ADVERTISEMENT

ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿಯ ಎನ್‌ಕೌಂಟರ್‌

ಪಿಟಿಐ
Published 23 ಸೆಪ್ಟೆಂಬರ್ 2024, 22:25 IST
Last Updated 23 ಸೆಪ್ಟೆಂಬರ್ 2024, 22:25 IST
.
.   

ಮುಂಬೈ: ಬದ್ಲಾಪುರದಲ್ಲಿ ನಡೆದ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ಅಕ್ಷಯ್‌ ಅಣ್ಣಾ ಶಿಂದೆ ಸೋಮವಾರ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.

ಎರಡನೇ ಪತ್ನಿ ಸಲ್ಲಿಸಿದ್ದ ಅಸ್ವಾಭಾವಿಕ ಲೈಂಗಿಕತೆ ಕುರಿತ ಪ್ರಕರಣದ ತನಿಖೆಗಾಗಿ ಅಕ್ಷಯ್‌ ಶಿಂದೆಯನ್ನು ತಲೋಜಾ ಕಾರಾಗೃಹದಿಂದ ಬದ್ಲಾಪುರಕ್ಕೆ ಕರೆದೊಯ್ಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಮುಂಬ್ರಾ ಬೈಪಾಸ್‌ ಸಮೀಪ ಪೊಲೀಸ್‌ ವ್ಯಾನ್‌ ಒಳಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಪ್ರಾಥಮಿಕ ವರದಿ ಪ್ರಕಾರ, ವ್ಯಾನ್‌ನಲ್ಲಿ ಕುಳಿತಿದ್ದ ಅಕ್ಷಯ್‌ ಶಿಂದೆ, ಸಹಾಯಕ ಪೊಲೀಸ್‌ ಇನ್‌ಸ್ಪೆಕ್ಟರ್‌ ನೀಲೇಶ್‌ ಮೋರೆ ಅವರ ಬಳಿ ಇದ್ದ ಪಿಸ್ತೂಲ್ ಕಸಿದುಕೊಂಡು ಮೂರು ಸುತ್ತು ಗುಂಡು ಹಾರಿಸಿದ. ಮೋರೆ ಅವರಿಗೂ ಗುಂಡೇಟು ತಗುಲಿತು. ಈ ಸಂದರ್ಭದಲ್ಲಿ ಮತ್ತೊಬ್ಬ ಪೊಲೀಸ್ ಅಧಿಕಾರಿ ನಡೆಸಿದ ಗುಂಡಿನ ದಾಳಿಯಲ್ಲಿ ಅಕ್ಷಯ್‌  ತೀವ್ರ ಗಾಯಗೊಂಡಿದ್ದ. ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಆರೋಪಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.

ADVERTISEMENT

ಶಾಲೆಯ ಸ್ವಚ್ಛತಾ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದ ಅಕ್ಷಯ್‌, ನರ್ಸರಿಯ ಇಬ್ಬರು ಬಾಲಕಿಯರ ಮೇಲೆ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಕೇಳಿಬಂದಿತ್ತು. ಪ್ರಕರಣವು ಮಹಾರಾಷ್ಟ್ರದಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.