ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಗನ್ ಹಿಡಿದಿಡುವ ಪೋಸ್ಟರ್ನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಅದರಲ್ಲಿ ಹಿಂದಿಯಲ್ಲಿ ‘ಬದ್ಲಾ ಪುರ’ (ಸೇಡು ತೀರಿತು) ಎಂದು ಬರೆಯಲಾಗಿದೆ. ಇತ್ತೀಚೆಗೆ ನಡೆದ ಎನ್ಸಿಪಿ ಮುಖಂಡ ಬಾಬಾ ಸಿದ್ದೀಕಿ ಅವರ ಹತ್ಯೆಯೊಂದಿಗೆ ಪೋಸ್ಟರ್ಗಳಿಗೆ ಸಂಬಂಧ ಕಲ್ಪಿಸುವ ಮೂಲಕ ಪೋಸ್ಟರ್ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೆ, ಈ ಪೋಸ್ಟರ್ಗೂ ಬಾಬಾ ಸಿದ್ದೀಕಿ ಹತ್ಯೆಗೂ ಯಾವುದೇ ಸಂಬಂಧ ಇಲ್ಲ.
ಪೋಸ್ಟರ್ ಅನ್ನು ರಿವರ್ಸ್ ಇಮೇಜ್ ಸರ್ಚ್ಗೆ ಒಳಪಡಿಸಿದಾಗ, ‘ಹಿಂದೂಸ್ಥಾನ್ ಟೈಮ್ಸ್’ನಲ್ಲಿ ಸೆಪ್ಟೆಂಬರ್ 26, 2024ರಂದು ಪ್ರಕಟವಾದ ಸುದ್ದಿಯ ಜತೆಗೆ ಇದೇ ಫೋಟೊ ಪ್ರಕಟವಾಗಿರುವುದು ಕಂಡುಬಂತು. ‘ಬದ್ಲಾಪುರ ಲೈಂಗಿಕ ದೌರ್ಜನ್ಯ ಘಟನೆಯ ಆರೋಪಿ ಅಕ್ಷಯ್ ಶಿಂದೆ ಎನ್ಕೌಂಟರ್ನಲ್ಲಿ ಹತನಾಗಿದ್ದು, ಅಪರಿಚಿತರು ಮುಂಬೈನಲ್ಲಿ ದೇವೇಂದ್ರ ಫಡಣವೀಸ್ ಅವರ ಪೋಸ್ಟರ್ಗಳನ್ನು ಅಳವಡಿಸಿದ್ದಾರೆ. ಸೇಡು ತೀರಿತು ಎಂದು ಅದರಲ್ಲಿ ಬರೆಯಲಾಗಿದೆ’ ಎಂದು ಫೋಟೊ ಜತೆಗೆ ವಿವರಣೆ ನೀಡಲಾಗಿತ್ತು. ಬಾಬಾ ಸಿದ್ದೀಕಿ ಹತ್ಯೆ ನಡೆದಿರುವುದು ಅಕ್ಟೋಬರ್ 12ರಂದು. ಫಡಣವೀಸ್ ಪೋಸ್ಟರ್ಗಳು ಬದ್ಲಾಪುರ ಎನ್ಕೌಂಟರ್ಗೆ ಸಂಬಂಧಿಸಿದ್ದು, ಬಾಬಾ ಸಿದ್ದೀಕಿ ಹತ್ಯೆ ನಡೆಯುವುದಕ್ಕೆ ಮುಂಚೆಯೆ ಅವನ್ನು ಅಂಟಿಸಲಾಗಿತ್ತು. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.