ADVERTISEMENT

ಡೆರೆಕ್ ಒಬ್ರಯಾನ್ ಅವರನ್ನು ವಿದೇಶಿಗ ಎಂದು ಕರೆದಿದ್ದ ಅಧೀರ್ ರಂಜನ್ ಕ್ಷಮೆಯಾಚನೆ

ಪಿಟಿಐ
Published 26 ಜನವರಿ 2024, 15:24 IST
Last Updated 26 ಜನವರಿ 2024, 15:24 IST
   

ನವದೆಹಲಿ: ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಒಬ್ರಯಾನ್ ಅವರನ್ನು ವಿದೇಶಿಗ ಎಂದು ಕರೆದಿರುವ ಕುರಿತು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕ್ಷಮೆ ಕೇಳಿದ್ದಾರೆ.

ಡೆರೆಕ್ ಒಬ್ರಯಾನ್ ಅವರಿಗೆ ಕರೆ ಮಾಡಿ ಕ್ಷಮೆ ಯಾಚಿಸಿರುವ ಅಧೀರ್, ಎಕ್ಸ್‌ನಲ್ಲೂ ಈ ಕುರಿತಂತೆ ಪೋಸ್ಟ್ ಮಾಡಿದ್ದಾರೆ.

‘ಮಿಸ್ಟರ್ ಡೆರೆಕ್ ಒಬ್ರಯಾನ್ ಅವರು ವಿದೇಶಿಗರೆಂದು ನಾನು ಅಜಾಗರೂಕತೆಯಿಂದ ನೀಡಿದ ಹೇಳಿಕೆ ಕುರಿತಂತೆ ನನ್ನ ವಿಷಾದವನ್ನು ಅವರಿಗೆ ತಿಳಿಸಿದ್ದೇನೆ’ಎಂದು ಅವರು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಅಧೀರ್ ರಂಜನ್ ಕ್ಷಮಾಪಣೆಯನ್ನು ಒಬ್ರಯಾನ್ ಅಂಗೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಮಾತನಾಡಿದ್ದ ಅಧೀರ್, ‘ಡೆರೆಕ್ ಒಬ್ರಯಾನ್ ವಿದೇಶಿಗ. ಅವರಿಗೆ ಬಹಳಷ್ಟು ವಿಷಯಗಳು ತಿಳಿದಿವೆ. ಅವರನ್ನು ಕೇಳಿ’ಎಂದು ಹೇಳಿದ್ದರು.

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಟಿಎಂಸಿ ನಡುವಿನ ಸೀಟು ಹಂಚಿಕೆ ಮಾತುಕತೆ ಫಲಪ್ರದವಾಗದಿದ್ದಕ್ಕೆ ತಮ್ಮನ್ನು ಟೀಕಿಸಿದ್ದ ಡೆರೆಕ್‌ ಕುರಿತಂತೆ ಅಧೀರ್ ಖಾರವಾಗಿ ಪ್ರತಿಕ್ರಿಯಿಸಿದ್ದರು.

‘ಇಂಡಿಯಾ ಮೈತ್ರಿಕೂಟ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡದಿರುವುದಕ್ಕೆ ಮೂರು ಕಾರಣಗಳಿವೆ. ಅವು, ಅಧೀರ್‌, ಅಧೀರ್‌ ಹಾಗೂ ಅಧೀರ್‌’ಎಂದು ರಾಜ್ಯಸಭಾ ಸದಸ್ಯ ಡೆರೆಕ್‌ ಒಬ್ರಯಾನ್ ಹೇಳಿದ್ದರು.

‘ಸ್ವತಃ ಅಧೀರ್‌ ರಂಜನ್‌ ಚೌಧರಿ ಅವರೇ ತಮ್ಮ ಪಕ್ಷದ ಸಮಾಧಿ ಅಗೆಯುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟಕ್ಕೆ ಸಾಕಷ್ಟು ವಿರೋಧಿಗಳಿದ್ದಾರೆ. ಮುಖ್ಯವಾಗಿ ಬಿಜೆಪಿ ನಾಯಕರು ಮತ್ತು ಚೌಧರಿ ಪದೇಪದೇ ಮೈತ್ರಿಕೂಟದ ವಿರುದ್ಧ ಮಾತನಾಡಿದ್ದಾರೆ’ ಎಂದು ಕುಟುಕಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.