ಮದುರೈ: ಲೋಕಸಭೆ ಚುನಾವಣೆಗಾಗಿ ಸೀಟುಹಂಚಿಕೆ ಮಾಡಿಕೊಳ್ಳುವ ಕುರಿತು ‘ಇಂಡಿಯಾ’ ಮೈತ್ರಿಕೂಟದ ಜೊತೆ ದಿ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ (ಎಐಎಫ್ಬಿ) ಪಕ್ಷವು ಶೀಘ್ರದಲ್ಲೇ ಮಾತುಕತೆ ನಡೆಸಲಿದೆ ಎಂದು ಪಕ್ಷದ ಅಧ್ಯಕ್ಷ ಪಿ.ವಿ. ಕಥಿರಾವಣ್ ಅವರು ಶನಿವಾರ ತಿಳಿಸಿದ್ದಾರೆ.
ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಚುನಾವಣಾ ಸಮಿತಿಯನ್ನು ಶನಿವಾರವಷ್ಟೇ ರಚಿಸಲಾಯಿತು. ‘ಇಂಡಿಯಾ’ ನಾಯಕರ ಜೊತೆ ಅವರು ಮಾತುಕತೆ ಆರಂಭಿಸಲಿದ್ದಾರೆ. ವಿಶೇಷವಾಗಿ ಡಿಎಂಕೆ ಅಧ್ಯಕ್ಷ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಜೊತೆ ಆದಷ್ಟು ಬೇಗ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದರು.
‘ತಮಿಳುನಾಡಿನ ಥೇನಿ ಕ್ಷೇತ್ರದಲ್ಲಿ ನಾವು ಜನಬೆಂಬಲ ಹೊಂದಿದ್ದೇವೆ. ಹೀಗಾಗಿ ಈ ಕ್ಷೇತ್ರವನ್ನು ನಮಗೇ ಬಿಟ್ಟುಕೊಡುವಂತೆ ಡಿಎಂಕೆಯನ್ನು ಒತ್ತಾಯಿಸುತ್ತೇವೆ’ ಎಂದು ಅವರು ಹೇಳಿದರು.
ಇದೇ ವೇಳೆ, ಪಕ್ಷದ ಅಧ್ಯಕ್ಷ ನರೇನ್ ಚಟರ್ಜಿ ಅವರ ನೇತೃತ್ವದಲ್ಲಿ ಎಐಎಫ್ಬಿಯ ಕೇಂದ್ರ ಸಮಿತಿಯು ಮದುರೈನಲ್ಲಿ ಸಭೆ ನಡೆಸಿತು. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಿಂದ ಜಿ. ದೇವರಾಜನ್ ಅವರನ್ನು ಬಿಡುಗಡೆಗೊಳಿಸಲು ನಿರ್ಧರಿಸಲಾಯಿತು. ಹೊಸ ಪ್ರಧಾನ ಕಾರ್ಯದರ್ಶಿಯನ್ನು ನೇಮಿಸುವವರೆಗೂ ಚಟರ್ಜಿ ಅವರೇ ಆ ಹುದ್ದೆ ನಿಭಾಯಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.