ಮುಂಬೈ: ಜೂನ್ 25ರಂದು ‘ಸಂವಿಧಾನ ಹತ್ಯಾ ದಿವಸ್’ ಆಚರಿಸುವ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ತೀರ್ಮಾನವನ್ನು ಶಿವಸೇನಾ (ಯುಟಿಬಿ) ನಾಯಕ ಸಂಜಯ್ ರಾವುತ್ ಟೀಕಿಸಿದ್ದಾರೆ.
ಬಾಳಾಸಾಹೇಬ್ ಠಾಕ್ರೆ ಹಾಗೂ ಆರ್.ಎಸ್.ಎಸ್ ತುರ್ತು ಪರಿಸ್ಥಿತಿಗೆ ಬಹಿರಂಗ ಬೆಂಬಲ ಘೋಷಿಸಿತ್ತು ಎಂದು ಹೇಳಿದ್ದಾರೆ. ಅವರು ಮಾಧ್ಯಮಗಳೊಂದಿಗೆ ಮಾತನಾಡುವ ವಿಡಿಯೊವನ್ನು ಸುದ್ದಿ ಸಂಸ್ಥೆ ‘ಎಎನ್ಐ’ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
ಸಂವಿಧಾನ ಹತ್ಯಾ ದಿನಾಚರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅದಾಗಿ 50 ವರ್ಷಗಳು ಕಳೆದಿವೆ. ಜನ ತುರ್ತು ಪರಿಸ್ಥಿತಿಯನ್ನು ಮರೆತಿದ್ದಾರೆ’ ಎಂದು ಹೇಳಿದ್ದಾರೆ.
‘ತುರ್ತು ಪರಿಸ್ಥಿತಿಯನ್ನು ಯಾಕೆ ಹೇರಲಾಯಿತು? ಕೆಲವರು ದೇಶದಲ್ಲಿ ಅರಾಜಕತೆ ಸೃಷ್ಠಿಸಲು ಯತ್ನಿಸಿದ್ದರು. ಸರ್ಕಾರದ ಯಾವುದೇ ಆದೇಶಗಳನ್ನು ಪಾಲಿಸಬಾರದು ಎಂದು ಸೈನಿಕರು ಹಾಗೂ ಸೇನೆಗೆ ರಾಮ್ಲೀಲಾ ಮೈದಾನದಲ್ಲಿ ಬಹಿರಂಗ ಕರೆ ನೀಡಲಾಗಿತ್ತು. ಇಂಥ ಪರಿಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದರೂ, ತುರ್ತು ಪರಿಸ್ಥಿತಿ ಹೇರುತ್ತಿದ್ದರು’ ಎಂದು ಹೇಳಿದ್ದಾರೆ.
‘ಅದು ರಾಷ್ಟ್ರೀಯ ಸುರಕ್ಷತೆಯ ವಿಷಯವಾಗಿತ್ತು. ದೇಶದಲ್ಲಿ ಕೆಲವರು ಬಾಂಬ್ ತಯಾರಿಸಿ, ಅಲ್ಲಲ್ಲಿ ಸ್ಫೋಟಿಸುತ್ತಿದ್ದರು. ಬಾಳಾಸಾಹೇಬ್ ಠಾಕ್ರೆ ಆ ವೇಳೆ ತುರ್ತು ಪರಿಸ್ಥಿತಿಗೆ ಬಹಿರಂಗ ಬೆಂಬಲ ಘೋಷಿಸಿದ್ದರು. ಆರ್.ಎಸ್.ಎಸ್ ಕೂಡ ಬೆಂಬಲ ಸೂಚಿಸಿತ್ತು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.