ADVERTISEMENT

ಪ್ರಾಯಶ್ಚಿತ್ತ ದೀಕ್ಷೆ ಪೂರ್ಣಗೊಳಿಸಿದ ಪವನ್‌ ಕಲ್ಯಾಣ್‌

ಪಿಟಿಐ
Published 2 ಅಕ್ಟೋಬರ್ 2024, 12:14 IST
Last Updated 2 ಅಕ್ಟೋಬರ್ 2024, 12:14 IST
<div class="paragraphs"><p>ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್ ವ್ರತಧಾರಿಯಾಗಿ ಬುಧವಾರ ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು</p></div>

ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್ ವ್ರತಧಾರಿಯಾಗಿ ಬುಧವಾರ ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದರು

   

– ಪಿಟಿಐ ಚಿತ್ರ

ತಿರುಪತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಬುಧವಾರ ಇಲ್ಲಿನ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ, ಬೆಟ್ಟದ ದೇಗುಲದಲ್ಲಿ ಹಿಂದಿನ ವೈಎಸ್‌ಆರ್‌ಸಿಪಿಯ ಸರ್ಕಾರದ ಅವಧಿಯಲ್ಲಿ ಆಗಿರುವ ಪಾಪಗಳ ಪ್ರಾಯಶ್ಚಿತ್ತಕ್ಕೆ ಕೈಗೊಂಡ 11 ದಿನಗಳ ವ್ರತವನ್ನು (ಪ್ರಾಯಶ್ಚಿತ್ತ ದೀಕ್ಷೆ) ಪೂರ್ಣಗೊಳಿಸಿದರು.

ADVERTISEMENT

ಪವನ್‌ ಕಲ್ಯಾಣ್‌ ಜತೆಗೆ ಅವರ ಪುತ್ರಿಯರಾದ ಆಧ್ಯಾ ಕೊನಿಡೇಲಾ ಮತ್ತು ಪಲೀನಾ ಅಂಜನಿ ಕೊನಿಡೇಲಾ ಜೊತೆಗಿದ್ದರು. ಸನಾತನ ಧರ್ಮ (ಹಿಂದೂ ಧರ್ಮ) ರಕ್ಷಣೆಗಾಗಿ 11 ದಿನಗಳ ವ್ರತ ಕೈಗೊಂಡಿರುವ ಪವನ್ ಕಲ್ಯಾಣ್ ಬುಧವಾರ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದು ವ್ರತವನ್ನು ಸಂಪನ್ನಗೊಳಿಸಿದರು ಎಂದು ಅಧಿಕೃತ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಜನಸೇನಾ ಅಧ್ಯಕ್ಷರೂ ಆದ ಪವನ್ ಕಲ್ಯಾಣ್ ಅವರು ತಿರುಮಲ ಶ್ರೀವಾರಿ (ದೇವರ) ದರ್ಶನ ಪಡೆದರು. ಅವರು ಸದ್ಯ ದೇವಸ್ಥಾನಕ್ಕೆ ಮೂರು ದಿನಗಳ ಭೇಟಿ ಕೈಗೊಂಡಿದ್ದಾರೆ. ವಾರಾಹಿ ಘೋಷಣೆ ಪುಸ್ತಕವನ್ನು ದೇವರ ಸನ್ನಿಧಿಗೆ ಕೊಂಡೊಯ್ದಿದ್ದು, ಗುರುವಾರ ತಿರುಪತಿಯಲ್ಲಿ ನಡೆಯಲಿರುವ ಸಭೆಯಲ್ಲಿ ಅದರಲ್ಲಿನ ವಿಷಯ ಬಹಿರಂಗಪಡಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇವರ ದರ್ಶನದ ನಂತರ ಪವನ್‌ ಅವರು ಅನ್ನದಾನ ಕೇಂದ್ರದಲ್ಲಿ ಪ್ರಸಾದ ಸೇವಿಸಿದರು. ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು, ಕಲ್ಯಾಣ್ ಅವರ ಕಿರಿಯ ಪುತ್ರಿ ಪಲೀನಾ ಅಂಜನಿ ಕೊನಿಡೇಲಾ ಅವರು ತಿರುಮಲ ದೇವಸ್ಥಾನದ ವೆಂಕಟೇಶ್ವರನ ಮೇಲೆ ನಂಬಿಕೆಯಿರುವುದಾಗಿ ಘೋಷಣೆ ಮಾಡಿದರು. ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) ನಿಯಮದ ಪ್ರಕಾರ, ಹಿಂದೂಯೇತರರು ದೇವಸ್ಥಾನಕ್ಕೆ ಭೇಟಿ ನೀಡುವ ಮೊದಲು ದೇವರಲ್ಲಿ ತಮ್ಮ ನಂಬಿಕೆಯನ್ನು ಘೋಷಿಸಬೇಕು. ಟಿಟಿಡಿ ಸಿಬ್ಬಂದಿ ನೀಡಿದ ದಾಖಲೆಗಳಿಗೆ ಪಲೀನಾ ಸಹಿ ಹಾಕಿದ್ದಾರೆ. ಪಲೀನಾ ಅಂಜನಿ ಅಪ್ರಾಪ್ತ ವಯಸ್ಸಿನವಳಾಗಿರುವುದರಿಂದ ಪವನ್ ಕಲ್ಯಾಣ್ ದಾಖಲೆಗಳನ್ನು ಅನುಮೋದಿಸಿದರು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.