ADVERTISEMENT

ಬದ್ಲಾಪುರ ಲೈಂಗಿಕ ದೌರ್ಜನ್ಯ ಆರೋಪಿ ಎನ್‌ಕೌಂಟರ್: ಮಹಾರಾಷ್ಟ್ರ ಸಿಐಡಿಯಿಂದ ತನಿಖೆ 

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 16:20 IST
Last Updated 24 ಸೆಪ್ಟೆಂಬರ್ 2024, 16:20 IST
   

ಮುಂಬೈ: ಬದ್ಲಾಪುರದಲ್ಲಿ ನಡೆದಿದ್ದ ಮಕ್ಕಳ ವಿರುದ್ಧದ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್‌ ಶಿಂದೆ ಎನ್‌ಕೌಂಟರ್‌ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ವಿರೋಧಪಕ್ಷಗಳು ಆಗ್ರಹಿಸುತ್ತಿರುವ ಬೆನ್ನಲ್ಲೇ, ಮಹಾರಾಷ್ಟ್ರ ಅಪರಾಧ ತನಿಖಾ ಸಂಸ್ಥೆಯು (ಸಿಐಡಿ) ಪ್ರಕರಣದ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಆತನ ಎರಡನೇ ಪತ್ನಿ ಸಲ್ಲಿಸಿದ್ದ ಅಸ್ವಾಭಾವಿಕ ಲೈಂಗಿಕತೆ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಮುಂಬೈನ ತಾಲೋಜ ಜೈಲಿನಿಂದ ಬದ್ಲಾಪುರಕ್ಕೆ ಸೋಮವಾರ ಸಂಜೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಆತನ ಎನ್‌ಕೌಂಟರ್‌ ನಡೆದಿತ್ತು.

ಇದು ಕಸ್ಟಡಿ ಸಾವು ಆದ್ದರಿಂದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಅಕ್ಷಯ್‌ನನ್ನು ಕರೆದೊಯ್ಯಲಾಗುತ್ತಿದ್ದ ಪೊಲೀಸ್‌ ವಾಹನವನ್ನು ವಿಧಿವಿಜ್ಞಾನ ತಜ್ಞರ ತಂಡವು ಈಗಾಗಲೇ ಪರಿಶೀಲಿಸಿದೆ. ಎನ್‌ಕೌಂಟರ್‌ ನಡೆದ ಮುಂಬ್ರಾ ಬೈಪಾಸ್‌ಗೂ ತೆರಳಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಮತ್ತು ವಾಹನದಲ್ಲಿದ್ದ ಪೊಲೀಸರ ಹೇಳಿಕೆಗಳನ್ನೂ ದಾಖಲಿಸಿಕೊಳ್ಳಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಶಾಲೆಯ ಸ್ವಚ್ಛತಾ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದ ಅಕ್ಷಯ್‌, ನರ್ಸರಿಯ ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಆರೋಪ ಕೇಳಿಬಂದಿತ್ತು. ಪ್ರಕರಣದ ವಿರುದ್ಧ ಸಾರ್ವಜನಿಕರು ಆಕ್ರೋಶಕ್ಕೆ ವ್ಯಕ್ತಪಡಿಸಿದ್ದರು.

ಅಕ್ಷಯ್‌ ವಿರುದ್ಧ ಆರೋಪ: ಎನ್‌ಕೌಂಟರ್‌ ಬೆನ್ನಲ್ಲೇ ಅಕ್ಷಯ್‌ ವಿರುದ್ಧ ಕೊಲೆಗೆ ಯತ್ನ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ಜೊತೆಗೆ, ಆತನ ಸಾವಿಗೆ ಸಂಬಂಧಿಸಿ ‘ಆಕಸ್ಮಿಕ ಸಾವು’ ಎಂಬ ಪ್ರಕರಣವನ್ನೂ ದಾಖಲಿಸಲಾಗಿದೆ.

ಅಕ್ಷಯ್‌ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕ್ಯಾಮರಾಗಳ ಉಪಸ್ಥಿತಿಯಲ್ಲಿ ಕಲ್ವಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

- ಸತ್ಯಾಂಶ ಮುಚ್ಚಿಡುವ ಸಲುವಾಗಿ ಉನ್ನತ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಅದರ ಭಾಗವಾಗಿ ಪೊಲೀಸರು ಎನ್‌ಕೌಂಟರ್‌ ನಡೆಸಿರಬಹುದೇ?
ನಾನಾ ಪಟೋಲೆ ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ

ಶಾಲಾ ಆಡಳಿತ ರಕ್ಷಿಸಲು ಸಂಚು ಆರೋಪ

ಮಹಾರಾಷ್ಟ್ರದ ಬದ್ಲಾಪುರದಲ್ಲಿ ನಡೆದ ಇಬ್ಬರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಅಕ್ಷಯ್‌ ಶಿಂದೆಯನ್ನು ಪೊಲೀಸರು ಎನ್‌ಕೌಂಟರ್‌ ಮಾಡುವ ಮೂಲಕ ಹತ್ಯೆಗೈದಿದ್ದನ್ನು ರಾಜ್ಯದ ವಿರೋಧಪಕ್ಷಗಳ ಒಕ್ಕೂಟ ಮಹಾ ವಿಕಾಸ ಅಘಾಡಿಯು (ಎಂವಿಎ) ವಿರೋಧಿಸಿದೆ.

ಅಕ್ಷಯ್‌ ಹತ್ಯೆ ಹಿಂದೆ ಸಂಚು ನಡೆದಿದೆ ಎಂದು ಆರೋಪಿಸಿರುವ ಎಂವಿಎ ಈ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದೆ. ಮುಖ್ಯ ಆರೋಪಿಗಳನ್ನು (ಶಾಲಾ ಆಡಳಿತ) ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ರಕ್ಷಿಸುತ್ತಿದ್ದಾರೆ. ಹಾಗಾಗಿ ಮುಖ್ಯ ಸಾಕ್ಷಿಯನ್ನು ಹತ್ಯೆಗೈದಿದ್ದಾರೆ ಎಂಬ ಶಂಕೆ ಮೂಡಿದೆ ಎಂದು ವಿರೋಧಪಕ್ಷಗಳು ಆರೋಪಿಸಿವೆ. ‘ಪೊಲೀಸ್‌ ವಾಹನದಲ್ಲಿ ಅಕ್ಷಯ್‌ ಶಿಂದೆಯನ್ನು ಕರೆದೊಯ್ಯುವಾಗ ಆತ ಮೊದಲಿಗೆ ಪೊಲೀಸರ ಮೇಲೆ ಗುಂಡುಹಾರಿಸಲು ಯತ್ನಿಸಿದ ಹಾಗಾಗಿ ಆತನ ಮೇಲೆ ಗುಂಡು ಹಾರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಆತನ ಮುಖಮುಚ್ಚಿ ಕೈಗಳನ್ನು ಹಿಂದಕ್ಕೆ ಕಟ್ಟಿ ವಾಹನದಲ್ಲಿ ಕರೆದೊಯ್ಯಲಾಗಿದೆ. ಆತ ಹೇಗೆ ಗುಂಡು ಹಾರಿಸಲು ಸಾಧ್ಯ’ ಎಂದು ಶಿವಸೇನಾ (ಯುಬಿಟಿ) ರಾಜ್ಯಸಭೆ ಸಂಸದ ಸಂಜಯ್‌ ರಾವುತ್‌ ಪ್ರಶ್ನಿಸಿದ್ದಾರೆ.  ಪ್ರಕರಣ ನಡೆದ ಬದ್ಲಾಪುರ ಶಾಲೆಯ ಟ್ರಸ್ಟಿಗಳು ಎಲ್ಲಿದ್ದಾರೆ ಎಂದು ತಿಳಿಯಬೇಕಿದೆ ಎಂದು ಹೇಳಿರುವ ಶಿವಸೇನಾ (ಯುಬಿಟಿ) ಶಾಸಕ ಆದಿತ್ಯ ಠಾಕ್ರೆ ‘ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸಿದವರನ್ನು ಸರ್ಕಾರವು ಗ್ಯಾಂಗ್‌ಸ್ಟರ್‌ಗಳ ರೀತಿ ನಡೆಸಿಕೊಂಡಿತು. ಆದರೆ ಶಾಲೆಯ ಟ್ರಸ್ಟಿಗಳನ್ನು ರಕ್ಷಿಸುತ್ತಿದೆ’ ಎಂದಿದ್ದಾರೆ.  ಎನ್‌ಕೌಂಟರ್‌ ಕುರಿತು ಪ್ರತಿಕ್ರಿಯಿಸಿರುವ ಎನ್ಎಸ್‌ಪಿ (ಎಸ್‌ಪಿ) ಶಾಸಕ ಜಿತೇಂದ್ರ ಅವ್ಹದ್‌ ಎನ್‌ಕೌಂಟರ್‌ಗೆ ಪೊಲೀಸರು ನೀಡುತ್ತಿರುವ ಕಾರಣ ಆಧಾರರಹಿತವಾಗಿದೆ. ಕೈಗಳಿಗೆ ಬೇಡಿ ಹಾಕಿಸಿಕೊಂಡಿರುವ ವ್ಯಕ್ತಿ ಬಂದೂಕು ಕಸಿದು ಗುಂಡುಹಾರಿಸಲು ಹೇಗೆ ಸಾಧ್ಯ. ಅದುಕೂಡ ಸುತ್ತಲು ಐವರು ಪೊಲೀಸರು ಇರುವಾಗ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.