ADVERTISEMENT

Fact Check: ಸಿಜೆಐ ಡಿ.ವೈ.ಚಂದ್ರಚೂಡ್ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು

ಫ್ಯಾಕ್ಟ್ ಚೆಕ್
Published 12 ಸೆಪ್ಟೆಂಬರ್ 2024, 19:17 IST
Last Updated 12 ಸೆಪ್ಟೆಂಬರ್ 2024, 19:17 IST
   

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಅವರ ಪತ್ನಿ ಕಲ್ಪನಾ ದಾಸ್‌ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಲಹಾ ವೈದ್ಯ, ಮೂಳೆ ಸರ್ಜನ್‌ ಡಾ.ಎಸ್‌.ಪಿ.ದಾಸ್‌ ಅವರ ಸೋದರ ಸೊಸೆ ಎಂದು ಹೇಳುವ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಂದ್ರಚೂಡ್‌ ಅವರು ರಜಾದಿನಗಳನ್ನು ಕಳೆಯಲು ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್‌ ಬ್ಯಾನರ್ಜಿ ಅವರೊಂದಿಗೆ ವಿದೇಶಕ್ಕೆ ತೆರಳಿದ್ದಾರೆ ಎಂದೂ ಪೋಸ್ಟ್‌ನಲ್ಲಿ ಬರೆಯಲಾಗಿದೆ. ಕೋಲ್ಕತ್ತದ ಆಸ್ಪತ್ರೆಯಲ್ಲಿ ನಡೆದಿರುವ ವೈದ್ಯೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸ್ವಯಂಪ್ರೇರಿತ ಅರ್ಜಿಯ ವಿಚಾರಣೆಯನ್ನು ಸಿಜೆಐ ನೇತೃತ್ವದ ನ್ಯಾಯಪೀಠವು ನಡೆಸುತ್ತಿರುವಾಗಲೇ ಈ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ, ಇದು ಸುಳ್ಳು ಸುದ್ದಿ.

ಅಂತರ್ಜಾಲದಲ್ಲಿ ಕೀವರ್ಡ್‌ಗಳನ್ನು ಹಾಕಿ ಹುಡುಕಾಡಿದಾಗ ಸಿಜೆಐ ಅವರ ಪತ್ನಿ ಕಲ್ಪನಾದಾಸ್‌ ಅವರು ಡಾ.ಎಸ್‌.ಪಿ.ದಾಸ್‌ ಅವರ ಸಂಬಂಧಿ ಎನ್ನುವುದಕ್ಕೆ ಹಾಗೂ ಸಿಜೆಐ ಅವರು ವಿದೇಶದಲ್ಲಿ ಟಿಎಂಸಿ ಮುಖಂಡ ಅಭಿಷೇಕ್‌ ಬ್ಯಾನರ್ಜಿ ಅವರೊಂದಿಗೆ ಸಮಯ ಕಳೆದಿದ್ದಾರೆ ಎನ್ನುವುದಕ್ಕೆ ಯಾವುದೇ ಸುದ್ದಿಯಾಗಲಿ, ಸಾಕ್ಷ್ಯವಾಗಲಿ ಸಿಗಲಿಲ್ಲ. ಒಡಿಶಾದ ಸುದ್ದಿ ಸಂಸ್ಥೆ ಕನಕ್‌ ನ್ಯೂಸ್‌ 2023ರ ಮೇ 7ರಂದು ಪ್ರಸಾರ ಮಾಡಿದ್ದ ಸುದ್ದಿಯೊಂದರ ವಿಡಿಯೊದಲ್ಲಿ ಚಂದ್ರಚೂಡ್‌ ಅವರು ತಾವು ಒಡಿಶಾದ ‘ಹೆಮ್ಮೆಯ ಅಳಿಯ’ ಮತ್ತು ತಮ್ಮ ಪತ್ನಿ ಒಡಿಶಾದವರು ಎಂದು ಹೇಳಿದ್ದರು.

ADVERTISEMENT

ದಿ ಸ್ಟೇಟ್ಸ್‌ಮನ್‌ ವರದಿ ಪ್ರಕಾರ, ಚಂದ್ರಚೂಡ್‌ ಅವರ ಮೊದಲ ಪತ್ನಿ ರಶ್ಮಿ ಅವರು 2007ರಲ್ಲಿ ಕ್ಯಾನ್ಸರ್‌ನಿಂದಾಗಿ ಮೃತಪಟ್ಟಿದ್ದರು. ಆ ಬಳಿಕ, ಬ್ರಿಟಿಷ್‌ ಕೌನ್ಸಿಲ್‌ನಲ್ಲಿ ಕೆಲಸ ಮಾಡಿದ್ದ ವಕೀಲರಾದ ಕಲ್ಪನಾ ದಾಸ್‌ ಅವರನ್ನು ಮದುವೆಯಾಗಿದ್ದರು. ಈ ಬಗ್ಗೆ ‘ಬೂಮ್‌ಲೈವ್‌’  ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯನ್ನು ಸಂಪರ್ಕಿಸಿದಾಗ, ಈ ಪೋಸ್ಟ್‌ನಲ್ಲಿರುವ ಅಂಶಗಳು ಸುಳ್ಳು ಎಂದು ಹೇಳಿದ್ದು, ನ್ಯಾಯಾಂಗ ವ್ಯವಸ್ಥೆಗೆ ಹಾನಿ ಮಾಡುವ ಯತ್ನ’ ಎಂದು ಹೇಳಿದೆ. ಪಶ್ಚಿಮ ಬಂಗಾಳ ಪೊಲೀಸರು ಕೂಡ ಈ ಪೋಸ್ಟ್‌ನಲ್ಲಿರುವ ಅಂಶಗಳನ್ನು ತಿರಸ್ಕರಿಸಿದ್ದಾರೆ ಎಂದು ಬೂಮ್‌ಲೈವ್‌ ಫ್ಯಾಕ್ಟ್‌ಚೆಕ್‌ನಲ್ಲಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.