ADVERTISEMENT

ಬದ್ಲಾಪುರ ಪ್ರಕರಣ: ಶಾಲಾ ಟ್ರಸ್ಟಿಗಳನ್ನು ಬಂಧಿಸದ ಪೊಲೀಸರ ಕ್ರಮಕ್ಕೆ HC ಕಿಡಿ

ಪಿಟಿಐ
Published 1 ಅಕ್ಟೋಬರ್ 2024, 10:40 IST
Last Updated 1 ಅಕ್ಟೋಬರ್ 2024, 10:40 IST
<div class="paragraphs"><p>ಬಾಂಬೆ ಹೈಕೋರ್ಟ್</p></div>

ಬಾಂಬೆ ಹೈಕೋರ್ಟ್

   

ಮುಂಬೈ: ಮಹಾರಾಷ್ಟ್ರದ ಬದ್ಲಾಪುರದಲ್ಲಿ 4 ಹಾಗೂ 5 ವರ್ಷದ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪಿಗಳಾದ ಘಟನೆ ನಡೆದ ಶಾಲೆಯ ಟ್ರಸ್ಟಿಗಳನ್ನು ಬಂಧಿಸಲು ಸಾಧ್ಯವಾಗದ ವಿಶೇಷ ತನಿಖಾ ತಂಡ (ಎಸ್‌ಐಟಿ) ಅಸಮರ್ಥ ಎಂದು ಬಾಂಬೆ ಹೈಕೋರ್ಟ್‌ ಕಿಡಿಕಾರಿದೆ.

ನ್ಯಾ. ರೇವತಿ ಮೋಹಿತೆ ಡೇರೆ ಹಾಗೂ ನ್ಯಾ. ಪೃಥ್ವಿರಾಜ್ ಚವಾಣ್‌ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿ, ‘ಕೆಲವೊಂದು ಪ್ರಕರಣಗಳಲ್ಲಿ ಹದ್ದು ಮೀರಿ ಆರೋಪಿಯನ್ನು ಬಂಧಿಸುವ ಪೊಲೀಸರು, ಇಂಥ ಪ್ರಕರಣಗಳಲ್ಲಿ ನಿಷ್ಕ್ರಿಯರಾಗಿರುವುದು ಅಚ್ಚರಿ ಮೂಡಿಸಿದೆ’ ಎಂದಿದೆ.

ADVERTISEMENT

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಸ್ವಯಂ ಪ್ರೇರಿತ ದೂರನ್ನು ಹೈಕೋರ್ಟ್ ದಾಖಲಿಸಿತ್ತು. ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಶಾಲೆಯ ಶೌಚಾಲಯದಲ್ಲಿ ಇಬ್ಬರು ಬಾಲಕಿಯರ ಮೇಲೆ, ಅಲ್ಲಿನ ಸಹಾಯಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ.

ಆರೋಪಿ ಅಕ್ಷಯ್ ಶಿಂದೆ ಎಂಬಾತನನ್ನು ಬಂಧಿಸಿದ್ದ ಪೊಲೀಸರು, ನಂತರ ಸೆ. 23ರಂದು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು. ಪ್ರಕರಣದಲ್ಲಿ ಶಾಲೆಯ ಇಬ್ಬರು ಟ್ರಸ್ಟಿಗಳ ವಿರುದ್ಧವೂ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಐಜಿಪಿ ಶ್ರೇಣಿಯ ಪೊಲೀಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ದಳವನ್ನು ರಚಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಹೇಳಿತ್ತು.

‘ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಸರ್ಕಾರ ಪರ ವಕೀಲರು ನ್ಯಾಯಾಲಯಕ್ಕೆ ಹೇಳಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ಅ. 23ಕ್ಕೆ ಪೀಠ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.