿದ್ದವು. 2010ರವರೆಗೆ ಪ್ರಾಯೋಗಿಕವಾಗಿ ಅಂತಹ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿತ್ತು. 1999–2000ನೇ ಆರ್ಥಿಕ ವರ್ಷದಲ್ಲಿ ಪ್ರಾಯೋಗಿಕ ಯೋಜನೆಯನ್ನೇ ದೊಡ್ಡ ಪ್ರಮಾಣದಲ್ಲಿ ಜಾರಿಗೆ ತರಲಾಗಿತ್ತು. 2013–14ನೇ ಆರ್ಥಿಕ ವರ್ಷದಲ್ಲಿ ಈ ಎಲ್ಲಾ ಯೋಜನೆಗಳನ್ನು ಒಗ್ಗೂಡಿಸಿದ ಯುಪಿಎ ಸರ್ಕಾರವು ‘ರಾಷ್ಟ್ರೀಯ ಬೆಳೆ ವಿಮೆ ಯೋಜನೆ’ಯನ್ನು ಜಾರಿಗೆ ತಂದಿತು. 2016ರಲ್ಲಿ ಈ ಯೋಜನೆಯನ್ನು ಮತ್ತಷ್ಟು ಸುಧಾರಿಸಿದ ಕೇಂದ್ರದ ಎನ್‌ಡಿಎ ಸರ್ಕಾರವು, ‘ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ’ ಎಂದು ಮರುನಾಮಕಾರಣ ಮಾಡಿತು. ರೈತರಿಗೆ ಅನುಕೂಲ ತಂದುಕೊಟ್ಟಿದ್ದ ಈ ಯೋಜನೆಯಿಂದ ಕೇಂದ್ರ ಸರ್ಕಾರದ ಮೇಲಿನ ಹೊಣೆಗಾರಿಕೆಯೂ ಏರಿಕೆಯಾಗುತ್ತಿತ್ತು. 2020ರಲ್ಲಿ ಯೋಜನೆಯ ನಿಯಮಗಳಿಗೆ ಬಿಜೆಪಿ ಸರ್ಕಾರವು ಬದಲಾವಣೆ ತಂದಿತು. ಅಲ್ಲಿಂದ ಕೇಂದ್ರ ಸರ್ಕಾರದ ಆರ್ಥಿಕ ಹೊಣೆಗಾರಿಕೆ ಇಳಿಯುತ್ತಲೇ ಇದೆ.

ADVERTISEMENT

ಯುಪಿಎ ಜಾರಿಗೆ ತಂದಿದ್ದ ರಾಷ್ಟ್ರೀಯ ಬೆಳೆ ವಿಮೆ ಯೋಜನೆಯಲ್ಲಿ ಮತ್ತು ಎನ್‌ಡಿಎ ಜಾರಿಗೆ ತಂದಿದ್ದ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಲ್ಲಿ ಬೆಳೆ ಸಾಲ ಪಡೆದ ರೈತರು ಬೆಳೆ ವಿಮೆ ಮಾಡಿಸುವುದು ಕಡ್ಡಾಯವಾಗಿತ್ತು. ಮುಂಗಾರು ಬೆಳೆಗೆ ವಿಮೆ ಮಾಡಿಸಿದರೆ, ವಿಮೆ ಮಾಡಿಸಿದ ಮೊತ್ತದ ಶೇ 2ರಷ್ಟನ್ನು ಮಾತ್ರ ಪ್ರೀಮಿಯಂ ಎಂದು ರೈತರು ಕಟ್ಟಬೇಕಿತ್ತು. ಉಳಿದ ಪ್ರೀಮಿಯಂ ಮೊತ್ತವನ್ನು ಕೇಂದ್ರ ಸರ್ಕಾರವು ಶೇ 50ರಷ್ಟು ಮತ್ತು ರಾಜ್ಯ ಸರ್ಕಾರವು ಶೇ 50ರಷ್ಟು ಕಟ್ಟುತ್ತಿದ್ದವು. ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರೈತರಿಗೂ ಈ ಪ್ರೀಮಿಯಂ ಕಟ್ಟಬೇಕಿದ್ದರಿಂದ ಅದು ದೊಡ್ಡ ಮೊತ್ತವಾಗುತ್ತಿತ್ತು. ಪ್ರತಿ ಬಜೆಟ್‌ನಲ್ಲಿ ಬೆಳೆ ವಿಮೆ ಯೋಜನೆಯ ಪ್ರೀಮಿಯಂ ಸಹಾಯಧನ ಎಂದು ಪ್ರತ್ಯೇಕ ಶೀರ್ಷಿಕೆಯಲ್ಲಿ ಅನುದಾನ ತೆಗೆದಿರಿಸಬೇಕಿತ್ತು. 2018–19ನೇ ಸಾಲಿನಲ್ಲಿ ಕೇಂದ್ರ ಸರ್ಕಾರವು ಹೀಗೆ ₹8,903 ಕೋಟಿಯನ್ನು ವೆಚ್ಚ ಮಾಡಿತ್ತು. 2019–20ನೇ ಸಾಲಿನಲ್ಲಿ ಈ ಮೊತ್ತ ₹10,062 ಕೋಟಿಗೆ ಏರಿಕೆಯಾಗಿತ್ತು. ಆನಂತರವೇ ಕೇಂದ್ರದ ಬಿಜೆಪಿ ಸರ್ಕಾರವು ಯೋಜನೆಯ ನಿಯಮಗಳನ್ನು ಬದಲಿಸಿದ್ದು.

2020ರಲ್ಲಿ ಕೇಂದ್ರ ಸರ್ಕಾರವು ‘ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ ಕಾರ್ಯಾಚರಣಾ ಮಾರ್ಗಸೂಚಿಗಳು’ ಎಂಬ ಕೈಪಿಡಿಯನ್ನು ಜಾರಿಗೆ ತಂದಿತು. 2020–21ನೇ ಸಾಲಿನಿಂದಲೇ ಅದನ್ನು ಜಾರಿಗೆ ತರಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿತು. ಈ ಮಾರ್ಗಸೂಚಿಗಳಲ್ಲಿ ಹಲವು ಬದಲಾವಣೆಗಳಿದ್ದರೂ, ಪ್ರಮುಖ ಬದಲಾವಣೆ ಬೆಳೆ ಸಾಲಕ್ಕೆ ಸಂಬಂಧಿಸಿದ್ದು. ಈ ಹಿಂದೆ ಜಾರಿಯಲ್ಲಿದ್ದ ನಿಯಮದ ಪ್ರಕಾರ ಬೆಳೆ ಸಾಲ ಪಡೆದ ರೈತ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕಿತ್ತು. ಆ ಬೆಳೆ ವಿಮೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಡ್ಡಾಯವಾಗಿ ಬೆಳೆ ವಿಮೆ ಪ್ರೀಮಿಯಂ ಸಹಾಯಧನ ಒದಗಿಸಬೇಕಿತ್ತು. ತಿದ್ದುಪಡಿ ತರಲಾದ ನಿಯಮದಲ್ಲಿ, ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕಿಲ್ಲ ಎಂದು ಹೇಳಲಾಯಿತು. ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದೇ ಇರುವ ರೈತರೆಲ್ಲರಿಗೂ ಬೆಳೆ ವಿಮೆ ಮಾಡಿಸುವುದು ಐಚ್ಛಿಕ ಎಂದು ಹೊಸ ನಿಯಮವನ್ನು ಸೇರಿಸಲಾಯಿತು.

ಇದರ ಜತೆಯಲ್ಲಿ ಬೆಳೆ ವಿಮೆ ಮೇಲೆ ಕೇಂದ್ರ ಸರ್ಕಾರವು ನೀಡುತ್ತಿದ್ದ ವಿಮೆ ಪ್ರೀಮಿಯಂ ಸಹಾಯಧನದ ಪ್ರಮಾಣಕ್ಕೂ ಮಿತಿ ಹೇರಲಾಯಿತು. ಕೇಂದ್ರ ಸರ್ಕಾರವು ವಿಮೆ ಪ್ರೀಮಿಯಂ ಸಹಾಯಧನದ ರೂಪದಲ್ಲಿ ನೀಡಬೇಕಿದ್ದ ಮೊತ್ತಕ್ಕೆ ಒಟ್ಟು ವಿಮೆ ಪ್ರೀಮಿಯಂನ ಶೇ 25ರಷ್ಟರ ಮಿತಿ ಹೇರಿತು. ಕೆಲವು ರಾಜ್ಯ ಸರ್ಕಾರಗಳು ತಾವೂ ಅಷ್ಟೇ ಮಿತಿಯನ್ನು ಅನುಸರಿಸಿದವು. ಕೆಲವು ರಾಜ್ಯಗಳು ಈ ಮಿತಿಯನ್ನು ಸಡಿಲಿಸಿದವು. ಹೀಗೆ ಮಿತಿಯನ್ನು ಸಡಿಲಿಸಿ ರೈತರಿಗೆ ಹೆಚ್ಚಿನ ಪ್ರಮಾಣದ ವಿಮೆ ಪ್ರೀಮಿಯಂ ಸಹಾಯಧನ ನೀಡಿದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕವು ಈ ಮಿತಿಯನ್ನು ನೀರಾವರಿ ಜಿಲ್ಲೆಗಳಿಗೆ ಶೇ 35ಕ್ಕೆ ಮತ್ತು ಮಳೆಯಾಶ್ರಿತ ಜಿಲ್ಲೆಗಳಿಗೆ ಶೇ 40ಕ್ಕೆ ಏರಿಕೆ ಮಾಡಿತು. ಹೀಗೆ ಮಿತಿಯನ್ನು ಹೆಚ್ಚಿಸಿದ ರಾಜ್ಯ ಸರ್ಕಾರಗಳ ಆರ್ಥಿಕ ಹೊರೆ ಸಹಜವಾಗಿಯೇ ಏರಿಕೆಯಾಯಿತು, ಕೇಂದ್ರ ಸರ್ಕಾರದ ಹೊರೆ ಕಡಿಮೆಯಾಯಿತು. 

ಈ ಬದಲಾವಣೆಗಳಿಂದ ಕೇಂದ್ರ ಸರ್ಕಾರದ ಹೊರೆ ಕಡಿಮೆಯಾಗಿದೆ ಎಂಬುದನ್ನು ಕೇಂದ್ರ ಸರ್ಕಾರದ ದಾಖಲೆಗಳೇ ಹೇಳುತ್ತವೆ. ಕೇಂದ್ರದ ಬಜೆಟ್‌ ವೆಚ್ಚ ಶೀರ್ಷಿಕೆಗಳು, ರಾಜ್ಯಸಭೆ ಮತ್ತು ಲೋಕಸಭೆಗೆ ಕೇಂದ್ರ ಸರ್ಕಾರ ನೀಡಿದ ಮಾಹಿತಿಗಳು ಇದನ್ನೇ ಸೂಚಿಸುತ್ತವೆ. 2019–20ರಲ್ಲಿ ಈ ಯೋಜನೆಗೆ ವಿಮೆ ಪ್ರೀಮಿಯಂ ಸಹಾಯಧನ ಎಂದು ಕೇಂದ್ರ ಸರ್ಕಾರವು ₹10,062 ಕೋಟಿಯನ್ನು ವೆಚ್ಚ ಮಾಡಿತ್ತು. ಆದರೆ ಬದಲಾದ ನಿಯಮಗಳು ಜಾರಿಗೆ ಬಂದ ಮರುವರ್ಷವೇ ಈ ವೆಚ್ಚವು ₹ 8,734 ಕೋಟಿಗಳಿಗೆ ಇಳಿಕೆಯಾಯಿತು. ನಂತರದ ವರ್ಷಗಳಲ್ಲಿ ಈ ವೆಚ್ಚ ಇನ್ನಷ್ಟು ಇಳಿಕೆಯಾಗಿದೆ. ಈ ಹಿಂದಿನ ಐದು ಆರ್ಥಿಕ ವರ್ಷಗಳಲ್ಲಿ ದೇಶದ ಹಲವೆಡೆ ತೀವ್ರ ಪ್ರವಾಹ ಮತ್ತು ತೀವ್ರ ಬರ ತಲೆದೋರಿತ್ತು. ಹೀಗಾಗಿ ಹೆಚ್ಚಿನ ರೈತರು ಬೆಳೆ ವಿಮೆಯ ಮೊರೆ ಹೋಗಿದ್ದಾರೆ. ಆದರೆ, ಈ ಯೋಜನೆ ಮೇಲೆ ಕೇಂದ್ರ ಸರ್ಕಾರವು ಮಾಡುತ್ತಿರುವ ವೆಚ್ಚ ಮಾತ್ರ ಇಳಿಕೆಯಾಗುತ್ತಿದೆ.

ಈ ಬಗ್ಗೆಯೂ ರಾಜ್ಯಸಭೆಯಲ್ಲಿ ಕೇಂದ್ರ ಕೃಷಿ ಸಚಿವಾಲಯವನ್ನು ಪ್ರಶ್ನಿಸಲಾಗಿದೆ. ನಿಯಮ ಬದಲಾವಣೆ ಮಾಡಿದ್ದರಿಂದ ಮತ್ತು ಪ್ರೀಮಿಯಂ ಸಹಾಯಧನ ಹಂಚಿಕೆಯನ್ನು ಕಡಿಮೆ ಮಾಡಿದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಆದ ಆರ್ಥಿಕ ಪರಿಣಾಮಗಳೇನು ಎಂದು ಪ್ರಶ್ನಿಸಲಾಗಿದೆ. ಹೊಸ ನಿಯಮಗಳ ಕಾರಣದಿಂದ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೆಚ್ಚುತ್ತಿದೆಯೇ ಎಂದೂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರ ನೀಡಿರುವ ಕೃಷಿ ಸಚಿವಾಲಯವು, ರಾಜ್ಯಗಳ ಮೇಲಿನ ಪರಿಣಾಮದ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದೆ. ಜತೆಗೆ, ತಾನು ಈ ಯೋಜನೆ ಮೇಲೆ ಮಾಡುತ್ತಿರುವ ಒಟ್ಟು ವೆಚ್ಚದ ವಿವರವನ್ನೂ ನೀಡಿದೆ. ಆ ವೆಚ್ಚವು ಇಳಿಕೆಯಾಗುತ್ತಲೇ ಇದೆ ಎಂಬುದನ್ನು ಆ ದತ್ತಾಂಶಗಳು ಹೇಳುತ್ತವೆ.

ಆರ್ಥಿಕ ವರ್ಷ;ಬೆಳೆ ವಿಮೆ ಮಾಡಿಸಿದ ರೈತರ ಸಂಖ್ಯೆ;ಕೇಂದ್ರ ಸರ್ಕಾರವು ಭರಿಸಿದ ವಿಮೆ ಪ್ರೀಮಿಯಂ ಸಹಾಯಧನ ಮೊತ್ತ

2018–19;3.483 ಕೋಟಿ;₹8,903 ಕೋಟಿ

2019–20;4.240 ಕೋಟಿ;₹10,062 ಕೋಟಿ

2020–21;4.243 ಕೋಟಿ;₹8,734 ಕೋಟಿ

2021–22;5.046 ಕೋಟಿ;₹7,992 ಕೋಟಿ

2022–23;7.341 ಕೋಟಿ;₹8,186 ಕೋಟಿ

* 2018–19ರಲ್ಲಿ ₹8,903 ಕೋಟಿಯಷ್ಟಿದ್ದ ಕೇಂದ್ರದ ವಿಮೆ ಪ್ರೀಮಿಯಂ ಸಹಾಯಧನದ ಮೊತ್ತ 2020–21ರ ನಂತರ ಇಳಿಕೆಯಾಗುತ್ತಲೇ ಇದೆ

* 2021–22ನೇ ಸಾಲಿನಲ್ಲಿ ಅತ್ಯಂತ ಕಡಿಮೆ ಮೊತ್ತದ ವಿಮೆ ಪ್ರೀಮಿಯಂ ಸಹಾಯಧನವನ್ನು ಕೇಂದ್ರ ಸರ್ಕಾರ ಭರಿಸಿದೆ

* ಆದರೆ ಈ ಅವಧಿಯಲ್ಲಿ ಬೆಳೆ ವಿಮೆ ಮಾಡಿಸುವ ರೈತರ ಸಂಖ್ಯೆಯು ಒಂದು ಪಟ್ಟಿಗಿಂತಲೂ ಹೆಚ್ಚು ಏರಿಕೆಯಾಗಿದೆ

* ಕರ್ನಾಟಕದಲ್ಲೂ ಬೆಳೆ ವಿಮೆ ಮಾಡಿಸಿದ ರೈತರ ಸಂಖ್ಯೆಯಲ್ಲಿ ಆದ ಏರಿಕೆಗೆ ಅನುಗುಣವಾಗಿ, ಕೇಂದ್ರ ಸರ್ಕಾರವು ಭರಿಸಿದ ಸಹಾಯಧನದ ಮೊತ್ತ ಏರಿಕೆಯಾಗಿಲ್ಲ

* 2022–23ರಲ್ಲಿ ಕೇಂದ್ರವು ಹೀಗೆ ಹೆಚ್ಚು ಮೊತ್ತವನ್ನು ಕರ್ನಾಟಕಕ್ಕೆಂದು ವೆಚ್ಚ ಮಾಡಿದ್ದರೂ, ವಿಮೆ ಆಯ್ಕೆ ಮಾಡಿಕೊಂಡ ರೈತರ ಸಂಖ್ಯೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂಬುದನ್ನು ಗಮನಿಸಬೇಕು

ಕರ್ನಾಟಕ

ಮುಂಗಾರು

ಆರ್ಥಿಕ ವರ್ಷ;ಬೆಳೆ ವಿಮೆ ಮಾಡಿಸಿದ ರೈತರ ಸಂಖ್ಯೆ;ಕೇಂದ್ರ ಸರ್ಕಾರವು ಭರಿಸಿದ ವಿಮೆ ಪ್ರೀಮಿಯಂ ಸಹಾಯಧನ ಮೊತ್ತ

2018–19;14.67 ಲಕ್ಷ;₹599 ಕೋಟಿ

2019–20;13.36 ಲಕ್ಷ;₹743 ಕೋಟಿ

2020–21;14.39 ಲಕ್ಷ;₹732 ಕೋಟಿ

2021–22;16.14 ಲಕ್ಷ;₹739 ಕೋಟಿ

2022–23;23.19 ಲಕ್ಷ;₹939 ಕೋಟಿ

ಬೆಳೆ ವಿಮೆ ಯೋಜನೆ ಮೇಲಿನ ಕೇಂದ್ರ ಸರ್ಕಾರದ ವೆಚ್ಚ ಕಡಿತ

ಆರ್ಥಿಕ ವರ್ಷ;ಬೆಳೆ ವಿಮೆ ಯೋಜನೆ ಮೇಲೆ ಕೇಂದ್ರ ಸರ್ಕಾರದ ಒಟ್ಟು ವೆಚ್ಚ

2018–19;₹11,945 ಕೋಟಿ

2019–20;₹12,638 ಕೋಟಿ

2020–21;₹13,902 ಕೋಟಿ

2021–22;₹13,549 ಕೋಟಿ

2022–23;₹10,807 ಕೋಟಿ

ಆಧಾರ: ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ, ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ ಪರಿಷ್ಕೃತ ಕಾರ್ಯಾಚರಣಾ ಮಾರ್ಗಸೂಚಿಗಳು, ಪರಿಷ್ಕೃತ ಕಾರ್ಯಾಚರಣಾ ಮಾರ್ಗಸೂಚಿಯ ಅಡಿ ಬೆಳೆ ವಿಮೆ ಯೋಜನೆಯನ್ನು ಅನುಷ್ಠಾನ ಮಾಡಲು ಕರ್ನಾಟಕ ಸರ್ಕಾರವು ಹೊರಡಿಸಿದ ಅಧಿಸೂಚನೆಗಳು, ಯೋಜನೆ ಕುರಿತು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕೃಷಿ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯ ನೀಡಿದ ಲಿಖಿತ ಉತ್ತರಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.