ADVERTISEMENT

ಸೋಮನಾಥ ಚಟರ್ಜಿ ಅವಧಿಯಲ್ಲಿ 10 ಸಂಸದರ ಉಚ್ಚಾಟನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:28 IST
Last Updated 8 ಡಿಸೆಂಬರ್ 2023, 16:28 IST
<div class="paragraphs"><p>&nbsp;ಪ್ರಾತಿನಿಧಿಕ ಚಿತ್ರ</p></div>

 ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದ ಅಡಿಯಲ್ಲಿ ಸಂಸದರನ್ನು ಉಚ್ಚಾಟಿಸುತ್ತಿರುವುದು ಇದೇ ಮೊದಲಲ್ಲ. ಯುಪಿಎ ಸರ್ಕಾರದ ಆಡಳಿತದ ಅವಧಿಯಲ್ಲಿ, ಸೋಮನಾಥ ಚಟರ್ಜಿ ಅವರು ಲೋಕಸಭೆಯ ಸ್ಪೀಕರ್ ಆಗಿದ್ದಾಗ 10 ಮಂದಿ ಸಂಸದರನ್ನು ಇದೇ ಆರೋಪದ ಅಡಿಯಲ್ಲಿ ಉಚ್ಚಾಟಿಸಲಾಗಿತ್ತು.

ಆಗ ರಾಜ್ಯಸಭೆಯ ಒಬ್ಬ ಸದಸ್ಯರನ್ನು ಕೂಡ ಉಚ್ಚಾಟನೆ ಮಾಡಲಾಗಿತ್ತು. ಸುದ್ದಿವಾಹಿನಿಗಳು ನಡೆಸಿದ ಮಾರುವೇಷದ ಕಾರ್ಯಾಚರಣೆಯಲ್ಲಿ ಒಟ್ಟು 11 ಮಂದಿ ಸಂಸದರು (10 ಮಂದಿ ಲೋಕಸಭಾ ಸದಸ್ಯರು, ಒಬ್ಬ ರಾಜ್ಯಸಭಾ ಸದಸ್ಯ), ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಕೇಳಿದ್ದು ಸೆರೆಯಾಗಿತ್ತು. 2005ರ ಡಿಸೆಂಬರ್‌ ತಿಂಗಳ ಈ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.

ADVERTISEMENT

ಪ್ರಶ್ನೆ ಕೇಳಲು ಲಂಚ ಪಡೆದಿದ್ದು ‘ಅನೈತಿಕವಾದುದು ಹಾಗೂ ಸಭ್ಯತೆಗೆ ಎಸಗಿದ ಅಪಚಾರ. ಅವರನ್ನು ಸದನದ ಸದಸ್ಯರನ್ನಾಗಿ ಮುಂದುವರಿಸುವುದು ಸರಿಯಲ್ಲ’ ಎಂದು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ 2005ರ ಡಿಸೆಂಬರ್‌ 23ರಂದು ನಿರ್ಣಯ ಅಂಗೀಕರಿಸಲಾಗಿತ್ತು. ಕಾಕತಾಳೀಯ ಎಂಬಂತೆ, ಆಗ ಪ್ರಶ್ನೆಗಾಗಿ ಲಂಚ ಪಡೆದ ಸಂಸದರನ್ನು ಉಚ್ಚಾಟಿಸುವ ನಿರ್ಣಯವನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ್ದು ಚಳಿಗಾಲದ ಅಧಿವೇಶನದಲ್ಲಿ.

ಈಗ, ಟಿಎಂಸಿಯ ಮಹುವಾ ಮೊಯಿತ್ರಾ ಅವರನ್ನು ಇಂಥದ್ದೇ ಆರೋಪದ ಅಡಿಯಲ್ಲಿ ಉಚ್ಚಾಟನೆ ಮಾಡಿರುವುದು ಕೂಡ ಚಳಿಗಾಲದ ಅಧಿವೇಶನದಲ್ಲಿ. ಬಿಜೆಪಿಯ ಐವರು ಲೋಕಸಭಾ ಸದಸ್ಯರು, ಬಿಎಸ್‌ಪಿಯ ಮೂವರು ಸದಸ್ಯರು ಹಾಗೂ ಕಾಂಗ್ರೆಸ್‌ ಮತ್ತು ಆರ್‌ಜೆಡಿಯ ತಲಾ ಒಬ್ಬ ಸದಸ್ಯರು ಆಗ ಉ‌ಚ್ಚಾಟನೆಗೊಂಡಿದ್ದರು. ಉಚ್ಚಾಟನೆಗೊಂಡ ಇನ್ನೊಬ್ಬರು ರಾಜ್ಯಸಭೆಯ ಬಿಜೆಪಿ ಸದಸ್ಯರಾಗಿದ್ದರು.

ಉಚ್ಚಾಟನೆಯ ಶಿಕ್ಷೆಯು ಅಪರಾಧದ ಪ್ರಮಾಣಕ್ಕೆ ಅನುಗುಣವಾಗಿ ಇಲ್ಲ ಎಂದು ಆಕ್ಷೇಪಿಸಿ, ಆಗ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿದ್ದ ಎಲ್‌.ಕೆ. ಅಡ್ವಾಣಿ ಸಭಾತ್ಯಾಗ ನಡೆಸಿದ್ದರು. ಅಲ್ಲದೆ, ಉಚ್ಚಾಟನೆ ನಿರ್ಣಯವನ್ನು ಸಂಸತ್ತು ಅಂಗೀಕರಿಸಿದ ಮಾರನೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಅಡ್ವಾಣಿ ಅವರು, ‘ಸಂಸದರು ಮಾಡಿರುವ ಅಪರಾಧಕ್ಕೆ ಈಗ ವಿಧಿಸಿರುವ ಶಿಕ್ಷೆ ಹೆಚ್ಚೇ ಆಯಿತು. ಒಂದು ಅಧಿವೇಶನಕ್ಕೆ ಹಾಜರಾಗದಂತೆ ಅಮಾನತು ಮಾಡುವಂತಹ ಲಘು ಶಿಕ್ಷೆ ವಿಧಿಸಿದ್ದರೆ ಸಾಕಿತ್ತು’ ಎಂದು ಹೇಳಿದ್ದರು.

1951ರಲ್ಲಿ ಅಂದಿನ ತಾತ್ಕಾಲಿಕ ಸಂಸತ್ತು, ಸದಸ್ಯ ಎಚ್‌.ಜಿ. ಮುದ್ಗಲ್‌ ಅವರ ವಿರುದ್ಧ ಉಚ್ಚಾಟನೆಯ ಕ್ರಮ ಕೈಗೊಂಡಿತ್ತು. ಮುದ್ಗಲ್ ಅವರು ಸಂಸತ್ತಿನಲ್ಲಿ ಲಾಬಿ ನಡೆಸಲು ಮುಂಬೈನ ಚಿನ್ನಾಭರಣ ವರ್ತಕರಿಂದ ಲಂಚ ಪಡೆದ ಆರೋಪ ಎದುರಿಸುತ್ತಿದ್ದರು. ಆದರೆ, ಒಂದೇ ಬಾರಿ 10 ಮಂದಿ ಸದಸ್ಯರನ್ನು ಉಚ್ಚಾಟಿಸುವ ನಿರ್ಣಯವನ್ನು ಸಂಸತ್ತು ಕೈಗೊಂಡಿದ್ದು ಚಟರ್ಜಿ ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.