ADVERTISEMENT

ಅನುಭವ ಮಂಟಪ | ಮಾದಿಗರಿಗೆ ಒಳ ಮೀಸಲಾತಿಯೇ ಜೀವಜಲ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 22:18 IST
Last Updated 17 ಅಕ್ಟೋಬರ್ 2024, 22:18 IST
ಲಕ್ಷ್ಮೀನಾರಾಯಣಸ್ವಾಮಿ
ಲಕ್ಷ್ಮೀನಾರಾಯಣಸ್ವಾಮಿ   

ಪ್ರತ್ಯೇಕ ಮೀಸಲಾತಿಗಾಗಿ ಮಾದಿಗ ಜನಾಂಗ ಆರಂಭಿಸಿದ ಒಳಮೀಸಲಾತಿ ಚಳವಳಿಗೆ ಮೂರು ದಶಕಗಳು ಸಲ್ಲುತ್ತಿವೆ. ದಲಿತ ಚಳವಳಿ (ದಸಂಸ) ಸಮಗ್ರತೆಯ ನೋಟಕ್ಕೆ ಕಣ್ಣಾಗದ ಕಾರಣ, ಮಾದಿಗ ಚಳವಳಿ ಹುಟ್ಟಿತ್ತಾದರೂ, ಅದು ದಸಂಸದ ಬೇರುಗಳಿಂದಲೇ ಕವಲೊಡೆಯಿತು. ಮೀಸಲಾತಿ ಹಂಚಿಕೆಯ ಅಸಮಾನತೆಯನ್ನು ನಾಯಕರೆನಿಸಿಕೊಂಡವರು ಒಪ್ಪದಾದರು; ಮಾದಿಗರ ಹಕ್ಕನ್ನು ಜಾತಿವಾದವೆಂದು ಬಿಂಬಿಸಿದ್ದಲ್ಲದೇ, ಅದು ಒಗ್ಗಟ್ಟು ಒಡೆಯುತ್ತದೆಂಬ ಸನ್ನಿರೋಗಕ್ಕೆ ಅನೇಕ ಪ್ರಗತಿಪರರನ್ನೂ ದೂಡಲಾಯಿತು. ಗಂಡಭೇರುಂಡ ಕಥೆಯ ಮೂಲಕ ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ ವಿರೋಧ ಒಡ್ಡಲಾಯಿತು. ಮಾದಿಗರದ್ದು ಅಂಬೇಡ್ಕರ್ ವಿರೋಧಿ ನಡೆ, ಸಂವಿಧಾನದಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ, ಅಂಬೇಡ್ಕರ್‌ಗೆ ಪರ್ಯಾಯವಾಗಿ ಬಾಬುಜಗಜೀವನರಾಮ್ ಅವ‌‌ರನ್ನು ತರುತ್ತಿದ್ದಾರೆ ಎಂದು ದಲಿತರಲ್ಲಿ ದ್ವೇಷದ ಭಾವನೆ ಬಿತ್ತಲಾಯಿತು.

ಅನೇಕ ವೈರುಧ್ಯ, ಪಿತೂರಿಗಳ ನಡುವೆಯೂ ಮಾದಿಗ ಜನಾಂಗ ಪುಟಗೋಸಿ ಚಳವಳಿ, ಅರೆಬೆತ್ತಲೆ ಚಳವಳಿ, ಉಪವಾಸ ಸತ್ಯಾಗ್ರಹ, ಪಾದಯಾತ್ರೆಗಳಂತಹ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನಿರಂತರ ಹೆಜ್ಜೆ ಹಾಕುತ್ತ, ಇದೀಗ ನ್ಯಾಯಾಂಗದಲ್ಲೂ ಯಶಸ್ಸು ಕಂಡಿದೆ. ಒಳ ಮೀಸಲಾತಿ ಹೋರಾಟವು ಕರ್ನಾಟಕದ ಪ್ರಮುಖ ಹೋರಾಟವಾಗಿದ್ದು, 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಮುಂದುವರಿದ ಭಾಗವಾಗಿದೆ. ದಲಿತರ ಜೊತೆಗೆ ದಲಿತೇತರ ಬರಹಗಾರರು, ಚಿಂತಕರು, ಹೋರಾಟಗಾರರು ಇದೊಂದು ನ್ಯಾಯೋಚಿತವಾದ ಚಳವಳಿ ಎಂದು ದನಿಗೂಡಿಸಿದ್ದಾರೆ. ಕರ್ನಾಟಕದ ಚರಿತ್ರೆಯಲ್ಲಿ ಜನಾಂಗವೊಂದು ನಡೆಸಿದ ಸುದೀರ್ಘವಾದ ಹೋರಾಟ ಇದು.

ಆರಂಭದಲ್ಲಿ ಮಾದಿಗ ಸಂಘಟನೆಗಳನ್ನು ವಿರೋಧಿಸುತ್ತಿದ್ದ ಸಾಹಿತಿ, ಕಲಾವಿದ, ಚಿಂತಕರು, ಇದು ಮೀಸಲಾತಿ ವರ್ಗೀಕರಣಕ್ಕೆ ಸೂಕ್ತವಾದ ಚಳವಳಿಯೆಂದು ನಂತರದಲ್ಲಿ ಮಾನ್ಯಮಾಡಿ ಅದರೊಟ್ಟಿಗೆ ಹೆಜ್ಜೆ ಹಾಕಿದರು. ಮಾದಿಗ ಮೀಸಲಾತಿ ಹೋರಾಟ ಸಮಿತಿ, ಮಾದಿಗ ಸಂಘಟನೆಗಳ ಒಕ್ಕೂಟ, ವಿಶ್ವ ಆದಿಜಾಂಬವ ಮಹಾಸಭಾ, ಮಾದಿಗ ಮಹಾಸಭಾದಂತಹ ಹತ್ತಾರು ಸಂಘಟನೆಗಳು ಜಾತಿಯ ಕೀಳರಿಮೆಯನ್ನು ತೊಳೆದವು. ಆದರೆ, ದಸಂಸಗೆ ಬಿ.ಕೃಷ್ಣಪ್ಪ ಅವರು ಸಿಕ್ಕ ಹಾಗೆ ಮಾದಿಗ ಚಳವಳಿಗೆ ಕರ್ನಾಟಕದಲ್ಲಿ ಸಮರ್ಥ ನಾಯಕತ್ವ ದಕ್ಕಲಿಲ್ಲ.

ADVERTISEMENT

ದಲಿತ ಚಳವಳಿಗೆ 50 ವರ್ಷಗಳು ಸಲ್ಲುತ್ತಿವೆ ಎಂದು ಹೇಳುವುದಾದರೆ, ಅದರಲ್ಲಿ 30 ವರ್ಷದ ಮಾದಿಗ ಚಳವಳಿಯ ಕೊಡುಗೆಯನ್ನು ಸ್ಮರಿಸಿಕೊಳ್ಳುವುದು ನ್ಯಾಯೋಚಿತ. ದಲಿತ ಚಳವಳಿಯಲ್ಲಿ ಮಾದಿಗರ ಬೆವರಿದೆ. ಆದರೆ, ಒಳ ಮೀಸಲಾತಿ ಚಳವಳಿಯಲ್ಲಿ ಮಾದಿಗರ ಬೆವರಷ್ಟೇ ಇದೆ.  

ಪಾರಂಪರಿಕವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದರೂ ಮಾದಿಗರ ಒಳ ಮೀಸಲಾತಿಗೆ ಕಾಂಗ್ರೆಸ್ ಏಕೆ ಸ್ಪಂದಿಸಲಿಲ್ಲ, ಈಗಲೂ ಸ್ಪಂದಿಸುತ್ತಿಲ್ಲ ಎಂಬ ಪ್ರಶ್ನೆಗೆ ಮಾದಿಗರನ್ನು ಕಾಂಗ್ರೆಸ್ ಟಿಷ್ಯೂನಂತೆ ಬಳಸುತ್ತಿದೆ ಎಂಬುದೇ ಕಣ್ಣಮುಂದಿನ ಉತ್ತರ. ಕಾಂಗ್ರೆಸ್‌ನಲ್ಲಿ ಪರಿಶಿಷ್ಟ ಸಮಾಜದ ಇತರೆ ನಾಯಕರಿಗೆ ಸಿಗುವಷ್ಟು ಮಾನ್ಯತೆ ಎಡಗೈ ಸಮಾಜದವರಿಗೆ ಸಿಗುತ್ತಿಲ್ಲ. ಎಡಗೈ ಪಂಗಡದವರನ್ನು ಚುನಾವಣೆಗಳಲ್ಲಿ ಸೋಲುವಂತೆ ಮಾಡಿ, ಅವರಿಗೆ ಅವಕಾಶ ತಪ್ಪಿಸಲಾಗಿದೆ.  

ಆರ್‌ಎಸ್‌ಎಸ್‌ನವರು ಒಳ ಮೀಸಲಾತಿಯ ವಿಚಾರದಲ್ಲಿ ಮಾದಿಗರ ಪರವಾಗಿ ನಿಂತು, ಅವರನ್ನು ಇತರರ ಮೇಲೆ ಎತ್ತಿ ಕಟ್ಟುತ್ತಿದ್ದಾರೆಂಬ ಚರ್ಚೆ ಇಂದು ಎಲ್ಲೆಡೆ ನಡೆಯುತ್ತಿದೆ. ಆದರೆ, ದಸಂಸ ನಾಯಕರು ಒಳ ಮೀಸಲಾತಿಯನ್ನು ಇತ್ಯರ್ಥಪಡಿಸಿದ್ದರೆ, ಅದು ಇಂದು ಆರ್‌ಎಸ್‌ಎಸ್‌ ಅಂಗಳದ ಕೂಸೇಕೆ ಆಗುತಿತ್ತು? ಮಾದಿಗರ ಹಸಿವು ದಸಂಸಗೆ ಒಡಕಿನಂತೆ ಕಂಡರೆ, ಅಂಬೇಡ್ಕರ್ ಸಾಹೇಬರ ಹಸಿವು ಗಾಂಧೀಜಿಗೆ ಹೇಗೆ ಕಂಡಿರಬೇಕು? ಬರಹಗಳಲ್ಲಿ ಭಾಷಣಗಳಲ್ಲಿ ಸಮಾನತೆಯ ಬಗ್ಗೆ ಮಾತನಾಡಿದ ಉತ್ತಮೋತ್ತಮರೇ ಒಳ ಮೀಸಲಾತಿ ಕೂಸು ಆರ್‌ಎಸ್‌ಎಸ್‌ ಅಂಗಳದಲ್ಲಿ ಆಡಿ ಬೆಳೆಯಲಿಕ್ಕೆ ಕಾರಣೀಭೂತರಾಗಿದ್ದಾರೆ. 

30 ವರ್ಷಗಳಿಂದ ಒಳ ಮೀಸಲಾತಿ ವಿರೋಧಿಸುತ್ತಾ ಆತ್ಮವಂಚನೆ ಮಾಡಿಕೊಂಡಿದ್ದವರು ಈಗಲಾದರೂ ದನಿಯಾಗಿ ನಿಲ್ಲಬೇಕಿತ್ತು. ಆದರೆ, ಅದಾವುದಕ್ಕೂ ಸಿದ್ಧವಿರದೇ, ದತ್ತಾಂಶವಿಲ್ಲ, ಮರು ಜಾತಿಗಣತಿ ಆಗಬೇಕಿದೆ ಎಂಬೆಲ್ಲ ನೆಪ ಮುಂದಿಡುತ್ತಿದ್ದಾರೆ. ಸದಾಶಿವ ಆಯೋಗದ ವರದಿ, ಕಾಂತರಾಜ ವರದಿಯಲ್ಲಿ ಪರಿಶಿಷ್ಟರ ದತ್ತಾಂಶವಿಲ್ಲವೇ? ಒಳ ಮೀಸಲಾತಿ ಚಳವಳಿ ಹಿಂಸಾ ಚಳವಳಿಯಾಗಿ ರೂಪುಗೊಳ್ಳುವುದಕ್ಕೆ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ. ಅತ್ಯಂತ ಶೋಚನೀಯ ಸ್ಥಿತಿಯಲ್ಲಿರುವ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿಯ ಹೊರತಾಗಿ ಬೇರಾವ ಜೀವಜಲವಿಲ್ಲ. 

ಹಂಚಿ ತಿನ್ನುವ ಕೆಲಸವಾಗಬೇಕು

ಒಳ ಮೀಸಲಾತಿ ವಿಚಾರ ಗಂಭೀರ ಸ್ವರೂಪ ಪಡೆಯಲು ಕಾರಣ ಸರ್ಕಾರದ ನೀತಿಗಳು. ಒಳ ಮೀಸಲಾತಿ ಹಂಚಿಕೆ ಬಗ್ಗೆ ಮಾತಾನಾಡುವಾಗ ಆದರ ಆಳ ಉದ್ದಗಲಗಳನ್ನು ಅಳೆಯಬೇಕು. ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಉಪಜಾತಿಗಳಿದ್ದು ಅದರಲ್ಲಿ ಹೊಲೆಯ ಮಾದಿಗ ಅಸ್ಪೃಶ್ಯ ಜಾತಿಗಳು; ಉಳಿದವು ಸ್ಪೃಶ್ಯ ಜಾತಿಗಳು. ಒಳ ಮೀಸಲಾತಿ ಜಾರಿಗೆ ತಜ್ಞರ ಸಮಿತಿ ರಚಸಿ ಪಕ್ಕಾ ದತ್ತಾಂಶ ಸಂಗ್ರಹಿಸಬೇಕು. ಅಗತ್ಯ ಬಿದ್ದರೆ ಮತ್ತೆ ಜಾತಿ ಜನಗಣತಿ ಮಾಡಬೇಕು. ಒಳ ಮಿಸಲಾತಿಯು ದಲಿತರ ಒಗ್ಗಟ್ಟನ್ನು ಒಡೆಯುತ್ತದೆ ಎಂದು ಹೇಳುವವರಿಗೆ ನಾವು ಒಗ್ಗಟ್ಟಿನ ಉತ್ತರ ನೀಡಬೇಕು. ನ್ಯಾಯಯುತವಾದ ಜನಸಂಖ್ಯೆಯ ಗಣತಿ ಮುಂದಿಟ್ಟುಕೊಂಡು ಹಂಚಿ ತಿನ್ನುವ ಕೆಲಸವಾಗಬೇಕು. ಗೋಪಾಲಕೃಷ್ಣ ಹರಳಹಳ್ಳಿ ರಾಜ್ಯಾದ್ಯಕ್ಷ ದಲಿತ ಹಕ್ಕುಗಳ ಸಮಿತಿ 

ಲೇಖಕ: ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.