ADVERTISEMENT

ಆಳ–ಅಗಲ: ಮತದಾರರ ಪ್ರಭಾವಿಸಿದ ‘ಮಾತು’

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 0:49 IST
Last Updated 6 ಜೂನ್ 2024, 0:49 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಈ ಬಾರಿ ಲೋಕಸಭಾ ಚುನಾವಣೆಗೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಮೊದಲ ಹಂತದ ಮತದಾನದ ನಂತರ, ರಾಜಕೀಯ ಪಕ್ಷಗಳ ಪ್ರಚಾರ ತಂತ್ರ ಬದಲಾಗಿತ್ತು. ಆ ಪ್ರಚಾರ ತಂತ್ರವು ಮತದಾನವನ್ನು ಪ್ರಭಾವಿಸಿದೆ ಎಂಬುದು ಫಲಿತಾಂಶದಿಂದ ನಿಚ್ಚಳವಾಗಿದೆ. ಮತದಾನದಲ್ಲಿ ಆದ ಈ ಬದಲಾವಣೆಯನ್ನು ವಿಶ್ಲೇಷಿಸಲು ಇಲ್ಲಿ ಯತ್ನಿಸಲಾಗಿದೆ.

ಮೊದಲ ಹಂತದಲ್ಲಿ ಒಟ್ಟು 102 ಸ್ಥಾನಗಳಿಗೆ ಮತದಾನ ನಡೆದಿತ್ತು. ಆ ಹಂತದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳಿಗೆ ಹೆಚ್ಚಿನ ಸ್ಥಾನ ದೊರೆಯಲಿದೆ ಎಂಬುದನ್ನು ರಾಜಕೀಯ ಪಕ್ಷಗಳ ಆಂತರಿಕ ಸಮೀಕ್ಷೆಗಳು ಹೇಳಿದ್ದವು. ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಪಕ್ಷಗಳಿಗೆ ಮೊದಲ ಹಂತದಲ್ಲಿ ಭಾರಿ ಹಿನ್ನಡೆಯಾಗಿದೆ ಎಂದು ಸಮೀಕ್ಷೆಗಳು ಹೇಳಿದ್ದವು ಎಂದು ಪಕ್ಷದ ಮೂಲಗಳು ತಿಳಿಸಿದ್ದವು. ಫಲಿತಾಂಶವೂ ಅದೇ ರೀತಿ ಬಂದಿದೆ. ಮೊದಲ ಹಂತದಲ್ಲಿ ‘ಇಂಡಿಯಾ’ ಮೈತ್ರಿಕೂಟಕ್ಕೇ ಹೆಚ್ಚಿನ ಸ್ಥಾನಗಳು ಬಂದಿವೆ. ಹೀಗಾಗಿಯೇ ಬಿಜೆಪಿ ಪ್ರಚಾರ ತಂತ್ರವನ್ನು ಬದಲಿಸಿತು ಎಂದು ವಿಶ್ಲೇಷಿಸಲಾಗಿತ್ತು.

ADVERTISEMENT

ಮೊದಲ ಹಂತದವರೆಗೆ ಬಿಜೆಪಿ ಆತ್ಮವಿಶ್ವಾಸದಲ್ಲಿ ಇತ್ತು. ಆದರೆ ಎರಡನೇ ಹಂತಕ್ಕೆ ನಡೆಸಿದ ಪ್ರಚಾರದಲ್ಲಿ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಆದ್ಯತೆ ನೀಡುತ್ತದೆ, ಹಿಂದೂಗಳ ಸಂಪತ್ತನ್ನು ಮುಸ್ಲಿಮರಿಗೆ ನೀಡುತ್ತದೆ, ಮಂಗಳಸೂತ್ರ ಕಸಿದುಕೊಳ್ಳುತ್ತದೆ, ಎಮ್ಮೆಗಳನ್ನು ಕಸಿದುಕೊಳ್ಳುತ್ತದೆ ಎಂದು ಭಾಷಣ ಮಾಡಿದರು. ಮತದಾನವನ್ನು ಈ ಮಾತುಗಳು ಪ್ರಭಾವಿಸಿದಂತೆ ಕಾಣುತ್ತದೆ. ಎರಡನೇ ಹಂತದಲ್ಲಿ ಎನ್‌ಡಿಎಗೇ ಹೆಚ್ಚಿನ ಸ್ಥಾನಗಳು ದೊರೆತಿವೆ. 

ಮೂರನೇ ಹಂತದ ವೇಳೆಗೆ ಮೋದಿ ಅವರು ಆಡಿದ ಇಂತಹ ಮಾತುಗಳು ಮತ್ತಷ್ಟು ಹೆಚ್ಚಾದವು. ಆ ಹಂತದಲ್ಲೂ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ದೊರೆತಿವೆ. ನಾಲ್ಕನೇ ಹಂತದಲ್ಲೂ ಇದೇ ಪುನರಾವರ್ತನೆಯಾಗಿದೆ. ಮೋದಿ ಅವರು ಮಂಗಳಸೂತ್ರ ಮತ್ತು ಎಮ್ಮೆಗಳನ್ನು ಕಸಿದುಕೊಳ್ಳುವ ಮಾತುಗಳನ್ನಾಡಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಗಳಿಸಿದೆ. ಆದರೆ ಆ ಹಂತಗಳಲ್ಲಿ ಮತದಾನ ನಡೆದ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳು ಬಿಜೆಪಿ ಮತ್ತು ಎನ್‌ಡಿಎ ತೆಕ್ಕೆಗೆ ಹೋಗಿವೆ.

ಐದು, ಆರು ಮತ್ತು ಏಳನೇ ಹಂತಗಳಲ್ಲಿ ಮೋದಿ ಅವರ ಇಂತಹ ಮಾತುಗಳ ಬಗ್ಗೆ ವ್ಯಾಪಕ ಟೀಕೆ ಮತ್ತು ಆಕ್ಷೇಪಗಳು ವ್ಯಕ್ತವಾದವು. ಮೋದಿ ಅವರು ಪರಸ್ಪರ ವ್ಯತಿರಿಕ್ತವಾದಂತಹ ಮಾತುಗಳನ್ನು ಆಡತೊಡಗಿದ್ದರು. ಅದು ಕೂಡ ಮತದಾನವನ್ನು ಪ್ರಭಾವಿಸಿದಂತೆ ಕಾಣುತ್ತದೆ. ಈ ಮೂರು ಹಂತಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳಿಗೂ ಗಣನೀಯ ಪ್ರಮಾಣದ ಮತಗಳು ದೊರೆತಿವೆ. ಪರಿಣಾಮವಾಗಿ ಅವುಗಳು ಗೆದ್ದ ಸ್ಥಾನಗಳೂ ಹೆಚ್ಚಾಗಿವೆ. ಕೊನೆಯ ಹಂತದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ದೊರೆತಿದ್ದರೆ, ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳಿಗೆ ಅದಕ್ಕಿಂತ ಒಂದುಪಟ್ಟು ಹೆಚ್ಚು ಸ್ಥಾನಗಳು ದೊರೆತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.