ADVERTISEMENT

‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ‘ಸೈಕಲ್‌’ ಚಿಹ್ನೆಯಿಂದ ಸ್ಪರ್ಧೆ: ಅಖಿಲೇಶ್

ಪಿಟಿಐ
Published 24 ಅಕ್ಟೋಬರ್ 2024, 2:30 IST
Last Updated 24 ಅಕ್ಟೋಬರ್ 2024, 2:30 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್    

ಲಖನೌ: ಮುಂಬರುವ ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ತಮ್ಮ ಪಕ್ಷದ ಚಿಹ್ನೆ( ಸೈಕಲ್‌) ಮೂಲಕವೇ ಎಲ್ಲಾ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಘೋಷಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅಖಿಲೇಶ್, ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷ ಗೆಲುವಿಗಾಗಿ ಒಟ್ಟಿಗೆ ಶ್ರಮಿಸಲಿವೆ. ಈ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು ಗೆಲುವಿನೊಂದಿಗೆ ಹೊಸ ಅಧ್ಯಾಯ ಬರೆಯಲಿದೆ ಎಂದು ಬರೆದುಕೊಂಡಿದ್ದಾರೆ.

ಸೀಟು ಹಂಚಿಕೆಯು ಯಾವುದೇ ಲೆಕ್ಕಚಾರದ ಅನ್ವಯ ನಿರ್ಧಾರವಾಗಿಲ್ಲ. ಕೇವಲ ಗೆಲುವಿನ ಮಂತ್ರದೊಂದಿಗೆ ನಿರ್ಧಾರವಾಗಿದೆ. ಈ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಕಾರ್ಯಕರ್ತರು ಹೊಸ ಸಂಕಲ್ಪದೊಂದಿಗೆ ಗೆಲುವಿಗಾಗಿ ಕೆಲಸ ಮಾಡಲಿದ್ದಾರೆ ಎಂದು ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ADVERTISEMENT

ದೇಶದ ಸಂವಿಧಾನ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಗೌರವಕ್ಕಾಗಿ ಈ ಉಪಚುನಾವಣೆಯಲ್ಲಿ ಹೋರಾಟ ನಡೆಸುತ್ತೇವೆ ಎಂದು ಅಖಿಲೇಶ್‌ ಯಾದವ್‌ ತಿಳಿಸಿದ್ದಾರೆ.

ಕಟೆಹಾರಿ (ಅಂಬೇಡ್ಕರ್ ನಗರ), ಕರ್ಹಾಲ್ (ಮೈನ್‌ಪುರಿ), ಮೀರಾಪುರ (ಮುಜಾಫರ್‌ನಗರ), ಗಾಜಿಯಾಬಾದ್, ಮಜ್ವಾನ್ (ಮಿರ್ಜಾಪುರ), ಸಿಶಾಮೌ (ಕಾನ್ಪುರ್ ನಗರ), ಖೈರ್ (ಅಲಿಗಢ), ಫುಲ್ಪುರ್ (ಪ್ರಯಾಗರಾಜ್), ಮತ್ತು ಕುಂದರ್ಕಿ (ಮೊರಾದಾಬಾದ್) ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ಸಮಾಜವಾದಿ ಪಕ್ಷ ಶಾಸಕ ಇರ್ಫಾನ್ ಸೋಲಂಕಿ ಅವರ ಅನರ್ಹತೆಯಿಂದಾಗಿ ಸಿಶಾಮೌ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಉಳಿದ 8 ಕ್ಷೇತ್ರಗಳ ಶಾಸಕರು ಲೋಕಸಭೆಗೆ ಆಯ್ಕೆಯಾದ ಕಾರಣ ತೆರವಾಗಿರುವ ಒಟ್ಟು ಒಂಬತ್ತು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ನವೆಂಬರ್‌ 13ರಂದು ಉತ್ತರ ಪ್ರದೇಶದ 9 ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯಲಿದ್ದು, ನವೆಂಬರ್‌ 23ರಂದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.