ಮುಂಬೈ: ಸ್ಫೋಟ ಪರಿಕರಗಳನ್ನು ನಗರಕ್ಕೆ ತರಲು ಅನುವು ಮಾಡಿಕೊಟ್ಟಿದ್ದರು ಎಂಬ ಆರೋಪ ಎದುರಿಸುತ್ತಿದ್ದ ಕೇಂದ್ರ ಸುಂಕ ಇಲಾಖೆಯ ಇಬ್ಬರು ನಿವೃತ್ತ ಅಧಿಕಾರಿಗಳಿಗೆ, 20 ವರ್ಷಗಳ ತರುವಾಯ ಬಾಂಬೆ ಹೈಕೋರ್ಟ್ ಶಿಸ್ತುಕ್ರಮದಿಂದ ವಿನಾಯಿತಿ ನೀಡಿದೆ.
ಉಲ್ಲೇಖಿತ ಸ್ಫೋಟಕ ಪರಿಕರಗಳನ್ನೇ 1993ರಲ್ಲಿ ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಕೃತ್ಯ ನಡೆಸಲು ಬಳಸಲಾಗಿತ್ತು ಎಂಬ ಹಿನ್ನೆಲೆಯಲ್ಲಿ ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಇಲಾಖೆಯಿಂದ ಆದೇಶಿಸಲಾಗಿತ್ತು.
ಅಧಿಕಾರಿಗಳ ವಿರುದ್ಧದ ಆರೋಪ ದೃಢಪಡಿಸಲು ಇಲಾಖಾ ತನಿಖೆಯ ವೇಳೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ ಎಂಬ ಅಂಶವನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ, ನ್ಯಾಯಮೂರ್ತಿ ಆರೀಫ್ ಡಾಕ್ಟರ್ ಅವರಿದ್ದ ಪೀಠ, ಆದೇಶ ವಜಾಗೊಳಿಸಿತು.
ಕೇಂದ್ರ ಸುಂಕ ಇಲಾಖೆಯ ನಿವೃತ್ತ ಸೂಪರಿಂಟೆಂಡೆಂಟ್ಗಳಾದ ಎಸ್.ಎಂ.ಪಡ್ವಾಲ್, ಯಶವಂತ ಲೋಟಲೆ ಅವರು ಬಾಕಿ ವೇತನ, ಪಿಂಚಣಿ ಒಳಗೊಂಡಂತೆ ನಿವೃತ್ತಿ ನಂತರದ ಸೌಲಭ್ಯಗಳಿಗೆ ಅರ್ಹರಿದ್ದಾರೆ. ಎರಡು ತಿಂಗಳಲ್ಲಿ ಇದನ್ನು ಪಾವತಿಸಬೇಕು ಎಂದು ಆದೇಶಿಸಿದೆ.
ಮುಂಬೈನಲ್ಲಿ ಮಾರ್ಚ್ 12, 1993ರಂದು ಸಂಭವಿಸಿದ್ದ ಸರಣಿ ಬಾಂಬ್ ಸ್ಫೋಟ ಕೃತ್ಯದಲ್ಲಿ 257 ಜನರು ಸತ್ತಿದ್ದು, 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ವಿಚಾರಣೆ ನಡೆಸಿದ್ದ ವಿಶೇಷ ಕೋರ್ಟ್ ಈ ಪ್ರಕರಣದ ಸಂಬಂಧ 100 ಜನರನ್ನು ಶಿಕ್ಷೆಗೆ ಗುರಿಪಡಿಸಿತ್ತು.
ಸರಣಿ ಬಾಂಬ್ ಸ್ಫೋಟ ಪ್ರಕರಣದ ಸಂಬಂಧ ಕೇಂದ್ರ ಸುಂಕ ಇಲಾಖೆಯ ಇಬ್ಬರು ಅಧಿಕಾರಿಗಳು ಯಾವುದೇ ಕ್ರಿಮಿನಲ್ ವಿಚಾರಣೆಯನ್ನು ಎದುರಿಸಿಲ್ಲ ಎಂಬ ಅಂಶವನ್ನೂ ಶಿಸ್ತುಕ್ರಮದಿಂದ ವಿನಾಯಿತಿ ನೀಡಿ ಆದೇಶಿಸಿದ ಕೋರ್ಟ್ ಉಲ್ಲೇಖಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.