ಕೋಲ್ಕತ್ತ: ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಪೊಲೀಸ್ ತಂಡ ಭಾನುವಾರ ಸಂಜೆ ಕೋಲ್ಕತ್ತಕ್ಕೆ ಆಗಮಿಸಿದೆ.
ಅನಾರ್ ಅವರ ಕೊಲೆ ಬಾಂಗ್ಲಾದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಅಲ್ಲಿನ ಪೊಲೀಸರೂ ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರ ಸಹಕಾರವನ್ನು ಅವರು ಕೇಳಿದ್ದಾರೆ.
ಪ್ರಕರಣದಲ್ಲಿ ಇದುವರೆಗೆ ಸಿಐಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವರನ್ನು ವಿಚಾರಣೆ ನಡೆಸಲು ಬಾಂಗ್ಲಾ ಪೊಲೀಸ್ ತಂಡ ಇಚ್ಛೆ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದ ಸಂಸದ ಅನ್ವರುಲ್ ಅಜೀಂ ಅನಾರ್ ಅವರು ಚಿಕಿತ್ಸೆಗೆಂದು ಕೋಲ್ಕತ್ತಕ್ಕೆ ಬಂದು ಮೇ 18ರಂದು ಕಾಣೆಯಾಗಿದ್ದರು. ಅವರ ಮೃತದೇಹ ಮೇ 22ರಂದು ಕೋಲ್ಕತ್ತದ ಅಪಾರ್ಟ್ಮೆಂಟ್ ಒಂದರಲ್ಲಿ ಪತ್ತೆಯಾಗಿತ್ತು. ಅಂದೇ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಾಂಗ್ಲಾ ಪೊಲೀಸರು ಬಂಧಿಸಿದ್ದರು. ಪಶ್ಚಿಮ ಬಂಗಾಳದಲ್ಲಿ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
‘ಇದೊಂದು ಯೋಜಿತ ಹತ್ಯೆ. ಅನ್ವರುಲ್ ಅವರ ಆಪ್ತರಾದ ಅಮೆರಿಕದಲ್ಲಿರುವ ಪ್ರಜೆಯೊಬ್ಬರು ಸುಮಾರು ₹5 ಕೋಟಿ ಹಣ ಪಾವತಿಸಿ ಅನ್ವರುಲ್ ಅವರನ್ನು ಹತ್ಯೆ ಮಾಡಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಸಿಐಡಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.