ADVERTISEMENT

CM ಸ್ಥಾನಕ್ಕೆ ಕೇಜ್ರಿವಾಲ್ ರಾಜೀನಾಮೆ ಘೋಷಣೆ ಬೆನ್ನಲ್ಲೇ AAP ನಾಯಕರ ಸರಣಿ ಸಭೆ

ಪಿಟಿಐ
Published 16 ಸೆಪ್ಟೆಂಬರ್ 2024, 15:01 IST
Last Updated 16 ಸೆಪ್ಟೆಂಬರ್ 2024, 15:01 IST
<div class="paragraphs"><p>ದೆಹಲಿಯ ಮುಖ್ಯಮಂತ್ರಿ ನಿವಾಸಕ್ಕೆ ಎಎಪಿ ಮುಖಂಡ ಮನೀಶ್ ಸಿಸೋಡಿಯಾ ಸೋಮವಾರ ಭೇಟಿ ನೀಡಿದರು</p></div>

ದೆಹಲಿಯ ಮುಖ್ಯಮಂತ್ರಿ ನಿವಾಸಕ್ಕೆ ಎಎಪಿ ಮುಖಂಡ ಮನೀಶ್ ಸಿಸೋಡಿಯಾ ಸೋಮವಾರ ಭೇಟಿ ನೀಡಿದರು

   

ಪಿಟಿಐ ಚಿತ್ರ

ನವದೆಹಲಿ: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅರವಿಂದ ಕೇಜ್ರಿವಾಲ್ ಘೋಷಿಸಿದ ನಂತರ, ಆಮ್ ಆದ್ಮಿ ಪಕ್ಷ (ಎಎಪಿ) ಕಚೇರಿಯಲ್ಲಿ ಸೋಮವಾರ ಸರಣಿ ಸಭೆಗಳು ನಡೆದವು. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗೆ ಸಂಬಂಧಿಸಿದಂತೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿಯನ್ನೂ ಒಳಗೊಂಡು ನಿರಂತರ ಚರ್ಚೆಗಳು ಆಯೋಜನೆಗೊಂಡಿದ್ದವು.

ADVERTISEMENT

ಪಕ್ಷದ ಹಿರಿಯ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೇಜ್ರಿವಾಲ್ ಅವರ ಅಧಿಕೃತ ನಿವಾಸಕ್ಕೆ ತೆರಳಿ, ಮುಖ್ಯಮಂತ್ರಿ ಸ್ಥಾನಕ್ಕೆ ಸಂಭವನೀಯರ ಪಟ್ಟಿ ಕುರಿತು ಚರ್ಚಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ದೆಹಲಿ ಸರ್ಕಾರದ ಸಚಿವರಾದ ಅತಿಶಿ, ಗೋಪಾಲ್ ರಾಯ್, ಸೌರಭ್ ಭಾರದ್ವಾಜ್, ಕೈಲಾಶ್ ಗೆಹ್ಲೋತ್, ಉಪ ಸ್ಪೀಕರ್‌ ರಾಖಿ ಬಿರ್ಲಾ, ಸುನೀತಾ ಕೇಜ್ರಿವಾಲ್‌ ಈ ಸಭೆಯಲ್ಲಿ ಪಾಲ್ಗೊಂಡರು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ಹಣದ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಸುಮಾರು ಆರು ತಿಂಗಳ ಜೈಲು ವಾಸದ ನಂತರ ಕಳೆದ ಶುಕ್ರವಾರ ಬಿಡುಗಡೆಗೊಂಡರು. ನಂತರ ಕಾರ್ಯಕರ್ತರ ಸಭೆ ನಡೆಸಿ ತಮ್ಮ ರಾಜೀನಾಮೆಯನ್ನು ಘೋಷಿಸಿದರು. ಜತೆಗೆ ಮುಂದೆ ತಾನು ಮುಖ್ಯಮಂತ್ರಿ ಹಾಗೂ ಮನೀಶ್ ಸಿಸೋಡಿಯಾ ಅವರು ಉಪಮುಖ್ಯಮಂತ್ರಿ ಆಗುವುದೇ ಆದರೆ, ಜನರು ನಮ್ಮನ್ನು ನಿರಪರಾಧಿ ಎಂದು ಜನ ನಿರ್ಧರಿಸಿದ ನಂತರವಷ್ಟೇ ನಾವು ಹುದ್ದೆಗೆ ಮರಳುತ್ತೇವೆ ಎಂದಿದ್ದರು.

‘ನನ್ನನ್ನು ಭ್ರಷ್ಟ ಎಂದು ಸಾಬೀತುಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಆದರೆ ದೆಹಲಿಯಲ್ಲಿ ಉತ್ತಮ ಶಾಲೆ ಹಾಗೂ ಉಚಿತ ವಿದ್ಯುತ್ ನೀಡಲಾಗದ ಕೇಸರಿ ಪಕ್ಷವೇ ನಿಜವಾಗಿ ಭ್ರಷ್ಟಾಚಾರ ನಡೆಸಿದೆ. ನಾವು ಪ್ರಾಮಾಣಿಕ ಆಡಳಿತ ನೀಡಿದ್ದೇವೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

‘ಪ್ರಕರಣದಲ್ಲಿ ನನ್ನನ್ನು ಬಂಧಿಸಿದ ನಂತರ ನಾನು ರಾಜೀನಾಮೆ ನೀಡಲಿಲ್ಲ. ಏಕೆಂದರೆ ನಾನು ಪ್ರಜಾಪ್ರಭುತ್ವವನ್ನು ಗೌರವಿಸುತ್ತೇನೆ. ಸಂವಿಧಾನವೇ ನನಗೆ ಸರ್ವಶ್ರೇಷ್ಠ. ಬಿಜೆಪಿಗೆ ಎದುರು ನಿಲ್ಲುವ ಸಾಮರ್ಥ್ಯವಿದ್ದರೆ ಅದು ಎಎಪಿಗೆ ಮಾತ್ರ’ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.