ಬೀದಿ ಬದಿಯ ಅಂಗಡಿಯೊಂದನ್ನು ಬುಲ್ಡೋಜರ್ ಕಿತ್ತೊಗೆಯುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದು ಆಂಧ್ರ ಪ್ರದೇಶದ ವಿಡಿಯೊ ಎಂದು ಪ್ರತಿಪಾದನೆ ಮಾಡಲಾಗುತ್ತಿದೆ. ಹಿಂದಿನ ವೈ.ಎಸ್.ಜಗನ್ಮೋಹನ್ ರೆಡ್ಡಿ ಸರ್ಕಾರವು ₹10 ಸಾವಿರ ಕೊಟ್ಟು ಅಂಗಡಿ ತೆರೆಯಲು ನೆರವಾದರೆ, ಈಗಿನ ಚಂದ್ರಬಾಬು ನಾಯ್ಡು ಸರ್ಕಾರ ಬೀದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುತ್ತಿದೆ ಎಂದು ಪ್ರಚಾರ ಮಾಡುತ್ತಾ ವಿಡಿಯೊ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊ ಅನ್ನು ಇನ್ವಿಡ್ ಟೂಲ್ ಸರ್ಚ್ಗೆ ಒಳಪಡಿಸಿ, ನಂತರ ಗೂಗಲ್ ಲೆನ್ಸ್ ಮೂಲಕ ಪರಿಶೀಲನೆ ನಡೆಸಿದಾಗ, ಇದು ತಮಿಳುನಾಡಿನ ‘ನ್ಯೂಸ್ ನೇತ್ರ’ ಮಾಧ್ಯಮದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗೆ ಸಂಪರ್ಕ ನೀಡಿತು. ವಿಡಿಯೊ ಕೆಳಗೆ, ‘ತಮಿಳುನಾಡಿನಲ್ಲಿ ಬೀದಿ ಬದಿ ಅಂಗಡಿ ಧ್ವಂಸ. ಜನರಿಂದ ಸರ್ಕಾರದ ತರಾಟೆ’ ಎಂದು ಬರೆಯಲಾಗಿತ್ತು. ಇದೇ ವಿಡಿಯೊ ಅನ್ನು ‘ಇಂಡಿಯಾ ಟುಡೇ’ ಕೂಡ ಅಪ್ಲೋಡ್ ಮಾಡಿದೆ. ಅಸಲಿ ವಿಚಾರ ಏನೆಂದರೆ, ಇದು ಚೆನ್ನೈನ ತಾಂಬರಂನಲ್ಲಿ ನಡೆದಿರುವ ಘಟನೆಯಾಗಿದ್ದು, ಬೀದಿ ಬದಿ ಅಂಗಡಿಯ ಧ್ವಂಸ ಪ್ರಕರಣವಾಗಿದೆ. ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರತಿಪಾದಿಸುತ್ತಿರುವಂತೆ ವಿಡಿಯೊ ಆಂಧ್ರ ಪ್ರದೇಶದ್ದು ಅಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.