ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಮಾಡಿದ ಭಾಷಣವೊಂದರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿದೆ. ‘ಮುಂದಿನ ಜನ್ಮ ಇದ್ದರೆ, ನಾನು ಮುಸಲ್ಮಾನನಾಗಿ ಜನಿಸಲು ಇಚ್ಛಿಸುತ್ತೇನೆ’ ಎಂದು ಸಿದ್ದರಾಮಯ್ಯ ಅವರು ಹೇಳಿರುವುದು ವಿಡಿಯೊದಲ್ಲಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಾರ್ವಜನಿಕರು, ‘ಮುಂದಿನ ಜನ್ಮ ಯಾಕೆ ಕಾಯ್ತಿಯಾ ಈಗ್ಲೇ ಮತಾಂತರ ಆಗೊ ಸಿದ್ದರಮುಲ್ಲಾಖನ್’ ಎಂಬಂಥ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ತಿರುಚಿದ ವಿಡಿಯೊ.
ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿರುವ ವಿಡಿಯೊದಲ್ಲಿ ಕನ್ನಡ ಸುದ್ದಿ ವಾಹಿನಿಯ ಲೋಗೊ ಇದೆ. ಇದರ ಜಾಡು ಹಿಡಿದಾಗ, ಆ ವಾಹಿನಿಯ ಯೂಟ್ಯೂಬ್ ಚಾನೆಲ್ನಲ್ಲಿ ಸಿದ್ದರಾಮಯ್ಯ ಅವರ ಭಾಷಣದ ಪೂರ್ಣ ವಿಡಿಯೊ ದೊರೆಕಿತು. ಮಂಡ್ಯದಲ್ಲಿ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಭಾಷಣದ ವಿಡಿಯೊ ಇದಾಗಿದೆ. ಎಚ್.ಡಿ. ದೇವೇಗೌಡರ ಮಾತೊಂದನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ‘ಏನೇ ಆದರೂ ನಾನು ಬಿಜೆಪಿಗೆ ಎಂದಿಗೂ ಹೋಗುವುದಿಲ್ಲ. ಮುಂದಿನ ಜನ್ಮ ಅಂತಿದ್ದರೆ ನಾನು ಮುಸಲ್ಮಾನನಾಗಿ ಹುಟ್ಟಬೇಕೆಂದು ಬಯಸುತ್ತೇನೆ. ಯಾಕೆಂದರೆ, ಬಿಜೆಪಿಯು ಕೋಮುವಾದಿ ಪಕ್ಷವಾಗಿದೆ ಎಂದು ಇದೇ ದೇವೇಗೌಡ ಹೇಳಿದ್ದರು’ ಎಂದು ಸಿದ್ದರಾಮಯ್ಯ ಅವರು ಭಾಷಣ ಮಾಡಿದ್ದರು. ದೇವೇಗೌಡರ ಕುರಿತು ಮಾತನಾಡಿದ್ದನ್ನು ಸಿದ್ದರಾಮಯ್ಯ ಅವರು ತಮ್ಮ ಕುರಿತೇ ಆಡುತ್ತಿದ್ದಾರೆ ಎನ್ನುವ ಅರ್ಥ ಬರುವಂತೆ ವಿಡಿಯೊವನ್ನು ತಿರುಚಲಾಗಿದೆ ಎಂದು ‘ದಿ ಕ್ವಿಂಟ್’ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.