ಕೋಲ್ಕತ್ತ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಮ್ ಅನರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳು ಭಾನುವಾರ ದಕ್ಷಿಣ 24 ಪರಗಣ ಜಿಲ್ಲೆಯ ಕಾಲುವೆಯೊಂದರ ಬದಿಯಲ್ಲಿ ಮನುಷ್ಯ ಮೂಳೆಗಳನ್ನು ವಶಕ್ಕೆ ಪಡೆದಿದ್ದಾರೆ.
ನೇಪಾಳ ಪೊಲೀಸರು ಸೆರೆ ಹಿಡಿದು ನಂತರ ಭಾರತದ ವಶಕ್ಕೆ ನೀಡಿದ ಪ್ರಕರಣದ ಪ್ರಮುಖ ಶಂಕಿತ ಮೊಹಮ್ಮದ್ ಸಿಯಾಮ್ ಹುಸೇನ್ ವಿಚಾರಣೆಯ ನಂತರ ಪೊಲೀಸರು ಕೃಷ್ಣಮಟಿ ಗ್ರಾಮದ ಬಾಗ್ಜೋಲಾ ಕಾಲುವೆಯ ಬಳಿ ಅಸ್ಥಿಪಂಜರ ವಶಕ್ಕೆ ಪಡೆದರು ಎಂದು ಹೇಳಿದ್ದಾರೆ.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೊಯ್ಗಂಜ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಕಾಲುವೆ ಬಳಿ ವಶಕ್ಕೆ ಪಡೆದ ಮೂಳೆಗಳು ಮನುಷ್ಯರದ್ದೇ ಎಂದು ವೈದ್ಯಕೀಯ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ. ಮೃತದೇಹದ ಉಳಿದ ಭಾಗಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಮುಂದಿನ ವಾರ ಮೃತ ಸಂಸದರ ಮಗಳು ಕೋಲ್ಕತ್ತಕ್ಕೆ ಬರಲಿದ್ದು, ಮೂಳೆಗಳ ಡಿಎನ್ಎ ಪರೀಕ್ಷೆಗೆ ನೆರವಾಗಲಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.