ನವದೆಹಲಿ: ಹಿಂಡನ್ಬರ್ಗ್ ವರದಿಯ ಬಗ್ಗೆ ಮಾತನಾಡಿರುವ ಉದ್ಯಮಿ ಗೌತಮ್ ಅದಾನಿ, ‘ಅದು ಎರಡು ಮಗ್ಗುಲಿನ ದಾಳಿಯಾಗಿತ್ತು. ನಮ್ಮ ಹಣಕಾಸು ಸ್ಥಿತಿಯನ್ನು ಮನಬಂದಂತೆ ಟೀಕಿಸಲಾಯಿತು. ಅದೇ ವೇಳೆ, ಸುಳ್ಳು ಮಾಹಿತಿ ಮೂಲಕ ನಮಗೆ ರಾಜಕೀಯ ಬಣ್ಣ ಬಳಿಯಲಾಯಿತು’ ಎಂದು ಹೇಳಿದ್ದಾರೆ.
ಅದಾನಿ ಎಂಟರ್ಪ್ರೈಸಸ್ ಲಿಮಿಟೆಡ್ನ ವಾರ್ಷಿಕ ಷೇರುದಾರರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಗೌತಮ್ ಅದಾನಿ, ಹಿಂಡನ್ಬರ್ಗ್ ವರದಿಯಿಂದ ತಾವು ಬಿಕ್ಕಟ್ಟು ಅನುಭವಿಸಿದ್ದಾಗಿ ತಿಳಿಸಿದರು.
‘ಆಧಾರರಹಿತ ಆರೋಪಗಳ ಮೂಲಕ ನಮ್ಮ ದಶಕಗಳ ಕಠಿಣ ಪರಿಶ್ರಮವನ್ನು ಪ್ರಶ್ನಿಸಲಾಯಿತು. ನಮ್ಮ ಪ್ರಾಮಾಣಿಕತೆ ಮತ್ತು ಖ್ಯಾತಿಯ ಮೇಲೆ ಹಿಂದೆಂದೂ ಇಲ್ಲದ ರೀತಿಯಲ್ಲಿ ದಾಳಿಗಳು ನಡೆದವು. ನಾವು ಅದರ ವಿರುದ್ಧ ಹೋರಾಡಿದೆವು ಮತ್ತು ನಮ್ಮ ಸಂಸ್ಥೆಯ ಅಡಿಪಾಯವನ್ನು ಯಾರೂ ಅಲುಗಾಡಿಸಲಾರರು ಎಂಬುದನ್ನು ಸಾಬೀತುಪಡಿಸಿದೆವು’ ಎಂದು ಅಭಿಪ್ರಾಯಪಟ್ಟರು.
‘ಉತ್ತಮ ಹಣಕಾಸು ಸ್ಥಿತಿ, ಕಡಿಮೆ ಸಾಲ ಮತ್ತು ದಾಖಲೆಯ ಗಳಿಕೆಯ ಮೂಲಕ ಹಿಂದೆಂದಿಗಿಂತಲೂ ಈಗ ತಾವು ಬಲಿಷ್ಠವಾಗಿದ್ದೇವೆ’ ಎಂದ ಶತಕೋಟ್ಯಧಿಪತಿ ಗೌತಮ್ ಅದಾನಿ, ಅತ್ಯುತ್ತಮವಾದದ್ದು ತಮ್ಮಿಂದ ಇನ್ನೂ ಬರಬೇಕಿದೆ ಎಂದೂ ಅಭಿಪ್ರಾಯಪಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.