ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಿರಿಯರೊಂದಿಗೆ ಇರುವ, ಅವರೊಂದಿಗೆ ಮಾತನಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ‘ಭಾರತ ಸರಕಾರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ತಂದೆಯನ್ನು ಭೇಟಿಯಾಗಲು ಹೋದಾಗ ಅವರ ಮನೆಯ ಅವಸ್ಥೆ ನೋಡಿ. ನಮ್ಮ ಊರುಗಳ ನಗರ ಸೇವಕರ ಮನೆಗಳೂ ಉಚ್ಛ ಸ್ಥಿತಿಯಲ್ಲಿ ಇರುತ್ತವೆ. ಆದರೆ ದೇಶದ ಆರ್ಥಿಕ ಧೋರಣೆ ನಿರ್ಧರಿಸುವ ಮೋದಿ ಸರಕಾರದ ಈ ಮಹಿಳಾ ಮಂತ್ರಿಯ ಸಾದಾತನ, ಸಭ್ಯತೆ ಉಳಿದ ರಾಜಕಾರಣಿಗಳಿಗೆ ಮಾದರಿ ಆಗಬೇಕು’ ಎಂಬ ಪೋಸ್ಟ್ ಅನ್ನು ಈ ವಿಡಿಯೊದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ತಪ್ಪುದಾರಿಗೆಳೆಯುವ ಸುದ್ದಿಯಾಗಿದೆ.
ವಿಡಿಯೊದಲ್ಲಿರುವ ದೃಶ್ಯಗಳ ರಿವರ್ಸ್ ಇಮೇಜ್ ಮಾಡಿದಾಗ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂಗಳಲ್ಲಿ ಹಂಚಿಕೆಯಾದ ಇದೇ ಮಾದರಿಯ ವಿಡಿಯೊ ದೊರಕಿತು. ಎರಡೂ ವಿಡಿಯೊಗಳಲ್ಲಿ ಇರುವ ದೃಶ್ಯಗಳನ್ನು ಗಮನಿಸಿದಾಗ, ಎರಡೂ ವಿಡಿಯೊಗಳು ಒಂದೇ ಆಗಿದೆ ಎಂದು ತಿಳಿದುಬಂದಿತು. ಈ ವಿಡಿಯೊವು 2022ರ ಡಿಸೆಂಬರ್ 3ರಂದು ಹಾಗೂ 4ರಂದು ನಿರ್ಮಲಾ ಅವರ ಅಧಿಕೃತ ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಕ್ರಮವಾಗಿ ಹಂಚಿಕೆಯಾಗಿದೆ. ‘ವಾರಾಣಸಿಯಲ್ಲಿರುವ ಸಿವ ಮಡಂಗೆ ನಿನ್ನೆ ಭೇಟಿ ನೀಡಿದೆ. ಮಹಾಕವಿ ಭಾರತೀಯಾರ್ ಅವರ ಕುಟುಂಬದೊಂದಿಗೆ ಮಾತುಕತೆ ನಡೆಸಿದೆ. ಭಾರತೀಯಾರ್ ಅವರ ಸೋದರಳಿಯನ ಮಗ 96 ವರ್ಷದ ಶ್ರೀ ಕೆ.ವಿ. ಕೃಷ್ಣನ್ ಅವರನ್ನೂ ಭೇಟಿ ಮಾಡಿದೆ’ ಎಂದು ಬರೆದುಕೊಂಡಿದ್ದಾರೆ. ಆದ್ದರಿಂದ, ವಿಡಿಯೊದಲ್ಲಿರುವವರು ನಿರ್ಮಲಾ ಅವರ ತಂದೆ ಅಲ್ಲ, ಬದಲಿಗೆ ಖ್ಯಾತ ಕವಿ, ತಮಿಳುನಾಡಿನ ಭಾರತೀಯಾರ್ ಅವರ ಕುಂಟುಂಬಸ್ಥ ಎಂದು ಪಿಟಿಐ ಫ್ಯಾಕ್ಟ್ಚೆಕ್ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.