ದೇವರಿಯ(ಉತ್ತರ ಪ್ರದೇಶ): ‘ಇಂಡಿಯಾ ಒಕ್ಕೂಟಕ್ಕೆ ಉತ್ತರ ಪ್ರದೇಶದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಮತ ಎಣಿಕೆಯ ನಂತರ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಲಿದೆ. ಕೇಂದ್ರದಲ್ಲಿ ಸರ್ಕಾರ ಬದಲಾಗುವುದಲ್ಲದೇ ಚುನಾವಣಾ ಫಲಿತಾಂಶದ ನಂತರ ಮಾಧ್ಯಮಗಳೂ ಬದಲಾಗಲಿವೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದರು.
ಕಾಂಗ್ರೆಸ್ನ ದೇವರಿಯ ಲೋಕಸಭಾ ಅಭ್ಯರ್ಥಿ ಅಖಿಲೇಶ್ ಪ್ರತಾಪ್ ಸಿಂಗ್ ಮತ್ತು ಕುಶಿನಗರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಜಯ್ ಕುಮಾರ್ ಸಿಂಗ್ ಅವರನ್ನು ಬೆಂಬಲಿಸಿ ಜಂಟಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಉತ್ತರ ಪ್ರದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ’ ಎಂದರು.
ಬಿಜೆಪಿ ‘ಅಬ್ ಕಿ ಬಾರ್ 400 ಪಾರ್’ ಘೋಷಣೆಯ ಬಗ್ಗೆ ಮಾತನಾಡಿದ ಅಖಿಲೇಶ್, ‘ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 400 ಸ್ಥಾನಗಳನ್ನು ಬಿಟ್ಟರೆ ಉಳಿಯುವುದು 143 ಸ್ಥಾನಗಳು. ಘೋಷಣೆ ಮಾಡಿದವರು140 ಕೋಟಿ ಜನರಿಂದ 140 ಸ್ಥಾನಗಳನ್ನು ಪಡೆಯಲಿದ್ದಾರೆ’ ಎಂದು ಲೇವಡಿ ಮಾಡಿದರು.
‘ಬಿಜೆಪಿ ಹೇಳಿದ ಪ್ರತಿಯೊಂದು ಮಾತು ಮತ್ತು ಅದು ನೀಡಿದ ಪ್ರತಿ ಭರವಸೆ ಸುಳ್ಳಾಗಿದೆ. 10 ವರ್ಷಗಳ ಕಾಲ ಕೇಂದ್ರದಲ್ಲಿ, ಏಳು ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸಿದರೂ ಸಿಗಬೇಕಾದ ಸೌಲಭ್ಯಗಳು ಸಿಗದೆ ರೈತರು ಮತ್ತು ಯುವಕರ ಭವಿಷ್ಯ ಅತಂತ್ರವಾಗಿದೆ’ ಎಂದು ಕಿಡಿಕಾರಿದರು.
ದೇವರಿಯ ಮತ್ತು ಕುಶಿನಗರ ಲೋಕಸಭಾ ಕ್ಷೇತ್ರಗಳಿಗೆ ಜೂನ್ 1ರಂದು ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.