ಸುಲ್ತಾನಪುರ(ಉತ್ತರ ಪ್ರದೇಶ): ಕೋವಿಡ್–19 ನಿರ್ಬಂಧಗಳ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ವಿರುದ್ಧ ಇಲ್ಲಿನ ಸಂಸದರ–ಶಾಸಕರ ನ್ಯಾಯಾಲಯ ಗುರುವಾರ ಬಂಧನ ವಾರಂಟ್ ಹೊರಡಿಸಿದೆ.
‘ಸಂಜಯ್ ಸಿಂಗ್ ಅವರು ಹಲವು ಬಾರಿ ವಿಚಾರಣೆಗೆ ಗೈರಾಗಿರುವ ಹಿನ್ನೆಲೆಯಲ್ಲಿ, ನ್ಯಾಯಾಧೀಶ ಶುಭಂ ವರ್ಮಾ ಅವರು ಸಿಂಗ್ ವಿರುದ್ಧ ವಾರಂಟ್ ಜಾರಿ ಮಾಡಿದ್ದಾರೆ’ ಎಂದು ವಿಶೇಷ ಸರ್ಕಾರಿ ವಕೀಲ ವೈಭವ್ ಪಾಂಡೆ ತಿಳಿಸಿದ್ದಾರೆ.
2021ರ ಏಪ್ರಿಲ್ 13ರಂದು ಸಂಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿತ್ತು.
‘ಪರವಾನಗಿ ಇಲ್ಲದೆಯೇ ಸಂಜಯ್ ಸಿಂಗ್ ಅವರು ಸುಲ್ತಾನಪುರ ಜಿಲ್ಲೆಯ ಹಸನ್ಪುರದಲ್ಲಿ ಆಗ ನಡೆಸಿದ್ದ ಸಭೆಯಲ್ಲಿ 50–60 ಜನರು ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ, ಸಾಂಕ್ರಾಮಿಕ ರೋಗಗಳ ಕಾಯ್ದೆ ಉಲ್ಲಂಘನೆ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು’ ಎಂದು ಪಾಂಡೆ ತಿಳಿಸಿದ್ದಾರೆ.
ವಿಚಾರಣೆ ನಡೆಸಿದ್ದ ಪೊಲೀಸರು, ಸಂಜಯ್ ಸಿಂಗ್ ಹಾಗೂ ಮಕ್ಸೂದ್ ಅನ್ಸಾರಿ, ಸಲೀಮ್ ಅನ್ಸಾರಿ, ಜಗದೀಶ್ ಯಾದವ್, ಮಕ್ಸುದ್ ಸುಕಾಯ್, ಧರ್ಮರಾಜ್, ಜೀಶನ್, ಸೆಹಬನ್, ಸಿಕಂದರ್, ಜಲೀಲ್ ಹಾಗೂ ಅಜಯ್ ಎಂಬುವವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಜೂನ್ 29ಕ್ಕೆ ಮುಂದೂಡಿದೆ ಎಂದೂ ಪಾಂಡೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.