ADVERTISEMENT

82 ಶಿಕ್ಷಕರಿಗೆ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪ್ರದಾನ

ರಾಜ್ಯದ ನಾಲ್ವರಿಗೆ ಒಲಿದ ಪ್ರಶಸ್ತಿ

ಪಿಟಿಐ
Published 5 ಸೆಪ್ಟೆಂಬರ್ 2024, 16:13 IST
Last Updated 5 ಸೆಪ್ಟೆಂಬರ್ 2024, 16:13 IST
ನವದೆಹಲಿಯಲ್ಲಿ ಗುರುವಾರ ನಡೆದ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು
ನವದೆಹಲಿಯಲ್ಲಿ ಗುರುವಾರ ನಡೆದ ‘ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು   

ನವದೆಹಲಿ: ಕರ್ನಾಟಕದ ನಾಲ್ವರು ಶಿಕ್ಷಕರು ಸೇರಿದಂತೆ ದೇಶದ 82 ಶಿಕ್ಷಕರಿಗೆ ಪ್ರಸಕ್ತ ಸಾಲಿನ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗುರುವಾರ ಪ್ರದಾನ ಮಾಡಿದರು.

ಬೆಂಗಳೂರಿನ ಸಂಜಯನಗರದ ಡ್ಯಾಫೋಡಿಲ್ಸ್‌ ಇಂಗ್ಲಿಷ್‌ ಶಾಲೆಯ ಶಿಕ್ಷಕ ಎಚ್‌.ವಿ.ನರಸಿಂಹ ಮೂರ್ತಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಲ್ಲಸಂದ್ರ– ಕಮ್ಮಗೊಂಡನಹಳ್ಳಿ ಕೇಂದ್ರೀಯ ವಿದ್ಯಾಲಯದ ಅಶೋಕ್‌ ಸೇನ್‌ಗುಪ್ತಾ, ಮೈಸೂರು ಜಿಲ್ಲೆ ಹುಣಸೂರಿನ ಸರ್ಕಾರಿ ಪಿ.ಯು ಕಾಲೇಜಿನ ಎಚ್‌.ಎನ್‌. ಗಿರೀಶ್‌, ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ಆರ್‌. ನಾರಾಯಣಸ್ವಾಮಿ ಪ್ರಶಸ್ತಿ ಪಡೆದ ಕರ್ನಾಟಕದ ಶಿಕ್ಷಕರು.

ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸುವುದರ ಜತೆಗೆ, ಮಕ್ಕಳ ಭವಿಷ್ಯದ ಪ್ರಗತಿಗೆ ಗಣನೀಯ ಕೊಡುಗೆ ನೀಡಿರುವ ಶಿಕ್ಷಕರ ಸಾಧನೆಯನ್ನು ಗುರುತಿಸಿ ಪ್ರತಿ ವರ್ಷ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ನೀಡಲಾಗುತ್ತದೆ.

ADVERTISEMENT

ಪ್ರಶಸ್ತಿಯು ₹ 50,000 ನಗದು, ಪ್ರಮಾಣ ಪತ್ರ ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ. ಪ್ರಶಸ್ತಿ ವಿಜೇತರಿಗೆ ಪ್ರಧಾನಿ ಜತೆಗೆ ಸಂವಾದ ನಡೆಸುವ ಅವಕಾಶವೂ ದೊರೆಯುತ್ತದೆ.

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ದೇಶದಾದ್ಯಂತ 50 ಶಿಕ್ಷಕರನ್ನು ಈ ಪ್ರಶಸ್ತಿಗಾಗಿ ಆಯ್ಕೆ ಮಾಡುತ್ತದೆ. ಇದಕ್ಕಾಗಿ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಪ್ರಶಸ್ತಿಗೆ ಆಯ್ಕೆಯಾದ 50 ಶಿಕ್ಷಕರು 28 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶ ಹಾಗೂ ಆರು ಸಂಘಟನೆಗಳಿಗೆ ಸೇರಿದವರು. ಈ ಪೈಕಿ 34 ಪುರುಷರು ಮತ್ತು 16 ಮಹಿಳೆಯರು. ಅವರಲ್ಲಿ ಇಬ್ಬರು ಅಂಗವಿಕಲ ಶಿಕ್ಷಕರಾಗಿದ್ದರೆ, ಒಬ್ಬರು ಸಿಡಬ್ಲ್ಯುಎಸ್‌ಎನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರಲ್ಲದೆ ಉನ್ನತ ಶಿಕ್ಷಣ ಇಲಾಖೆಯ 16 ಮತ್ತು ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ 16 ಶಿಕ್ಷಕರಿಗೂ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಮೊದಲು ಶಾಲಾ ಶಿಕ್ಷಕರಿಗೆ ಮಾತ್ರ ನೀಡಲಾಗುತ್ತಿದ್ದ ಈ ಪ್ರಶಸ್ತಿಯನ್ನು ಉನ್ನತ ಶಿಕ್ಷಣ ಮತ್ತು ಪಾಲಿಟೆಕ್ನಿಕ್‌ ಶಿಕ್ಷಕರಿಗೂ ನೀಡಬೇಕು ಎಂದು ಕಳೆದ ವರ್ಷ ನಿರ್ಧರಿಸಲಾಗಿತ್ತು.

ಕಲಿಕಾ ಸಾಮರ್ಥ್ಯ ವೃದ್ಧಿ: ವಿವಿಧ ಚಟುವಟಿಕೆಗೆ ಒತ್ತು ಬೆಂಗಳೂರಿನ ಸಂಜಯನಗರದ ಡ್ಯಾಫೋಡಿಲ್ಸ್‌ ಇಂಗ್ಲಿಷ್‌ ಶಾಲೆಯ ಶಿಕ್ಷಕ ಎಚ್‌.ವಿ.ನರಸಿಂಹ ಮೂರ್ತಿ ಅವರು ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸಲು ಪೂರಕವಾಗಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳ ‘ಕಣ್ಣಿಗೆ ಬಟ್ಟೆ ಕಟ್ಟುವ’ ಮತ್ತು ಕಾಗದಗಳನ್ನು ಬಳಸಿ ಕುಶಲ ಕಲೆಗಳ ಮೂಲಕ ನೈಪುಣ್ಯ ವೃದ್ಧಿಸುವ ಚಟುವಟಿಕೆಗಳನ್ನು ಮಾಡಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೆ ಸುಡೊಕು ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ಯೋಜನೆ ಆಧಾರಿತ ಕಲಿಕೆಗೆ ಒತ್ತು ನೀಡಿದ್ದಾರೆ. ಮಕ್ಕಳಿಗೆ ಆಟದ ಮೂಲಕ ಖುಷಿಯಿಂದ ಕಲಿಯುವುದಕ್ಕೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳೂವುದಕ್ಕೆ ಅವರು ನೆರವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.