ADVERTISEMENT

ಲಖನೌ: ಇಲ್ಲೊಂದು ವಿಭಿನ್ನ ರೀತಿಯ ‘ರಾವಣ ದಹನ’

ಮನೆಯಿಂದ ಹೊರಹಾಕಿದ ಪತಿ ವಿರುದ್ಧ ಪತ್ನಿಯ ಹೋರಾಟ  

ಪಿಟಿಐ
Published 15 ಅಕ್ಟೋಬರ್ 2024, 14:17 IST
Last Updated 15 ಅಕ್ಟೋಬರ್ 2024, 14:17 IST
<div class="paragraphs"><p>ರಾವಣ ದಹನ</p></div>

ರಾವಣ ದಹನ

   

(ಪಿಟಿಐ ಸಂಗ್ರಹ ಚಿತ್ರ)

ಲಖನೌ: ದಸರಾ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಜನರು ರಾಕ್ಷಸರ ರಾಜ ರಾವಣನ ಪ್ರತಿಕೃತಿಗಳನ್ನು ಸುಡುವುದನ್ನು ನೋಡಿರಬಹುದು. ಆದರೆ, ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಸಂಪೂರ್ಣವಾಗಿ ವಿಭಿನ್ನ ರೀತಿಯ ‘ರಾವಣ ದಹನ’ (ರಾವಣನ ಪ್ರತಿಕೃತಿ ದಹನ) ಮಾಡಿ, ಜನರ ಗಮನ ಸೆಳೆದಿದ್ದಾರೆ.

ADVERTISEMENT

ರಾವಣನ ಪ್ರತಿಕೃತಿಯನ್ನು ಸುಡುವ ಬದಲು, ಮಹಿಳೆ ತನ್ನ ಪತಿ ಮತ್ತು ಅತ್ತೆಯ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದಾರೆ. ಗಂಡನ ವಿವಾಹೇತರ ಸಂಬಂಧವನ್ನು ವಿರೋಧಿಸಿದ ನಂತರ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆ ಮಹಿಳೆ ದೂರಿದ್ದಾರೆ.

ಮುಸ್ಕರ ಎಂಬ ಗ್ರಾಮದ ಪ್ರಿಯಾಂಕಾ ದೀಕ್ಷಿತ್ ಎಂಬ ಮಹಿಳೆ, ನವರಾತ್ರಿಯ ಕೊನೆಯ ದಿನ ತನ್ನ ಪತಿ ಸಂಜೀವ್ ದೀಕ್ಷಿತ್ ಮತ್ತು ಆಕೆಯ ಅತ್ತೆಯ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದಾರೆ. ಈ ವಿಶಿಷ್ಟ ‘ರಾವಣ ದಹನ’ದ ಚಿತ್ರಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಸೋಮವಾರ ಈ ವಿಷಯ ಎಲ್ಲರ ಗಮನಕ್ಕೆ ಬಂದಿದೆ.

‘ಸಾಮಾಜಿಕ ನಿಯಮಗಳನ್ನು ಪಾಲಿಸದ ಇಂತಹ ಜನರು ಸಹ ರಾವಣನಂತೆಯೇ ಇರುತ್ತಾರೆ. ಮಹಿಳೆಯರನ್ನು ಗೌರವಿಸದ ಜನರ ಕಡೆಗೆ ಸಮಾಜದ ಗಮನವನ್ನು ಸೆಳೆಯಬೇಕು’ ಎಂದು 14 ವರ್ಷಗಳ ಹಿಂದೆ ಸಂಜೀವ್ ಅವರನ್ನು ವಿವಾಹವಾದ ಪ್ರಿಯಾಂಕಾ ಹೇಳಿದ್ದಾರೆ.

‘ಪತಿ ಬೇರೆ ಮಹಿಳೆಯೊಂದಿಗೆ ಸಹ ಜೀವನದ ಸಂಬಂಧ ಹೊಂದಿದ್ದ. ನಾನು ಅದನ್ನು ವಿರೋಧಿಸಿದಾಗ ಅವರು ನನ್ನನ್ನು ಮನೆಯಿಂದ ಹೊರಹಾಕಿದರು. ಅವರ ಪ್ರತಿಕೃತಿಗಳನ್ನು ದಹಿಸುವ ಮೂಲಕ, ಅಂತಹವರನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸಲು ಪ್ರಯತ್ನಿಸಿದ್ದೇನೆ. ಆಗ ಮಾತ್ರ ಅವರು ಪಾಠ ಕಲಿಯುತ್ತಾರೆ’ ಎಂದೂ ಪ್ರಿಯಾಂಕಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.