ADVERTISEMENT

ಆಳ-ಅಗಲ | ಆಹಾರ ಪದ್ಧತಿ: ಭಾರತದ್ದೇ ಉತ್ತಮ

ಮುಂದುವರಿದ ದೇಶಗಳ ಪದ್ಧತಿಯಿಂದ ಪರಿಸರ, ಜೀವವೈವಿಧ್ಯಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 0:30 IST
Last Updated 22 ಅಕ್ಟೋಬರ್ 2024, 0:30 IST
   

ಮನುಷ್ಯರು ಏನನ್ನು ಸೇವಿಸುತ್ತಾರೆ ಮತ್ತು ಅದನ್ನು ಹೇಗೆ ಉತ್ಪಾದಿಸುತ್ತಾರೆ ಎನ್ನುವುದು ಜಗತ್ತಿನ ಭವಿಷ್ಯವನ್ನು ನಿರ್ಧರಿಸುತ್ತದೆ. 2030ರ ಹೊತ್ತಿಗೆ ಹವಾಮಾನ ಮತ್ತು ಜೀವವೈವಿಧ್ಯದ ಗುರಿಗಳನ್ನು ಸಾಧಿಸಲು ಆಹಾರ ಪದ್ಧತಿಯಲ್ಲಿ ಬದಲಾವಣೆ ಅಗತ್ಯ ಎನ್ನುವುದನ್ನು ಜಾಗತಿಕ ವೇದಿಕೆಗಳಲ್ಲಿ ಒತ್ತಿ ಹೇಳಲಾಗಿದೆ. ಆದರೆ, ಪ್ಯಾರಿಸ್ ಒಪ್ಪಂದ ಮತ್ತು ಜಾಗತಿಕ ಜೀವವೈವಿಧ್ಯದ ಚೌಕಟ್ಟಿನಲ್ಲಿ ಆಹಾರವನ್ನು ತೀವ್ರವಾಗಿ ನಿರ್ಲಕ್ಷಿಸಲಾಗಿದೆ. ಇದು ಜೀವ ಸಂಕುಲಕ್ಕೆ ಹಾನಿ ಮಾಡುತ್ತಿರುವುದಲ್ಲದೇ, ತಾಪಮಾನ ಏರಿಕೆಗೂ ಕಾರಣವಾಗುತ್ತಿದೆ. ಈ ದಿಸೆಯಲ್ಲಿ ಪರಿಸರಕ್ಕೆ ಹತ್ತಿರವಾದ ಭಾರತೀಯರ ಆಹಾರ ಕ್ರಮವು ಅನುಕರಣೆಯೋಗ್ಯವಾಗಿದೆ ಎಂದು ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ವರದಿ ಹೇಳಿದೆ.  

ವರ್ಲ್ಡ್ ವೈಲ್ಡ್‌ಲೈಫ್ ಫಂಡ್ (ಡಬ್ಲ್ಯುಡಬ್ಲ್ಯುಎಫ್‌) ಎನ್ನುವುದು ಪರಿಸರ ಮತ್ತು ಪ್ರಾಣಿ ಸಂರಕ್ಷಣೆಗೆ ಸಂಬಂಧಿಸಿದ ಒಂದು ಸ್ವತಂತ್ರ ಸಂಸ್ಥೆ. ಜಗತ್ತಿನಲ್ಲಿ ಮಾಲಿನ್ಯವನ್ನು ತಡೆಗಟ್ಟಿ, ಜೀವ ವೈವಿಧ್ಯವನ್ನು ಕಾಪಾಡಿ, ಪ್ರಕೃತಿಯ ಜತೆ ಮನುಷ್ಯ ಸಹಬಾಳ್ವೆ ನಡೆಸುವಂತಹ ವಾತಾವರಣ ಸೃಷ್ಟಿಗೆ ಪ್ರಯತ್ನಿಸುವುದು ಇದರ ಉದ್ದೇಶ. ಇದು ‘ಲಿವಿಂಗ್ ಪ್ಲಾನೆಟ್ ರಿಪೋರ್ಟ್–2024’ ಬಿಡುಗಡೆ ಮಾಡಿದ್ದು, ಜೀವವೈವಿಧ್ಯ ಮತ್ತು ಆಹಾರ ಪದ್ಧತಿಗಳ ಬಗ್ಗೆ ಜಾಗತಿಕ ಮಟ್ಟದಲ್ಲಿ ಗಮನ ಹರಿಸಬೇಕಾದ ತುರ್ತಿನ ಬಗ್ಗೆ ಈ ವರದಿ ಗಮನ ಸೆಳೆಯುತ್ತದೆ. 

ಡಬ್ಲ್ಯುಡಬ್ಲ್ಯುಎಫ್‌ ಲಿವಿಂಗ್ ಪ್ಲಾನೆಟ್ ಇಂಡೆಕ್ಸ್ (ಎಲ್‌ಪಿಐ) ಎನ್ನುವ ದೀರ್ಘಾವಧಿಯ ಸೂಚ್ಯಂಕದ ಮೂಲಕ ಜೀವವೈವಿಧ್ಯದಲ್ಲಿ ಆಗಿರುವ ಬದಲಾವಣೆಯನ್ನು ಗುರುತಿಸಿದೆ.

ADVERTISEMENT

1970ರಿಂದ 2020ರವರೆಗಿನ ಅವಧಿಯಲ್ಲಿ ವನ್ಯಜೀವಿಗಳ ಸರಾಸರಿ ಸಂಖ್ಯೆಯಲ್ಲಿ ಶೇ 73ರಷ್ಟು ಕುಸಿತವಾಗಿದೆ. ಈ ಪೈಕಿ ಸಿಹಿನೀರಿನ ಜಲಚರಗಳ ಸಂಖ್ಯೆ ಶೇ 85ರಷ್ಟು ಕಡಿಮೆಯಾಗಿದ್ದು, ಶೇ 69ರಷ್ಟು ಭೂಚರಗಳು, ಶೇ 56ರಷ್ಟು ಸಮುದ್ರ ಜಲಚರಗಳು ಕಡಿಮೆಯಾಗಿವೆ. ಇದು ಅಪಾಯಕಾರಿ ಮಟ್ಟ ಮುಟ್ಟುತ್ತಿರುವ ಪರಿಸರ ವಿನಾಶದ ಸೂಚನೆಯಾಗಿದ್ದು, ಈ ದಿಸೆಯಲ್ಲಿ ಪರಿಸರವನ್ನು ಉಳಿಸುವುದು ಮತ್ತು ಜಾಗತಿಕ ತಾಪಮಾನವನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ. ಇದು ಸಾಧ್ಯವಾಗಬೇಕು ಎಂದರೆ ಇಂಧನ, ಆಹಾರ ಮತ್ತು ಆರ್ಥಿಕ ವ್ಯವಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ವರದಿ ಹೇಳಿದೆ.  

ಜಗತ್ತಿನ ಕೆಲವೇ ರಾಷ್ಟ್ರಗಳು ಪರಿಸರ ನಾಶ, ಸಂಪನ್ಮೂಲಗಳ ಅತಿಬಳಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗುತ್ತಿವೆ. ಇದೇ ಕಾಲಕ್ಕೆ ಜಾಗತಿಕ ಮಟ್ಟದಲ್ಲಿ ಬಡತನ ಮತ್ತು ಸಂಪನ್ಮೂಲಗಳ ಕೊರತೆಯೂ ಕಾಡುತ್ತಿದೆ. ಬಡ ದೇಶಗಳು ಮತ್ತು ಬಡವರು ಶ್ರೀಮಂತ ರಾಷ್ಟ್ರಗಳ ಅತಿಬಳಕೆಯ ಪರಿಣಾಮಗಳನ್ನು ಎದುರಿಸಬೇಕಾಗಿದೆ. ಶ್ರೀಮಂತ ರಾಷ್ಟ್ರಗಳು ಸುಸ್ಥಿರವಲ್ಲದ ಅಭಿವೃದ್ಧಿ ಮಾದರಿ ಹಾಗೂ ಇಂಧನ ಬಳಕೆ, ಆಹಾರ ಪದ್ಧತಿಗಳನ್ನು ಅನುಸರಿಸುತ್ತಿವೆ. ಇದು ಹೀಗೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಆಹಾರ ಉತ್ಪಾದನೆಗೆ ಭೂಮಿಯಲ್ಲಿ ಲಭ್ಯವಿರುವುದಕ್ಕಿಂತಲೂ ಹೆಚ್ಚಿನ ಸಂಪನ್ಮೂಲಗಳು (ಹಲವು ಭೂಮಿಗಳು) ಬೇಕಾಗುತ್ತವೆ. ಈ ನಿಟ್ಟಿನಲ್ಲಿ ಇಂದು ಜಗತ್ತು ಜಿಡಿಪಿ ಆಧಾರಿತ ಬೆಳವಣಿಗೆಯ ಮಾದರಿಗಿಂತಲೂ ಪರಿಸರಸ್ನೇಹಿ ಮತ್ತು ಹವಾಮಾನ ಸ್ನೇಹಿಯಾದ ಸುಸ್ಥಿರ ಅಭಿವೃದ್ಧಿ ಮಾದರಿಗಳನ್ನು ಅನುಸರಿಸಬೇಕಾಗಿದೆ.  

ಪ್ಯಾರಿಸ್ ಒಪ್ಪಂದದಂತೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಮಿತಿಗೊಳಿಸಬೇಕು. ಅಂದರೆ, ಹಸಿರು ಮನೆ ಅನಿಲ ಹೊರಸೂಸುವಿಕೆ ಕಡಿಮೆ ಮಾಡಬೇಕು. ಆದರೆ, ಜಗತ್ತಿನ ಪ್ರಬಲ ಆರ್ಥಿಕತೆಗಳುಳ್ಳ ರಾಷ್ಟ್ರಗಳಲ್ಲಿ ಚಾಲ್ತಿಯಲ್ಲಿರುವ ಆಹಾರ ಪದ್ಧತಿಯನ್ನು 2050ಕ್ಕೆ ಪ್ರತಿಯೊಬ್ಬರೂ ಅಳವಡಿಸಿಕೊಂಡರೆ, ಆಹಾರ ಸಂಬಂಧಿ ಹಸಿರುಮನೆ ಅನಿಲ ಹೊರಸೂಸುವಿಕೆಯು ಶೇ 263 ರಷ್ಟು ಹೆಚ್ಚಾಗುತ್ತದೆ.  

ಅತಾರ್ಕಿಕ ಆಹಾರ ಪದ್ಧತಿ:

ಜಾಗತಿಕ ಆಹಾರ ಪದ್ಧತಿಯು ಅತ್ಯಂತ ಅತಾರ್ಕಿಕವಾಗಿದೆ. ಇದು ಜೀವವೈವಿಧ್ಯಕ್ಕೆ ಮಾರಕವಾಗಿರುವುದಲ್ಲದೇ, ನೀರಿನ ಸಂಪನ್ಮೂಲವನ್ನು ಬರಿದು ಮಾಡುತ್ತಿದ್ದು, ಹವಾಮಾನ ಬದಲಾವಣೆಗೂ ಕಾರಣವಾಗಿದೆ. ದಾಖಲೆಯ ಮಟ್ಟದಲ್ಲಿ ಆಹಾರ ಉತ್ಪಾದನೆ ಆಗುತ್ತಿದ್ದರೂ, ಕೋಟ್ಯಂತರ ಮಂದಿ ಹಸಿದ ಹೊಟ್ಟೆಯಲ್ಲಿ ಮಲಗುವಂತಾಗಿದೆ. 

ಮಾನವನ ಆಹಾರ ಉತ್ಪಾದನೆಗಾಗಿ ಶೇ 90ರಷ್ಟು ಕಾಡುಗಳನ್ನು ನಾಶ ಮಾಡಿ ಕೃಷಿ ಭೂಮಿಯನ್ನಾಗಿ ಮಾಡಲಾಗಿದ್ದು, ಇದು ಜೀವಿ ಸಂಕುಲಗಳ ಮತ್ತು ಜೀವ ವೈವಿಧ್ಯದ ನಾಶಕ್ಕೆ ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗಿದೆ. ಕೃಷಿಗಾಗಿ ಶೇ 70ರಷ್ಟು ಅಂತರ್ಜಲವನ್ನು ಬಳಸಲಾಗುತ್ತಿದ್ದು, ಇದರಿಂದ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚಿನ ನದಿ, ಕೆರೆ–ಕುಂಟೆಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಜನರ ಬಳಕೆಗಾಗಿ ಮೀನುಗಾರಿಕೆಯನ್ನು ಮಿತಿಮೀರಿ ಮಾಡಲಾಗುತ್ತಿದ್ದು, ಇದರಿಂದ ಶೇ 37.7ರಷ್ಟು ಪ್ರಭೇದಗಳ ಸಂಖ್ಯೆಯಲ್ಲಿ ಕುಸಿತವಾಗಿದೆ. ಜತೆಗೆ ಇದು ಸಮುದ್ರದ ಸಮತೋಲನಕ್ಕೂ ಮಾರಕವಾಗಿದೆ. 

ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದ ಆಹಾರ ಪದ್ಧತಿಯು ಉತ್ತಮವಾಗಿದ್ದು, ಪರಿಸರಸ್ನೇಹಿಯಾಗಿದೆ. ದೇಶದ ಆಹಾರದಲ್ಲಿ ಸಿರಿಧಾನ್ಯಕ್ಕೆ ಮಹತ್ವದ ಸ್ಥಾನವಿದ್ದು, ಸುಸ್ಥಿರ ಆಹಾರ ಕ್ರಮಕ್ಕೆ ಇದು ಜಗತ್ತಿಗೆ ಮಾದರಿಯಾಗಿದೆ. 

ಸುಸ್ಥಿರ ಮಾರ್ಗಗಳಲ್ಲಿ ಉತ್ತಮ ಬೆಳೆ ಇಳುವರಿ ಸಾಧಿಸುವುದು ಮತ್ತು ಜಾನುವಾರುಗಳನ್ನು ಸಾಕುವುದು, ಆಹಾರ ಪದ್ಧತಿಯಲ್ಲಿ ಬಹಳ ಮುಖ್ಯವಾಗಿ ಆಗಬೇಕಾದ ಬದಲಾವಣೆಯಾಗಿದೆ. ಜಗತ್ತಿನಲ್ಲಿ ಶೇ 30–ಶೇ 40ರಷ್ಟು ಆಹಾರವನ್ನು ವ್ಯರ್ಥ ಮಾಡಲಾಗುತ್ತಿದೆ. ಅದರ ಉತ್ಪಾದನೆಗಾಗಿ ಐದನೇ ಒಂದರಷ್ಟು ಕೃಷಿ ಭೂಮಿ ಮತ್ತು ನೀರು ಬಳಕೆಯಾಗುತ್ತಿದ್ದು, ಅದು ಶೇ 4.4ರಷ್ಟು ಹಸಿರುಮನೆ ಅನಿಲ ಹೊರಸೂಸುತ್ತಿದೆ. ಮೀನುಗಾರಿಕೆಯಲ್ಲಿ ಶೇ 10ರಷ್ಟು ಮೀನು ವ್ಯರ್ಥವಾಗುತ್ತಿದೆ. 

ಜಾಗತಿಕವಾಗಿ ಶೇ 55ರಷ್ಟು ಜಿಡಿಪಿಯು ಪರಿಸರ ಮತ್ತು ಪರಿಸರ ಸಂಬಂಧಿ ಸೇವೆಗಳನ್ನು ಅವಲಂಬಿಸಿದೆ. ಆಹಾರ ಉತ್ಪಾದನೆಯು ಪರಿಸರದ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಕಡಿಮೆ ಮಾಡಬೇಕೆಂದರೆ, ಅಪಾರ ಪ್ರಮಾಣದ ಹಣ ಮತ್ತು ಆಡಳಿತಾತ್ಮಕ ಕ್ರಮಗಳ ಅಗತ್ಯವಿದೆ ಎಂದು ಡಬ್ಲ್ಯುಡಬ್ಲ್ಯುಎಫ್‌ನ ‘ಲಿವಿಂಗ್ ಪ್ಲಾನೆಟ್ ರಿಪೋರ್ಟ್–2024 ಹೇಳುತ್ತದೆ.

ಒಂದು ಭೂಮಿ ಸಾಕಾಗದು...

ಪ್ರಸ್ತುತ ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುತ್ತಿದ್ದರೂ, ಜನರಿಗೆ ಪೌಷ್ಟಿಕ ಆಹಾರ ದೊರೆಯುತ್ತಿಲ್ಲ. ಸುಸ್ಥಿರ ಆಹಾರ ಪದ್ಧತಿಯನ್ನು ಅನುಸರಿಸುತ್ತಿರುವ ರಾಷ್ಟ್ರಗಳ ಸಂಖ್ಯೆ ಕಡಿಮೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಿತಿಗಿಂತಲೂ ಹೆಚ್ಚಿನ ಆಹಾರ ಬಳಸಲಾಗುತ್ತಿದೆ. ಕೊಬ್ಬು ಮತ್ತು ಸಕ್ಕರೆ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆಯಿಂದಾಗಿ ಜನರು ಮಿತಿಗಿಂತ ಹೆಚ್ಚು ತೂಕ, ಬೊಜ್ಜಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ. 

ಜಗತ್ತಿನ ಸಿರಿವಂತ ರಾಷ್ಟ್ರಗಳಲ್ಲಿ ಸದ್ಯ ಇರುವ ಆಹಾರ ಬಳಕೆ ಅಥವಾ ಆಹಾರ ಸೇವನೆ ಪ್ರವೃತ್ತಿ ಮುಂದುವರಿದಿದ್ದೇ ಆದಲ್ಲಿ, 2050ರ ವೇಳೆಗೆ ಆಹಾರ ಉತ್ಪಾದಿಸಲು ಒಂದು ಭೂಮಿ ಸಾಕಾಗುವುದಿಲ್ಲ ಎಂದು ಡಬ್ಲ್ಯುಬ್ಲ್ಯುಎಫ್‌ ಹೇಳಿದೆ. ಉದಾಹರಣೆಗೆ ಅರ್ಜೆಂಟೀನಾದಲ್ಲಿ ಈಗ ಅನುಸರಿಸಲಾಗುತ್ತಿರುವ  ಆಹಾರ ಪದ್ಧತಿ ಮುಂದುವರಿದರೆ, 2050ರ ವೇಳೆಗೆ ಆಹಾರ ಉತ್ಪಾದಿಸಲು 7.42 ಭೂಮಿಗಳು ಬೇಕು.

ಸುಸ್ಥಿರ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಜನರಿಗೆ ಪೌಷ್ಟಿಕಾಂಶಯುಕ್ತ ಆರೋಗ್ಯಕರ ಆಹಾರವನ್ನು ಒದಗಿಸಬಹುದು ಎಂದೂ ವರದಿ ಹೇಳಿದ್ದು, ಅದಕ್ಕೆ ಭಾರತದ ಆಹಾರ ಪದ್ಧತಿಯ ಉದಾಹರಣೆ ನೀಡಿದೆ. ಇಲ್ಲಿನ ಸಿರಿಧಾನ್ಯ ಕೃಷಿಯ ಬಗ್ಗೆಯೂ ಪ್ರಸ್ತಾಪಿಸಿದೆ. ಭಾರತದ ಆಹಾರ ಪದ್ಧತಿ ಉತ್ತಮವಾಗಿದ್ದು, ಇದೇ ಪದ್ಧತಿ ಮುಂದುವರಿದರೆ 2050ರ ವೇಳೆಗೆ ಆಹಾರ ಉತ್ಪಾದಿಸಲು ಒಂದು ಭೂಮಿಯೂ ಪೂರ್ತಿ ಬೇಕಾಗಿಲ್ಲ. 0.84 ಭೂಮಿ ಸಾಕು.

ಚೆನ್ನೈ ಪ್ರವಾಹ ಬರ: ನಗರ ವಿಸ್ತರಣೆ ಕಾರಣ

ಚೆನ್ನೈನಲ್ಲಿ 2015, 2023ರಲ್ಲಿ ಉಂಟಾದ ಪ್ರವಾಹ ಮತ್ತು 2019ರಲ್ಲಿ ಕಂಡು ಬಂದ ಬರ ಸ್ಥಿತಿಯ ಬಗ್ಗೆಯೂ ವರದಿ ಪ್ರಸ್ತಾಪಿಸಿದೆ.1988 ಮತ್ತು 2019ರ ನಡುವೆ ವೇಗವಾಗಿ ನಡೆದ ನಗರದ ವಿಸ್ತರಣೆ ಮತ್ತು ನಗರ ವ್ಯಾಪ್ತಿಯಲ್ಲಿದ್ದ ಜೌಗು ಪ್ರದೇಶ (ನೀರು ಬಸಿಯುವ ಪ್ರದೇಶ) ವ್ಯವಸ್ಥೆಯ ನಾಶವು ಪ್ರವಾಹ ಮತ್ತು ಬರಕ್ಕೆ ಕಾರಣ ಎಂದು ವರದಿ ಹೇಳಿದೆ. ನಗರದ ಬೆಳವಣಿಗೆಯಿಂದಾಗಿ ಶೇ 85ರಷ್ಟು ಚೆನ್ನೈನ ಸುತ್ತಮುತ್ತಲಿನ ಜೌಗು ಪ್ರದೇಶ ನಾಶವಾಗಿದೆ ಎಂದು ಅದು ಹೇಳಿದೆ. 

ಜೌಗು ಪ್ರದೇಶ, ಅದರಲ್ಲಿ ವಾಸಿಸುವ ಪ್ರಾಣಿಗಳು ಮತ್ತು ಸಸ್ಯಗಳು ಪರಿಸರ ವ್ಯವಸ್ಥೆಯ ಪ್ರಮುಖ ಭಾಗ. ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿಡುವ ಜೌಗು ನೆಲವು ಪ್ರವಾಹ ಪರಿಸ್ಥಿತಿಯನ್ನು ತಡೆಯುವುದು ಮಾತ್ರವಲ್ಲದೆ,  ಬೇಸಿಗೆಯಲ್ಲಿ ನೀರಿನ ಅಗತ್ಯವನ್ನು ಪೂರೈಸಿ ನೀರಿನ ಗುಣಮಟ್ಟವನ್ನೂ ಹೆಚ್ಚಿಸುತ್ತದೆ ಎಂದು ಅದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.